ನಿಷ್ಠುರತೆಯ ನೋಂಪು ಜಿ.ರಾಜಶೇಖರ್ ೭೦: ಗೆಳೆಯ ರಾಜಶೇಖರ್ ಕುರಿತು …

grheader-rajaramdivderspaರಾಜಶೇಖರ್ ಕುರಿತು ಬರೆಯುದೆಂದರೆ ಅದು ಸ್ವಲ್ಪ ಕಷ್ಟದ ಕೆಲಸವೇ. ಏಕೆಂದರೆ ಬೇಜವಾಬ್ದಾರಿಯಾಗಿ ಅವರನ್ನು ಹೊಗಳಿದರೆ ಅದನ್ನು ಅವರು ಸಹಿಸುವುದಿಲ್ಲ. ಅವರಿಂದ ಹಾಗೆ ಬೈಯಿಸಿಕೊಳ್ಳಲು ನನಗೆ ಇಷ್ಟವೂ ಇಲ್ಲ. ಮುಖಸ್ತುತಿ ಎನಿಸಿಕೊಳ್ಳದ ರೀತಿಯಲ್ಲಿ ಬರೆಯುವುದು ಅಷ್ಟು ಸುಲಭವಲ್ಲ. ಹಾಗಿದ್ದೂ, ಅವರ ವ್ಯಕ್ತಿತ್ವ ಮತ್ತು ವಿಚಾರಗಳ ಕುರಿತು ನನ್ನ ಕೆಲವು ಪ್ರಾಮಾಣಿಕವಾದ ಮಾತುಗಳನ್ನು ಮುಂದಿಡುತ್ತಿದ್ದೇನೆ.

ರಾಜಶೇಖರ್, ನನಗೆ ಸುಮಾರು 35 ವರ್ಷಗಳಿಂದ ಗೊತ್ತು. ಅವರನ್ನು ನಾನು ಮೊದಲು ಭೇಟಿಯಾದದ್ದು 1980-81ರಲ್ಲಿ. ಬನಾರಸ್ನಿಂದ ನನ್ನ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡು ಬಂದ ಹೊಸತರಲ್ಲಿ ನಾನು ರಾಜಶೇಖರ್ರನ್ನು ಉಡುಪಿಯಲ್ಲಿ ಯಾವುದೋ ಸಾಹಿತ್ಯಕ್ಕೆ ಸಂಬಂಧಿಸಿದ ಸಭೆ ಯಾ ಸಮಾರಂಭದಲ್ಲಿ ಮೊದಲಿಗೆ ನೋಡಿದೆ. ಆಮೇಲೆ ಅವರನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಆಗಾಗ್ಗೆ ಭೇಟಿ ಆಗುತ್ತಿದ್ದೆ. ಅನವಶ್ಯಕವಾಗಿ ಯಾವುದೇ ವಿಷಯದಲ್ಲಿ ಮೂಗು ತೂರಿಸದ, ಕೇಳಿದ ಪ್ರಶ್ನೆಗಳಿಗಷ್ಟೇ ಉತ್ತರಿಸುವ ಮಿತಭಾಷಿಯಾದ ರಾಜಶೇಖರ್ರನ್ನು ನಾನು ಮೊದ ಮೊದಲಿಗೆ ದುರಹಂಕಾರಿ ಎಂದೇ ತಿಳಿದುಕೊಂಡಿದ್ದೆ.

