ಗೂಗಿ ವಾ ಥಿಯಾಂಗೋ ಬರೆದ ’ ದಿ ರಿಟರ್ನ್ ’ ಕತೆಯ ಕನ್ನಡ ಅನುವಾದ-ಮರಳಿ ಮನೆಗೆ

ಕೆಲ ದಿನಗಳ ಹಿಂದೆ ತೀರಿಕೊಂಡ ಆಫ್ರಿಕಾ ಸಾಹಿತ್ಯ ದಿಗ್ಗಜ ಕೀನ್ಯಾದ ಗೂಗಿ ವಾ ಥಿಯಾಂಗೋ ಬರೆದ ’ ದಿ ರಿಟರ್ನ್ ’ ಕತೆ ಕನ್ನಡ ಅನುವಾದದಲ್ಲಿ.

 

ದಾರಿ ಮುಗಿಯದಂತಿತ್ತು. ಅವನು ಒಂದೊಂದು ಹೆಜ್ಜೆ ಮುಂದೆ ಇಟ್ಟಂತೆ ಧೂಳಿನ ಸಣ್ಣ ಮೋಡಗಳು ಮೇಲಕ್ಕೆದ್ದು ಅವನ ಹಿಂದೆ ಕೋಪದಿಂದ ಸುತ್ತುತ್ತ ಆಮೇಲೆ ನಿಧಾನಕ್ಕೆ ಶಾಂತವಾಗುತ್ತಿತ್ತು. ಆದರೇ ಧೂಳಿನ ತೆಳುವಾದ ರೈಲು ಗಾಳಿಯಲ್ಲಿ ಉಳಿದು ಹೊಗೆಯಂತೆ ಚಲಿಸುತ್ತಿತ್ತು. ತನ್ನ ಪಾದದ ಕೆಳಗಿನ ಧೂಳು ಮತ್ತು ನೆಲವನ್ನು ಲೆಕ್ಕಿಸದೆ ಅವನು ಮುಂದೆ ನಡೆದ. ಅದಾಗಿಯೂ ಪ್ರತಿ ಹೆಜ್ಜೆಯೊಂದಿಗೆ ದಾರಿಯ ಕಾಠಿಣ್ಯ ಮತ್ತು ಎದ್ದುಕಾಣುವ ದ್ವೇಷದ ಕುರಿತು ಜಾಗೃತನಾಗಿದ್ದ. ಅವನು ಕಾಲ ಕೆಳಗೇನೂ ನೋಡಲಿಲ್ಲ ಬದಲಿಗೆ ಕಣ್ಣ ಮುಂದೆ ನೋಡಿದ. ಈಗ , ಯಾವುದೇ ಕ್ಷಣದಲ್ಲಿ ತನ್ನನ್ನು ಗೆಳೆಯನೆಂದು ಗುರುತಿಸುವ , ತಾನೀಗ ಮನೆಯ ಹತ್ತಿರದಲ್ಲೇ ಇದ್ದೇನೆ ಎಂದು ಹೇಳುವ ಪರಿಚಿತನಿಗಾಗಿ ಎದುರು ನೋಡಿದ. ಆದರೇ ದಾರಿ ಇನ್ನೂ ಮುಗಿದಿರಲಿಲ್ಲ.

ಅವನು ವೇಗವಾಗಿ ಚುರುಕಾದ ಹೆಜ್ಜೆಗಳನ್ನಿಟ್ಟ. ಅವನ ಎಡಗೈ ಈಗ ಹರಿದು ಸವೆದು ಹೋಗಿರುವ ಒಂದು ಕಾಲದ ಬಿಳಿ ಕೋಟಿನ ಪಕ್ಕದಲ್ಲಿ ಸಡಿಲವಾಗಿ ಜೋತಾಡುತ್ತಿತ್ತು. ಅವನ ಬಲಗೈ ಮೊಣಕೈ ಗೆ ಬಾಗಿಸಿ ಸ್ವಲ್ಪ ಇಳಿಬಿದ್ದ ಬೆನ್ನಿನ ಮೇಲೆ ಸಣ್ಣ ಗಂಟಿಗೆ ಕಟ್ಟಿದ್ದ ದಾರವನ್ನು ಹಿಡಿದಿತ್ತು. ಒಂದು ಕಾಲದಲ್ಲಿ ಕೆಂಪು ಹೂವುಗಳು ಅಚ್ಚಾಗಿದ್ದ ಹತ್ತಿ ಬಟ್ಟೆಯಿಂದ ಚೆನ್ನಾಗಿ ಸುತ್ತಿದ್ದ ಆ ಗಂಟುಮೂಟೆ ಈಗ ಮಸುಕಾಗಿ ಹೋಗಿತ್ತು. ಅವನ ಹೆಜ್ಜೆಗಳ ಲಯಕ್ಕೆ ಅನುಗುಣವಾಗಿ ಅದು ಅತ್ತಿಂದಿತ್ತ ತಿರುಗುತ್ತಿತ್ತು. ಆ ಗಂಟುಮೂಟೆಯು ಕೈದಿಗಳ ಕ್ಯಾಂಪಿನ ಕಾಠಿಣ್ಯ ಮತ್ತು ಕಹಿಯನ್ನು ಹಿಡಿದಿಟ್ಟುಕೊಂಡಿತ್ತು. ಆಗೊಮ್ಮೆ ಈಗೊಮ್ಮೆ ಅವನು ತನ್ನ ಮನೆಗೆ ಹೋಗುವ ಪ್ರಯಾಣದಲ್ಲಿ ಸೂರ್ಯನ ಕಡೆ ನೋಡುತ್ತಿದ್ದನು. ಕೆಲವೊಮ್ಮೆ ಅವನು ಸಣ್ಣ ಬೇಲಿ ಹಾಕಿದ ಭೂಮಿಯ ಪಟ್ಟಿಗಳತ್ತ ಕಿರು ನೋಟ ಬೀರುತ್ತಿದ್ದನು. ಅದು ರೋಗ ಹಿಡಿದ ಜೋಳ, ಬೀನ್ಸ್ ಮತ್ತು ಬಟಾಣಿಗಳೊಂದಿಗೆ – ಉಳಿದೆಲ್ಲದರಂತೆ ಸ್ನೇಹಪರವಲ್ಲದಂತೆ ತೋರುತ್ತಿತ್ತು. ಇಡೀ ಹಳ್ಳಿ ನಿರ್ಜೀವವಾಗಿತ್ತು. ದಣಿದಂತೆ ತೋರುತ್ತಿತ್ತು. ಕಾಮು ಗೆ ಇದೇನೂ ಹೊಸದಲ್ಲ. ಅವನು ನೆನಪಿಸಿಕೊಂಡನು — ಮೌಮೌ ತುರ್ತು ಪರಿಸ್ಥಿತಿಗೆ ಮುಂಚೆಯೇ, ಗಿಕುಯು ಜನರು ಹೆಚ್ಚು ಹೆಚ್ಚು ಬೆಳೆದ ಭೂಮಿ ಶ್ರಮದಿಂದ ಕುಂದುಹೊಂದಿದಂತೆ ಕಾಣುತ್ತಿತ್ತು. ಇದೀಗ ಸ್ಥಿರ ಬದುಕು ಕಂಡಿರುವ ಪ್ರದೇಶದ ಹಸಿರು ಹೊಲಗಳೊಂದಿಗೆ ಹೋಲಿಸಿದರೆ ತುಂಬಾ ಬಡವಾಗಿ, ಬಿಸುಟಾಗಿ ಕಾಣಿಸುತ್ತಿತ್ತು.

