ಪಂಪಭಾರತ : ಸೂಳ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್‌

ಪಂಪಭಾರತದಲ್ಲಿ ಭೀಷ್ಮ ಸೇನಾಧಿಪತ್ಯದ ಪ್ರಸಂಗವು ರಸವತ್ತಾದ ಭಾಗ. ಇಲ್ಲಿನ ಮೂರ್ನಾಲ್ಕು ಪದ್ಯಗಳು ಹತ್ತು ಹಲವು ಕಾರಣಗಳಿಗೆ ಪ್ರಸಿದ್ಧಿ ಪಡೆದಿವೆ, ಚರ್ಚೆಗಳನ್ನೂ ಎಬ್ಬಿಸಿವೆ. ಭೀಷ್ಮರ ನಿವಾಸಕ್ಕೆ ರಾತ್ರಿಯೇ ತೆರಳಿ, ಅವರ ಮನವೊಲಿಸಿ ಬಂದು, ಸಹಸ್ರ ಕಿರಣೋದಯವಾದಾಗ(ಬೆಳಗಾದಾಗ) ಅವರಿಗೆ ಸಕಲ ರಾಜವೈಭೋಗಗಳೊಂದಿಗೆ ಶಾಸ್ತ್ರೋಕ್ತವಾಗಿ ವೀರಪಟ್ಟವನ್ನು ಕಟ್ಟಲು ಧುರ್ಯೋಧನ ಹೊರಡುತ್ತಾನೆ. ಆ ಭೀಷ್ಮರಾದರೂ ಎಂಥವರು ? ಒಂದು ಕಾಲದಲ್ಲಿ ಪರಶುರಾಮನನ್ನೇ ಅಂಜಿಸಿದ ವೀರರು. ಅಂಥ ವೀರಾಗ್ರಣಿಯೇ ಸೇನಾಧಿಪತಿಯಾಗಿ ಬಂದು ನಿಂತರೆ ಪಗೆವರನು ಎನ್ನ ಮಂಚದ ಕಾಲೊಳ್ ಕಟ್ಟಿದಂತೆಯೇ ಎಂದು ಗರ್ವಿಸಿ ಉಬ್ಬುತ್ತಾನೆ ಧುರ್ಯೋಧನ.

ಕರ್ಣನಿಗೋ ಯೌವನದ ಸಹಜ ದುಡುಕು, ತನಗೆ ಎಷ್ಟೆಲ್ಲವನ್ನೂ ಕೊಟ್ಟ ದೊರೆಗೆ ಸ್ವಾಮಿನಿಷ್ಠೆಯನ್ನು ತೋರಿಸುವ ತವಕ, ಹಿಂದೊಮ್ಮೆ ಪಾಂಡವರು ತನ್ನ ಸೋದರರೆಂದು ತಿಳಿದಾಗ, ಅತ್ತ ತನ್ನವರನ್ನೂ ಕೊಲ್ಲಲಾರೆ ಇತ್ತ ತನ್ನ ತನ್ನನ್ನು ಪೂರ್ಣವಾಗಿ ನಂಬಿದ ಸುಯೋಧನನ್ನೂ ಬಿಡಲಾರೆ ಎಂಬ ಭಾವದಲ್ಲಿ,”ನನ್ನೊಡೆಯನಿಗಿಂತ ಮೊದಲು ನಾನೇ ಪರಾಕ್ರಮವನ್ನು ಅಂಗೀಕರಿಸಿ ಸಾಯುತ್ತೇನೆ” ಎಂದು ನಿಷ್ಕರ್ಷೆ ಮಾಡಿಕೊಂಡವನಾತ, ಅಷ್ಟಾಗಿ ಹೆಜ್ಜೆ ಹೆಜ್ಜೆಗೂ ಜಾತಿಯ ಹೆಸರಿನಲ್ಲಿ ಆದ ಅವಮಾನಗಳಿಂದ ಮಡುಗಟ್ಟಿದ್ದ ಅಸಹಾಯಕತೆ, ಕೀಳರಿಮೆ ಮತ್ತು ಕ್ರೋಧ.