_dsc7716-1280x854divderspaಅವರ ಜೊತೆ ನನ್ನ ಪರಿಚಯ ನಿಕಟವಾದಂತೆಲ್ಲಾ ಅವರು ಮೂಲತಃ ಎಷ್ಟು ಮೃದು ಸ್ವಭಾವದವರು ಎಂದು ನನಗೆ ಅರಿವಾಗತೊಡಗಿತು. ಈ ನಡುವೆ ಆಳವಾದ ಸಂಶೋಧನೆಯಿಂದ ಹೊರಬಂದ ಅವರ ‘ಕಾಗೋಡು ಸತ್ಯಾಗ್ರಹ’ ಎನ್ನುವ ಪುಸ್ತಕವನ್ನು ಓದಿದ ಮೇಲೆ ಮತ್ತು ಅನೇಕ ವಿಚಾರ ಸಂಕಿರಣಗಳಲ್ಲಿ ಅವರ ಪ್ರಬುದ್ಧ ಪ್ರಬಂಧಗಳನ್ನು ಕೇಳಿಸಿಕೊಂಡ ಮೇಲೆ ರಾಜಶೇಖರ್ ಯಾವ ತರಹದ ಚಿಂತನಶೀಲ ವ್ಯಕ್ತಿ ಎನ್ನುವ ಅರಿವು ನನಗಾಗ ತೊಡಗಿತು.

ಬಹುಶಃ 80 ಹಾಗೂ 90ರ ದಶಕಗಳಲ್ಲಿ ಅವರ ಜೊತೆಗಿನ ನಿಕಟ ಸಂಪರ್ಕ ನನಗಿದ್ದುದರಿಂದ ಅವರ ಆಳವಾದ ಮಾನವೀಯ ಸದ್ಗುಣಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ರಾಜಶೇಖರ್ ಮೂಲತಃ ಒಬ್ಬ ಕುಟುಂಬದ ಮನುಷ್ಯ. ತನ್ನ ತಾಯಿ, ಒಡಹುಟ್ಟಿದವರು, ಅವರ ಮಕ್ಕಳು ಹಾಗೂ ತನ್ನ ಮಕ್ಕಳನ್ನು ಆಳವಾದ ಭಾವುಕತೆಯಲ್ಲಿ ಪ್ರೀತಿಸುವ ರಾಜಶೇಖರ್, ತಮ್ಮ ಸಾಮಾಜಿಕ ಚಿಂತನೆಯಲ್ಲಿ ಒಬ್ಬ ನಿಷ್ಠುರ ವಿಮರ್ಶಕ. ಅವರ ಸಾಮಾಜಿಕ ರಾಜಕೀಯ ಚಿಂತನೆ ಎಡಪಂಥೀಯ ಪ್ರಗತಿಶೀಲತೆಯಿಂದ ರೂಪುಗೊಂಡಿದೆ ಎಂದು ನಾನು ಹೇಳಿದರೆ ಆ ಹೇಳಿಕೆ ಬಹಳ ಮೇಲುಸ್ತರದ್ದು ಎಂದು ನನಗೇ ಅನ್ನಿಸುತ್ತದೆ. ರಾಜಶೇಖರ್ ಎಡಪಂಥೀಯ ಚಿಂತಕ ಎನ್ನುವುದು ನಿಜ. ಆದರೆ, ಅವರಿಗೆ ಯಾವ ಚಿಂತನೆಯೂ ಅಥವಾ ದೃಷ್ಟಿಕೋನವೂ ಎರವಲಾಗಿ ಬಂದದ್ದಲ್ಲ. ತಾನು ಯಾವುದನ್ನು ಮೌಲಿಕವಾದದ್ದು ಎಂದು ತಿಳಿಯುತ್ತೇನೋ ಅದನ್ನು ಕಟುವಾದ ವಿಮಶರ್ೆಗೆ ಅವರು ಒಳಪಡಿಸುತ್ತಾರೆ. ಅಂತೆಯೇ, ತಾನು ಯಾವುದನ್ನು ಸರಿಯಲ್ಲವೆಂದು ಭಾವಿಸುತ್ತೇನೋ ಆ ಕುರಿತು ಅವರು ಒಂದು ತೆರೆದ ಅಂಚಿನ (open ended) ದೃಷ್ಟಿಯನ್ನು ಸದಾ ಇಟ್ಟುಕೊಂಡಿರುತ್ತಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ರಾಜಶೇಖರ್ ನಾನು ಕಂಡ ಅತ್ಯಂತ ಪ್ರತಿಫಲನಶೀಲ ವ್ಯಕ್ತಿಗಳಲ್ಲಿ ಒಬ್ಬರು. raj6ತಾನು ಪ್ರತಿನಿಧಿಸಿದ ಮೌಲ್ಯಗಳನ್ನು ಹಾಗೂ ತನ್ನ ಗ್ರಹಿಕೆಗಳನ್ನು ಅವರು ನಿಷ್ಠುರವಾದ ಸ್ವವಿಮಶರ್ೆಗೆ ಒಳಪಡಿಸುತ್ತಾರೆ. ಆದ್ದರಿಂದಲೇ, ಅವರು ನಮ್ಮ ಕಾಲದ ಇತರ ಅನೇಕ ಎಡಪಂಥೀಯ ವಕ್ತಾರರಂತೆ ಕಾಣಿಸುವುದಿಲ್ಲ. ಇದು ಒಂದು ವಿಶೇಷ ಸಂಗತಿ. ಭಾರತದಲ್ಲಿ ಸಂಘಟಿತ ಎಡಪಂಥೀಯ ಧೋರಣೆಯಿಂದ ರೂಪುಗೊಂಡವರು ಅಥವಾ ಎಡಪಂಥೀಯ ಪಕ್ಷಗಳ ನೆಲೆಯಿಂದ ತಮ್ಮ ಸಾಮಾಜಿಕ, ರಾಜಕೀಯ ಕ್ರಿಯಾಚರಣೆಯನ್ನು ಆರಂಭಿಸಿದವರು ಬಹುಮಟ್ಟಿಗೆ ರಾಜಶೇಖರ್ರಂತೆ ಇರುವುದಿಲ್ಲ. ತಾವು ನಂಬಿದ ಸಿದ್ದಾಂತವನ್ನು, ಸಂಘಟನೆಯನ್ನು ಅಥವಾ ಪಕ್ಷವನ್ನು ಯಾವ ಸಂದೇಹವೂ ಇಲ್ಲದೆ ಒಪ್ಪಿಕೊಂಡು ಎಡಪಂಥೀಯತೆ ಮತ್ತು ಪ್ರಗತಿಶೀಲತೆಗಳೆನ್ನುವ ಛತ್ರಛಾಯೆಯಡಿಯಲ್ಲಿ ನೆಮ್ಮದಿಯಲ್ಲಿ ಬದುಕುವ ಅನೇಕರನ್ನು ನಾನು ನೋಡಿದ್ದೇನೆ. ಮೊದಲಿಗೆ ಕಮ್ಯುನಿಷ್ಟ್ ಪಕ್ಷದ ಕಾರ್ಯಕರ್ತರಾಗಿ ನಂತರ ಅನೇಕ ಪ್ರಗತಿಪರ ಸಾಹಿತ್ಯಿಕ ಹಾಗೂ ಸಾಮಾಜಿಕ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿ ದುಡಿದ ರಾಜಶೇಖರ್ರಲ್ಲಿ ನಾನು ಒರಟುತನವನ್ನು ಒಮ್ಮೆಯೂ ನೋಡಿಲ್ಲ. ಜನ ಸಂಘಟನೆ ಹಾಗೂ ಹೋರಾಟಗಳ ನಡುವೆ ಇದ್ದು ಅವುಗಳ ನೇತೃತ್ವ ವಹಿಸಿದ ಅನೇಕರಲ್ಲಿ ನಾವು ಸಹಜವಾಗಿಯೇ ಕಾಣುವ Self Righteousness ನ್ನು ನಾನು ರಾಜಶೇಖರ್ರಲ್ಲಿ ಕಂಡಿಲ್ಲ. ಇದು ಬಹಳ ಸಂತಸದ ವಿಷಯ. ತನ್ನ ಸಾಮಾಜಿಕ, ರಾಜಕೀಯ ಕ್ರಿಯಾಚರಣೆಯನ್ನು ನಿರಂತರವಾಗಿ ವಿಮರ್ಶೆಗೆ ಒಡ್ಡುವವರಿಗೆ ಮಾತ್ರ ಇದು ಸಾದ್ಯ.

