ಪದ್ಯದ ಮಾತು ಬೇರೆ ~ ೩

‘ರೈಲ್ವೇ ನಿಲ್ದಾಣದಲ್ಲಿ : ಕೆ.ಎಸ್. ನರಸಿಂಹಸ್ವಾಮಿ
ಚಿತ್ರ : ಸ್ನೇಹಜಯಾ ಕಾರಂತ

ಪೂರ್ಣ ಪದ್ಯ ಇಲ್ಲಿದೆ:
ರೈಲ್ವೇ ನಿಲ್ದಾಣದಲ್ಲಿ
-ಕೆ.ಎಸ್. ನರಸಿಂಹಸ್ವಾಮಿ

‘ಎಲ್ಲಿದ್ದೀಯೇ ಮೀನಾ?’
ಇಲ್ಲೇ ಇದ್ದೇನಮ್ಮ.
‘ತೊಟ್ಟಿಲು, ಪೆಟ್ಟಿಗೆ, ಹಾಸಿಗೆ?’
ಇಲ್ಲೇ ಇವೆಯಮ್ಮ.

‘ಏನನ್ನೋ ಮರೆತಂತಿದೆ?’
ಮರೆಯುವುದೇ, ಹೇಗೆ?
‘ಏನನ್ನೋ ನೆನೆವಂತಿದೆ?’
ನಾನಿರುವುದೆ ಹಾಗೆ.

‘ಬಿಸಿನೀರಿದೆಯೇ ಮೀನಾ,
ಮಗುವಿನ ಹಾಲಿನ ಪುಡಿಗೆ?’
ಬೇಕಾಷ್ಟಿದೆಯಮ್ಮ –
(ಕಣ್ಣಲ್ಲೂ ಜತೆಗೆ).

ಮಗುವನು, ಹಿಡಿಯೇ ಹೀಗೆ,
ಕಪ್ಪಿಡುವೆನು ಹಣೆಗೆ –
ಮೈ ಬಿಸಿಯಾಗಿದೆಯಲ್ಲೆ
ಹೊರಡುವ ಸಮಯಕ್ಕೆ!’

ಘಂಟೆಯ ಹೊಡೆತಕೆ, ಸಿಳ್ಳಿಗೆ,
ಬೀಸಿದ ಬಾವುಟಕೆ
ನಡುಗುತ್ತಿದೆ ಬಂಡಿಯ ಮೈ
ದೀಪದ ಬೆದರಿಕೆಗೆ.

ಕಿಟಿಕಿಯ ಜತೆಗೂ ಬರುವುದು
ಬೇಡಮ್ಮ, ಹೋಗು.
ಇಲ್ಲಿಂದಲೆ ಕೈಮುಗಿಯುವೆ –
ನಲ್ಲಿಂದಲೆ ಹರಸು.

ಕಂಬಿಗಳುದ್ದಕು ಹಬ್ಬಿತು
ಎಂಜಿನ್ನಿನ ಕೂಗು:
‘ಎಲ್ಲಿದ್ದೀಯೇ ಮೀನಾ,
ಎಲ್ಲಿದ್ದೀಯೇ?’

ಕಿಡಿಗಳು ಹೊರಳುವ ಹೊಗೆಯಲಿ
ಹೆಗ್ಗಾಲಿಗಳುರುಳು;
ಇಲ್ಲೇ ಇದ್ದೇನಮ್ಮ,
ಇಲ್ಲೇ ಇದ್ದೇನೆ.

‘ಕಿಟಿಕಿಯ ಮುಚ್ಚಿಕೊ ಮೀನಾ,
ಕಿಡಿ ಬೀಳುವುದೊಳಗೆ,’ –
ಕಿಟಿಕಿಯ ಮುಚ್ಚಿದೆನಮ್ಮ,
ಕಿಡಿ ಬೀಳದ ಹಾಗೆ.

ಪ್ರತಿಕ್ರಿಯಿಸಿ