ಇಂಥಹಾ ಕರ್ಣನಿಗೆ ತನ್ನ ಗೆಳೆಯ, ತನ್ನ ದೊರೆ ತನ್ನನ್ನು ಬಿಟ್ಟು, ಹೋಗಿ ಹೋಗಿ ಒಬ್ಬ ಮುದುಕರಿಗೆ ಪಟ್ಟಗಟ್ಟಿದಾಗ ಬರಬಾರದ ಕೋಪವೇ ಬರುತ್ತದೆ. ತಾನಾದರೋ ಶತ್ರುಗಳ ನಿಟ್ಟೆಲುಬುಗಳನ್ನು ಪುಡಿಮಾಡಬಲ್ಲವನು, ಅದುಬಿಟ್ಟು ಈ ಹಣ್ಣುಹಣ್ಣು ಮುದುಕರಿಂದೇನಾದೀತು ಎಂಬುದು ಅವನ ವ್ಯಥೆ. ಭೀಷ್ಮರು ಕಣ್ಣು ಕಾಣದ ಮುದುಕನಂತೆ, ಬಿಲ್ಲನ್ನು ಊರುಗೋಲಾಗಿ ಹಿಡಿಯಬೇಕಾದ ದುರ್ಬಲ ವೃದ್ಧರಂತೆ ಅವನಿಗೆ ಕಾಣುತ್ತಾರೆ. ಅವರ ಪೌರುಷ ದೇವಿ ಮೈಮೇಲೆ ಬಂದವರ ಆವೇಶದಂತೆ, ಕಟ್ಟುಕಥೆ(ಇಲ್ಲಿ ಬರುವ “ಭಗವತಿಯೇಱುವೇೞ್ವ ತೆರದಿಂ ಕಥೆಯಾಯ್ತಿವರೇಱು” ಎಂಬ ಸಾಲಿನ ಅರ್ಥವೇನು ಎಂಬುದರ ಬಗ್ಗೆ ವಿದ್ವದ್ವಲಯದಲ್ಲಿ ಸಾಕಷ್ಟು ಚರ್ಚೆಗಳಾಗಿವೆ). ಇಂತಹಾ ಮುದುಕರನ್ನು ಯುದ್ಧರಂಗಕ್ಕೆ ಒಯ್ದರೆ ಶತ್ರುಗಳು ಬಿದ್ದು ಬಿದ್ದು ನಕ್ಕಾರು ಅನಿಸುತ್ತದೆ ಕರ್ಣನಿಗೆ, ಇದೆಲ್ಲವನ್ನೂ ಬಾಯಿಬಿಟ್ಟು ಹೇಳಿಯೂ ಬಿಡುತ್ತಾನೆ.

ಇಷ್ಟಾದಾಗ ದ್ರೋಣರು ತಾನೇನು ಕಮ್ಮಿ ಕೋಪದವರಲ್ಲ ಎಂಬಂತೆ ಕೆರಳಿಬಿಡುತ್ತಾರೆ. ಈ ಕೋಪೋದ್ರೇಕದಲ್ಲಿ ಜಾತಿ ಬಂದುಬಿಡುತ್ತದೆ ! ಸತ್ಕುಲಪ್ರಸೂತರಾದ ಭೀಷ್ಮರನ್ನು ಹೀಗೆ ಆಡಿಕೊಳ್ಳಬೇಕಾದರೆ ಹೀನಕುಲದವನದ್ದೇ ನಾಲಗೆಯಾಗಬೇಕು ಎಂದವರ ಎಣಿಕೆ. ನಾಲಗೆ ಕುಲಮಂ ತುಬ್ಬುವುದು(ಪ್ರಕಟಪಡಿಸುವುದು) ಎಂಬ ನಾಣ್ಣುಡಿ ನಿನ್ನಂಥವರಿಗೇ ಇರುವುದು ಎಂದಾಡಿಬಿಡುತ್ತಾರೆ.