ರಾಜಶೇಖರ್ ಒಬ್ಬ ಅಪರೂಪದ ವ್ಯಕ್ತಿ. ಸರಳ, ನೇರನಡೆ-ನುಡಿಗಳ ಓರ್ವ ಸಾಚಾ ಮನುಷ್ಯ. ಅವರ ಜೊತೆಗಿನ ನನ್ನ ಸಹವಾಸದಲ್ಲಿ ನಾನು ಅವರಿಂದ ಅನೇಕ ಸಂಗತಿಗಳನ್ನು ಪಡೆದುಕೊಂಡಿದ್ದೇನೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಅವರ ಜೊತೆಗೆ ನನಗೆ ನಿಕಟ ಸಂಪರ್ಕವಿಲ್ಲದಿದ್ದರೂ, ಅವರ ಜೊತೆಗೆ ನಾನು ಪಡೆದ ಕೆಲವು ಆಪ್ತ ಅನುಭವಗಳು ಇಂದಿಗೂ ನನ್ನ ಮನಸ್ಸಿನಲ್ಲಿ ಹಚ್ಚ ಹಸುರಾಗಿದೆ. ಇತರರ ಕಷ್ಟಗಳಿಗೆ ಆಳವಾದ ಅನುಕಂಪದಿಂದ ಸ್ಪಂದಿಸುವ, ಎಷ್ಟೋ ಬಾರಿ ಯಾವ ಪ್ರತಿಫಲವನ್ನೂ ನಿರೀಕ್ಷಿಸದೆ ಮಿತಿಮೀರಿದ ಸಹಾಯವನ್ನೂ ಮಾಡುವ ರಾಜಶೇಖರ್ ಓರ್ವ ಚಿಂತನಶೀಲ ಬರಹಗಾರ ಮತ್ತು Social Activist ಎನ್ನುವುದು ನಂತರದ ಮಾತು. ಮೊದಲಿಗೆ ಅವರು ವಿಶಾಲ ಹೃದಯವಂತಿಕೆಯ, ಶುದ್ಧ ಮನಸ್ಸಿನ, ಸ್ನೇಹಶೀಲ ಜೀವಿ ಎನ್ನುವುದು ನನಗೆ ಬಹಳ ಮುಖ್ಯವಾದುದು.

ನಾನು ಅವರ ಜೊತೆಗಿನ ಸ್ನೇಹಶೀಲ ಸಹವಾಸದಲ್ಲಿ ಕಂಡುಕೊಂಡ ಅವರ ಚಿಂತನೆ ಮತ್ತು ವ್ಯಕ್ತಿತ್ವಗಳಿಗೆ ಸಂಬಂಧಿಸಿದ ಒಂದೆರಡು ಮುಖ್ಯ ಸಂಗತಿಗಳನ್ನು ಇಲ್ಲಿ ಮುಂದಿಡಲು ಯತ್ನಿಸುತ್ತೇನೆ.