ದಾರಿ ಎಡಕ್ಕೆ ಕವಲೊಡೆದಿತ್ತು. ಅವನು ಒಂದು ಕ್ಷಣ ಹಿಂಜರಿದ. ನಂತರ ಮನಸ್ಸು ಗಟ್ಟಿ ಮಾಡಿಕೊಂಡ. ಮೊದಲ ಬಾರಿಗೆ, ಕಣಿವೆಯೊಳಗೆ ಇಳಿದು ತನ್ನ ಹಳ್ಳಿಗೆ ಕರೆದೊಯ್ಯುವ ಹಾದಿಯಲ್ಲಿ ಹೋಗುವಾಗ ಅವನ ಕಣ್ಣುಗಳು ಸ್ವಲ್ಪ ಹೊಳೆದವು. ಕೊನೆಗೂ ಮನೆ ಹತ್ತಿರವಾಗಿತ್ತು. ಈ ಅರಿವಿನಿಂದ, ದೂರ ಪ್ರಯಾಣದಿಂದ ದಣಿದ ಪ್ರಯಾಣಿಕನ ದಣಿವು ಅವನನ್ನು ತೊರೆದಂತೆ ತೋರುತ್ತಿತ್ತು. ಕಣಿವೆ ಮತ್ತು ಅದರ ಉದ್ದಕ್ಕೂ ಇದ್ದ ಸಸ್ಯವರ್ಗವು ಸುತ್ತಮುತ್ತಲಿನ ಹಳ್ಳಿಗಳಿಗೆ ತೀವ್ರವಾಗಿ ವ್ಯತಿರಿಕ್ತವಾಗಿತ್ತು. ಏಕೆಂದರೆ ಇಲ್ಲಿ ಹಸಿರು ಪೊದೆಗಳು ಮತ್ತು ಮರಗಳು ಹುಲುಸಾಗಿ ಬೆಳೆದಿದ್ದವು. ಇದರ ಅರ್ಥ ಒಂದೇ- ಹೋನಿಯಾ ನದಿ ಇನ್ನೂ ಹರಿಯುತ್ತಿತ್ತು. ನದಿಯ ಮೇಲೆ ಕಣ್ಣು ಹಾಕುವವರೆಗೂ ಇದು ನಿಜವೆಂದು ನಂಬಲು ಸಾಧ್ಯವಾಗದವನಂತೆ ಅವನು ತನ್ನ ಹೆಜ್ಜೆಗಳನ್ನು ತೀವ್ರಗೊಳಿಸಿದನು. ಅದು ಅಲ್ಲೇ ಇತ್ತು; ಇನ್ನೂ ಹರಿಯುತ್ತಿತ್ತು. ತಾನು ಆಗಾಗ ಸ್ನಾನ ಮಾಡುತ್ತಿದ್ದ, ಅದರ ತಂಪಾದ ಜೀವಂತ ನೀರಿನಲ್ಲಿ ಬೆತ್ತಲೆಯಾಗಿ ಧುಮುಕುತ್ತಿದ್ದ ಹೋನಿಯಾ ನದಿ ಬಂಡೆಗಳನ್ನು ಬಳಸಿಕೊಂಡು ಹಾವಿನಂತೆ ಹರಿಯುತ್ತಿರುವುದನ್ನು ನೋಡಿ ಅದರ ಮೆದುವಾದ ಕಲರವ ಕೇಳಿ ಅವನ ಹೃದಯ ಬೆಚ್ಚಗಾಯಿತು. ನೋವಿನಿಂದ ಕೂಡಿದ ಉತ್ಸಾಹ ಅವನ ಮೈಮನವನ್ನು ಆವರಿಸಿತು. ಒಂದು ಕ್ಷಣ ಮತ್ತೆ ಅವನು ಆ ದಿನಗಳಿಗಾಗಿ ಹಾತೊರೆದ. ಅವನು ನಿಟ್ಟುಸಿರುಬಿಟ್ಟ. ಬಹುಶಃ ಬದಲಾದ ಅವನ ಮುಖದ ಕಠಿಣ ರೇಖೆಗಳಲ್ಲಿ , ನದಿ ತೀರವೇ ಸರ್ವಸ್ವವಾಗಿದ್ದ ಆ ಬಾಲಕನನ್ನು ಈ ನದಿಯು ಗುರುತಿಸಲಾರದು. ಆದರೆ ಅವನು ಹೋನಿಯಾವನ್ನು ಸಮೀಪಿಸುತ್ತಿದ್ದಂತೆ , ಬಿಡುಗಡೆಯಾದಾಗಿನಿಂದ ಬೇರೆ ಯಾವುದರೊಂದಿಗೂ ಅನುಭವಿಸದ ಅಪ್ತತೆಯನ್ನು ಅನುಭವಿಸಿದನು.

ಮಹಿಳೆಯರ ಗುಂಪೊಂದು ನೀರು ಸೇದುತ್ತಿತ್ತು. ಅವನು ಉತ್ಸುಕನಾಗಿದ್ದನು. ಏಕೆಂದರೆ ಅವನು ಬೆಟ್ಟದ ತುದಿಯಿಂದ ಒಬ್ಬಿಬ್ಬರನ್ನು ಗುರುತಿಸಿದ್ದ. ಅಲ್ಲಿ ಮಧ್ಯವಯಸ್ಕ ವಾಂಜಿಕು ಇದ್ದಳು. ಕಿವಿ ಕೇಳದ ಅವಳ ಮಗನನ್ನು ಭದ್ರತಾ ಪಡೆಗಳು ತನ್ನನ್ನು ಬಂಧಿಸುವ ಸ್ವಲ್ಪ ಮುಂಚೆಯಷ್ಟೇ ಗುಂಡಿಕ್ಕಿ ಕೊಂದಿದ್ದರು. ಆಕೆ ಯಾವತ್ತೂ ಹಳ್ಳಿಯ ಪ್ರೀತಿಪಾತ್ರಳಾಗಿದ್ದಳು. ಎಲ್ಲರಿಗೂ ನಗು ಮತ್ತು ತಿನಿಸನ್ನು ಹಂಚುತ್ತಿದ್ದವಳು. ಅವರು ಇವನನ್ನು ಸ್ವೀಕರಿಸುತ್ತಾರೆಯೇ? ಇವನಿಗೆ ವಿರೋಚಿತ ಸ್ವಾಗತ ನೀಡುವರೇ? ಅವನು ಹಾಗೆಯೇ ಭಾವಿಸಿದ್ದನು. ಈ ಬೆಟ್ಟದ ತುಂಬೆಲ್ಲ ಅವನು ಪ್ರಸಿದ್ದಿ ಪಡೆದವನಾಗಿರಲಿಲ್ಲವೇ? ನೆಲಕ್ಕಾಗಿ ಹೋರಾಡಲಿಲ್ಲವೇ? ಅವನು ಓಡಿ ಹೋಗಿ