ಅಲ್ಲಿಗೆ ಕರ್ಣನ ಆತ್ಮಾಭಿಮಾನವನ್ನು ಬಡಿದೆಬ್ಬಿಸಿದಂತಾಗುತ್ತದೆ. ದ್ರೋಣನ ಕರ್ಣಕಠೋರ ವಚನಗಳಿಗೆ ಉತ್ತರ ಪಟಪಟನೆ ಅವನ ಬಾಯಿಯಿಂದ ಹೊರಡುತ್ತದೆ. “ಕುಲಮೆನೆ ಮುನ್ನಂ ಉಗ್ಗಡಿಪಿರೇಂ ಗಳ” (ಬಾಯಿ ತೆಗೆದರೆ ಮೊದಲು ಕುಲವನ್ನೇ ಕುರಿತು ದೊಡ್ಡದಾಗಿ ಯಾಕೆ ಹೇಳುತ್ತೀರಿ ಸ್ವಾಮೀ?) ಎನ್ನುತ್ತಾನೆ. ಹಿಂದೊಮ್ಮೆ ಧನುರ್ವಿದ್ಯಾ ಪ್ರದರ್ಶನವಾದಾಗಲೂ, ಕರ್ಣ ಅರ್ಜುನನ ಜೊತೆ ಸ್ಪರ್ಧಿಸಹೊರಟಾಗ ಅವನು ಕುಲದ ಕಾರಣದಿಂದ ಅರ್ಜುನನಿಗೆ ಸಮನಲ್ಲ ಎಂಬ ಕಟುನಿಂದೆ ಕೇಳಿಬಂದಿತ್ತು. ಆಗ ಕರ್ಣನ ಪರವಾಗಿ ಧುರ್ಯೋಧನನೇ ಮಾತಾಡಿ, “ಕುಲಮೆಂಬುದುಂಟೆ ಬೀರಮೆ ಕುಲಮಲ್ಲದೆ ಕುಲಮನಿಂತು ಪಿಕ್ಕದಿರಿಂ”(ಶೌರ್ಯವೇ ಕುಲವಲ್ಲದೆ ಕುಲವೆಂಬುದು ಬೇರೆಯುಂಟೇ?) ಎಂದಿದ್ದ. ಅದು ಕರ್ಣನಿಗೆ ನೆನಪಿದ್ದಿರಬೇಕು. ಮುಂಬರಿದು, “ನಿಮ್ಮ ಕುಲಂಗಳು ಆಂತು ಮಾರ್ಮಲೆವನನು ಅಟ್ಟಿ ತಿಂಬುವೆ” ಅಂತ ಸವಾಲು ಹಾಕುತ್ತಾನೆ(ಯುದ್ಧದಲ್ಲಿ ಎದುರಾಳಿ ಬಾಣಗಳ ಮಳೆಗರೆದಾಗ, “ನಾನು ಇಂಥಹಾ ಕುಲದವನು” ಅಂತ ಜಂಬ ಕೊಚ್ಚಿದರೆ, ನಿಮ್ಮ ಕುಲವೇನು ಯುದ್ಧ ಗೆದ್ದು ಕೊಡುತ್ತದೆಯೇ ಎಂಬ ಭಾವ).
ಕೊನೆಗೆ “ಕುಲಂ ಕುಲಮಲ್ತು, ಚಲಂ ಕುಲಂ,ಗುಣಂ ಕುಲಂ, ಅಭಿಮಾನಮೊಂದೆ ಕುಲಂ,ಅಣ್ಮು ಕುಲಂ”(ಹುಟ್ಟಿನಿಂದ ಬಂದದ್ದು ಕುಲವಲ್ಲ. ಚಲ, ಸದ್ಗುಣ, ಆತ್ಮಾಭಿಮಾನ, ಪರಾಕ್ರಮಗಳೇ ಕುಲ) ಎಂದುಸುರುತ್ತಾನೆ. ಪಂಪನ ಸಾಮಾಜಿಕ ಪ್ರಜ್ಞೆಗೆ ಇಲ್ಲಿ ಕರ್ಣ ಬಾಯಾಗುತ್ತಾನೆ. ಕಡೆಗೆ, ಭೀಷ್ಮನು ಪಾಂಡವರನ್ನು ಗೆದ್ದರೆ ನಾನು ತಪಸ್ಸಿಗೆ ಹೋಗಿಬಿಡುತ್ತೇನೆ ಅಂತ ಬೇರೆ ಹೇಳುತ್ತಾನೆ!