ಮಂಗಳೂರು ವಿಶ್ವವಿದ್ಯಾನಿಲಯದ ನಾವು ಕೆಲವು ಸ್ನೇಹಿತರು ನಮ್ಮ ಯೌವನದ ಎಡಪಂಥೀಯ ಉತ್ಸಾಹದಲ್ಲಿ ಅರಿವು ಬರಹ ಎನ್ನುವ ಶೈಕ್ಷಣಿಕ ಪತ್ರಿಕೆಯೊಂದನ್ನು 80 ಹಾಗೂ 90ರ ದಶಕಗಳಲ್ಲಿ ಹೊರ ತರುತ್ತಿದ್ದೆವು. ಸುಮಾರು 10-12 ಸಂಚಿಕೆಗಳನ್ನು ನಾವು ಉತ್ಸಾಹದಿಂದ ಹೊರ ತಂದೆವಾದರೂ ಅದನ್ನು ಮುಂದುವರಿಸಿಕೊಂಡು ಹೋಗಲು ನಮಗೆ ಸಾದ್ಯವಾಗಲಿಲ್ಲ. ನಮ್ಮ ಎಡಪಂಥೀಯ ಉತ್ಸಾಹದ ಈ ಕಾಲಘಟ್ಟದಲ್ಲಿ ರಾಜಶೇಖರ್ ಕೂಡಾ ನಮ್ಮ ಜೊತೆಗೆ ಇದ್ದರು. ಈ ಸಂದರ್ಭದಲ್ಲಿ ಸಂಚಿಕೆಯ ರೂಪುರೇಷೆಗಳನ್ನು ನಿರ್ಧರಿಸುವ ನಿಟ್ಟಿನಲ್ಲಿ ನಾವು ಅನೇಕ ಸಾರಿ ಒಂದಾಗಿ ಚಚರ್ಿಸುತ್ತಿದ್ದೆವು. ಈ ಚಚರ್ೆಗಳಲ್ಲಿ ರಾಜಶೇಖರ್ ಭಾಗವಹಿಸುತ್ತಿದ್ದ ರೀತಿ ಮತ್ತು ವಯಸ್ಸಿನಲ್ಲಿ ಕಿರಿಯರಾದ ನಮ್ಮ ಜೊತೆ ಅವರು ತಮ್ಮನ್ನು ನಿರ್ವಹಿಸಿಕೊಳ್ಳುತ್ತಿದ್ದ ರೀತಿ ನನಗೆ ಈಗಲೂ ವಿಶೇಷವಾಗಿ ಕಾಣಿಸುತ್ತದೆ. ನಮ್ಮಲ್ಲಿ ಅನೇಕರು ಎಡಪಂಥೀಯ ಚಿಂತನೆಯೇ ಅಂತಿಮ ಸತ್ಯವೆಂದು ಆಗ ತಿಳಿದುಕೊಂಡಿದ್ದೆವು. ಎಡಪಂಥೀಯತೆಯ ಶ್ರೇಷ್ಠತೆಯ ಬಗ್ಗೆ ನಮಗಿದ್ದ ನಂಬಿಕೆಯಿಂದಾಗಿ ಒಂದು ಬಗೆಯ ಜಗಳಗಂಟತನ ಮತ್ತು ಇತರರ ಬಗ್ಗೆ ಸ್ವಲ್ಪ ಮಟ್ಟಿನ ನಿರ್ಲಕ್ಷ ಕೂಡಾ ನಮ್ಮಲ್ಲಿ ಇತ್ತು ಎಂದು ನನಗೆ ಈಗ ಅನ್ನಿಸುತ್ತದೆ. ಹಾಗಿದ್ದೂ, ರಾಜಶೇಖರ್ ನಮ್ಮ ಜೊತೆ ವಿಶೇಷ ಮಮತೆಯಿಂದ ವ್ಯವಹರಿಸುತ್ತಿದ್ದರು. ನಾವು ಪ್ರತಿಪಾದಿಸುತ್ತಿದ್ದ ಎಡಪಂಥೀಯತೆ ಅವರಿಗೆ ಪ್ರಿಯವಾದದ್ದಿರಬಹುದು, ಆದರೆ ಅದನ್ನು ನಾವು ಪ್ರತಿಪಾದಿಸುತ್ತಿದ್ದ ವಿಧಾನದ ಕುರಿತು ಅವರಿಗೆ ಆಕ್ಷೇಪಗಳೂ ಇದ್ದಿರಬಹುದು. ಕನ್ನಡದ ಸಾಂಸ್ಕೃತಿಕ ಸಂದರ್ಭದಲ್ಲಿ ನಾವು ಮಹತ್ವದ ಒಂದು ನಡುಪ್ರವೇಶವನ್ನು ಮಾಡುತ್ತಿದ್ದೇವೆ ಎನ್ನುವ ವಿಶ್ವಾಸವೂ ಅವರಿಗಿತ್ತು. ಹೀಗಾಗಿ, ಅವರು ನಮ್ಮೊಡನಿದ್ದು, ನಮ್ಮ ಅನೇಕ ಅಪ್ರಬುದ್ಧತೆಗಳನ್ನು ಮನ್ನಿಸಿ ಪೂತರ್ಿಯಾಗಿ ನಮ್ಮಂತಾಗದೇ ತಮ್ಮ ಚಿಂತನೆ ಹಾಗೂ ವ್ಯಕ್ತಿತ್ವದ ವೈಶಿಷ್ಟ್ಯಗಳನ್ನು ಉಳಿಸಿಕೊಂಡಿದ್ದರು ಮತ್ತು ನಮ್ಮ ಪತ್ರಿಕೆಗೋಸ್ಕರ ಕೆಲವು ಉತ್ತಮ ಲೇಖನಗಳನ್ನು (ಅನುವಾದದ ರೂಪದಲ್ಲಿ) ಬರೆದುಕೊಟ್ಟಿದ್ದರು. ಇದು ನನಗೆ ರಾಜಶೇಖರ್ ಹೇಗೆ ಓರ್ವ ಸದಭಿರುಚಿಯ ಮುಕ್ತ ಮನಸ್ಸಿನ ಪ್ರಜ್ಞಾವಂತ ವ್ಯಕ್ತಿ ಎನ್ನುವುದಕ್ಕೆ ಒಂದು ನಿದರ್ಶನವಾಗಿ ಕಾಣಿಸುತ್ತದೆ.

_dsc5312-967x1280divderspaರಾಜಶೇಖರ್ ಒಬ್ಬ ಸ್ವವಿಮಶರ್ೆಯ ಪ್ರತಿಫಲನಶೀಲ ಚಿಂತಕ ಎನ್ನುವುದಕ್ಕೆ ನಾನು ಇನ್ನೊಂದು ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳುತ್ತೇನೆ. ಇದು 89-90 ರ ಕಾಲಘಟ್ಟದಲ್ಲಿ ಸೋವಿಯತ್ ಒಕ್ಕೂಟ ವಿಘಟನೆಗೊಂಡ ಸಂದರ್ಭ. ಜಗತ್ತಿನಾದ್ಯಂತ ಎಲ್ಲರೂ ಸೋವಿಯತ್ ಒಕ್ಕೂಟದ ವಿಘಟನೆಯನ್ನು ಕಮ್ಯುನಿಷ್ಟ್ ಸಿದ್ಧಾಂತದ ಅವಸಾನವೆಂದು ಘೋಷಿಸಿದ ಕಾಲವದು. ಭಾರತದ ಅನೇಕ ಕಮ್ಯುನಿಷ್ಟ್ ಧುರೀಣರು ಈ ಘಟನೆಯನ್ನು ಸರಿಯಾಗಿ ಜೀಣರ್ಿಸಿಕೊಳ್ಳಲಾಗದೇ ಏನೇನೋ ಸಬೂಬುಗಳನ್ನು ಅಥವಾ ಅಸಂಬದ್ಧ ವಿವರಣೆಗಳನ್ನು ನೀಡುತ್ತಿದ್ದ ಕಾಲವೂ ಆದಾಗಿತ್ತು.