ಇಷ್ಟಾದ ಮೇಲೆ ಭೀಷ್ಮರು ಮಾತಾಡುತ್ತಾರೆ, ‘ನಿನಗಿರುವಷ್ಟು ಕಲಿತನದ ಉಕ್ಕು, ಜವ್ವನದ ಸೊಕ್ಕು, ರಾಜನ ಗೆಳೆತನ, ತೋಳ್ಬಲದ ಶಕ್ತಿ ನನಗೆಲ್ಲಿದೆಯಪ್ಪಾ’ ಎನ್ನುತ್ತಾರೆ. ಅಲ್ಲಿ ಅವರಾಡುವ “ಸೂೞ್ಪಡೆಯಲಪ್ಪುದು ಕಾಣ ಮಹಾಜಿರಂಗದೊಳ್” ಎಂಬ ಮಾತೂ ಬಹುಪ್ರಸಿದ್ಧ. “ಈ ಮಹಾಯುದ್ಧದಲ್ಲಿ ನಮಗೆ ಸಿಗುವುದು ವಿಜಯವಲ್ಲ, ನಮ್ಮದೇನಿದ್ದರೂ ಒಬ್ಬರಾದ ಮೇಲೆ ಒಬ್ಬರು ಪತನ ಹೊಂದುವ ಕೆಲಸ, ಸಾಯುವುದಕ್ಕೆ ನಮ್ಮ ಸರದಿ ಯಾವಾಗ ಬರುತ್ತದೆ ಅಂತ ಕಾಯುವ ಕೆಲಸ. ಹೀಗಾಗಿ, ಜಾಸ್ತಿ ಹಾರಾಡಬೇಡ, ನಿನ್ನ ಸರದಿಯೂ ಬಂದೇ ಬರುತ್ತದೆ” ಎಂಬ ವ್ಯಂಗ್ಯ ಭೀಷ್ಮರದು. ಇಷ್ಟು ಹೇಳಿ, “ಚಕ್ರವನ್ನು ಹಿಡಿಯುವುದಿಲ್ಲವೆಂದು ಪ್ರತಿಜ್ಞೆ ಮಾಡಿರುವ ಕೃಷ್ಣನ ಕೈಯಲ್ಲಿ ಚಕ್ರ ಹಿಡಿಸುತ್ತೇನೆ, ಅರ್ಜುನನ ರಥವು ಎಂಟು ಗಾವುದ ದೂರ ಹೋಗುವಂತೆ ಬಾಣಪ್ರಯೋಗ ಮಾಡುತ್ತೇನೆ, ಪ್ರತಿದಿನವೂ ಯುದ್ಧದಲ್ಲಿ ಹತ್ತು ಸಾವಿರ ಯೋಧರನ್ನು ಧರೆಗುರುಳಿಸುತ್ತೇನೆ” ಎಂದು ಭೀಷ್ಮರು ಮಹಾಪ್ರತಿಜ್ಞಾರೂಢರಾಗುವಲ್ಲಿಗೆ ಈ ಪ್ರಸಂಗ ಮುಗಿಯುತ್ತದೆ.


ಪೀಠಿಕೆ ಪಠ್ಯ : ಶರತ್ ಭಟ್ ಸೇರಾಜೆ

ಪ್ರತಿಕ್ರಿಯಿಸಿ