ಈ ಸಂದರ್ಭದಲ್ಲಿ ರಾಜಶೇಖರ್ ಓರ್ವ ಸೂಕ್ಷ್ಮ ಮನಸ್ಸಿನ ಎಡಪಂಥೀಯ ಚಿಂತಕ ಹಾಗೂ ಕಾರ್ಯಕರ್ತನಾಗಿ ಪ್ರತಿಕ್ರಿಯಿಸಿದ ರೀತಿ ನನಗೆ ವಿಶಿಷ್ಟವಾಗಿ ಕಾಣಿಸುತ್ತದೆ. ಅವರು ಸೋವಿಯತ್ ಒಕ್ಕೂಟ ಹಾಗೂ ಪೂರ್ವ ಯುರೋಪಿನ ಕಮ್ಯುನಿಷ್ಟ್ ವ್ಯವಸ್ಥೆಗಳು ಭಗ್ನಗೊಂಡ ವಾಸ್ತವವನ್ನು ತಾತ್ವಿಕ ದಿಟ್ಟತನದಲ್ಲಿ ಎದುರಿಸಿದರು. ಅವರಿಗೆ ಆ ವಿದ್ಯಮಾನ ಕಮ್ಯುನಿಷ್ಟ್ ಸಿದ್ಧಾಂತದ ರಾಜಕೀಯ ಪ್ರಯೋಗದ ಒಂದು ಭೀಕರ ಸೋಲು ಎನ್ನುವುದನ್ನು ಒಪ್ಪಿಕೊಳ್ಳಲು ಯಾವ ಸಂಕೋಚವೂ ಇರಲಿಲ್ಲ. ಆದರೆ ಕಮ್ಯುನಿಷ್ಟ್ ಸಿದ್ಧಾಂತದ ಈ ರಾಜಕೀಯ ಪ್ರಯೋಗದ ಸೋಲು ಮಾಕ್ಸರ್್ವಾದದ ಅವಸಾನವನ್ನು ಸೂಚಿಸುತ್ತದೆ ಎಂದು ಅವರು ತಿಳಿದುಕೊಳ್ಳಲಿಲ್ಲ. ಅವರಿಗೆ ಮಾಕ್ಸರ್್ವಾದ ಒಂದು ಗತಿಶೀಲವಾದ ಸ್ವವಿಮಶರ್ೆಯಲ್ಲಿ ನಿಹಿತವಾದ ಬೌದ್ಧಿಕ ಪರಂಪರೆ. ಈ ಬೌದ್ಧಿಕ ಪರಂಪರೆ ಮಾನವ ಸಮುದಾಯದ ಉನ್ನತಿಯ ಇತರ ಅನೇಕ ಸಾಧ್ಯತೆಗಳನ್ನು ಮುಂದಿಡಬಲ್ಲುದು ಎಂದು ಅವರು ತಿಳಿದುಕೊಂಡಿದ್ದರು. ಆದ್ದರಿಂದಲೇ, ಕಮ್ಯುನಿಷ್ಟ್ ವ್ಯವಸ್ಥೆಗಳ ಭಗ್ನತೆ ಅವರನ್ನು ಕಂಗೆಡಿಸಲಿಲ್ಲ.

ರಾಜಶೇಖರ್ ಬರಹಗಳ ಕುರಿತಾಗಲಿ, ಅವರ ಚಿಂತನೆಯ ಅನೇಕ ಆಯಾಮಗಳ ಕುರಿತಾಗಲಿ, ವಿಸೃತ್ತವಾಗಿ ಚಚರ್ಿಸುವುದು ಇಲ್ಲಿನ ನನ್ನ ಉದ್ದೇಶವಲ್ಲ. ಬದಲಾಗಿ, ಅವರ ವ್ಯಕ್ತಿತ್ವ ಹಾಗೂ ಚಿಂತನೆಗಳಲ್ಲಿ ನನಗೆ ಇಷ್ಟವಾದ ಒಂದೆರಡು ಅಂಶಗಳನ್ನು ಮುಂದಿಡುವ ಪ್ರಯತ್ನವನ್ನಷ್ಟೇ ನಾನು ಮಾಡಿದ್ದೇನೆ. ಅವರ ಸ್ನೇಹಶೀಲತೆ, ಒಳ್ಳೆಯತನ ಹಾಗೂ ಚಿಂತನೆಗಳು ಬರಹಗಳ ರೂಪದಲ್ಲಿ ಮತ್ತು ಕ್ರಿಯಾಚರಣೆಯಲ್ಲಿ ಮುಂದುವರೆಯಲಿ ಎಂದು ನಾನು ಪ್ರೀತಿಪೂರ್ವಕವಾಗಿ ಹಾರೈಸುತ್ತೇನೆ.

ಪ್ರತಿಕ್ರಿಯಿಸಿ