” ನೋಡಿ ಇಗೋ ನಾನು ನಿಮ್ಮ ಬಳಿ ಹಿಂತಿರುಗಿದ್ದೇನೆ?” ಎಂದು ಕಿರುಚಬೇಕು ಅಂದುಕೊಂಡ. ಆದರೇ ಆ ಯೋಚನೆ ಬಿಟ್ಟ. ಅವನು ಮನುಶ್ಯನಾಗಿದ್ದ.

“ನೀನು ಚೆನ್ನಾಗಿದ್ದಿಯಾ? ” ಕೆಲವು ಧ್ವನಿಗಳು ಪ್ರತಿಕ್ರಿಯಿಸಿದವು. ದಣಿದ ಮತ್ತು ಸವೆದ ಮುಖಗಳ ಇತರ ಹೆಂಗಸರು ಅವನ ಶುಭಾಶಯಗಳಿಗೆ ಯಾವುದೇ ಅರ್ಥವಿಲ್ಲ ಎಂಬಂತೆ ಮೌನವಾಗಿ ಅವನನ್ನು ನೋಡಿದರು. ಯಾಕೆ! ಅವನು ಕ್ಯಾಂಪಿನಲ್ಲಿ ಅಷ್ಟೊಂದು ಸಮಯ ಕಳೆದನೇ?

” ನಿಮಗೆ ನನ್ನ ನೆನಪಿಲ್ಲವೇ?” ಎಂದವನು ಬತ್ತಿ ಹೋದ ಉತ್ಸಾಹದಲ್ಲಿ ಕುಗ್ಗಿದ ದನಿಯಲ್ಲಿ ಹೇಳಿದ. ಅವರು ಮತ್ತೆ ಅವನನ್ನು ತಣ್ಣಗಿನ ಕಾಠಿಣ್ಯದಲ್ಲಿ ದಿಟ್ಟಿಸಿದರು. ಉಳಿದೆಲ್ಲದರಂತೆ ಅವರು ಸಹ ಅವನ ಬಗ್ಗೆ ತಿಳಿದುಕೊಳ್ಳಲು ಅವನನ್ನು ಒಳಗೊಳ್ಳಲು ನಿರಾಕರಿಸುತ್ತಿರುವಂತೆ ತೋರುತ್ತಿತ್ತು. ಕೊನೆಗೆ ಅವನನ್ನು ಗುರುತಿಸಿದ್ದು ವಾಂಜಿಕು. ಅವಳು ಪ್ರೀತಿ ಉತ್ಸಾಹಗಳಿಲ್ಲದ ದನಿಯಲ್ಲಿ

” ಒಹ್! ಇದು ನೀನೆನಾ ಕಾಮು? ನಾವು ಅಂದ್ಕೊಂಡ್ವಿ ನೀನು….” ಆಕೆ ಮುಂದುವರೆಸಲಿಲ್ಲ. ಆಗ ಮಾತ್ರ ಆತ ಬೇರೆನನ್ನೋ ಗಮನಿಸಿದ – ಆಶ್ಚರ್ಯ? ಭಯ? ಆತ ಹೇಳಲಾರ. ತನ್ನೆಡೆಗೆ ಬರುತ್ತಿದ್ದ ಅವರ ತೀಕ್ಷ್ಣ ನೋಟಗಳನ್ನು ಅವನು ಗಮನಿಸಿದ. ಯಾವುದೋ ರಹಸ್ಯವೊಂದು ತನ್ನನ್ನು ಅವರಿಂದ ಬೇರ್ಪಡಿಸಿ ಅವರನ್ನೆಲ್ಲ ಬಂಧಿಸಿಟ್ಟಿದೆ ಎಂಬುದನ್ನು ಅರಿತುಕೊಂಡ.

” ಬಹುಷಃ ಇನ್ನು ಮುಂದೆ ನಾನು ಅವರಲ್ಲೊಬ್ಬನಲ್ಲವೇ!” ಕಟುವಾಗಿ ಯೋಚಿಸಿದ. ಆದರೆ ಅವರು ಅವನಿಗೆ ಹೊಸ ಹಳ್ಳಿಯ ಬಗ್ಗೆ ಹೇಳಿದರು. ಬೆಟ್ಟದ ತುಂಬೆಲ್ಲ ತೆಳುವಾಗಿ ಹರಡಿಕೊಂಡಿದ್ದ ಗುಡಿಸಲುಗಳ ಹಳ್ಳಿ ಈಗ ಇರಲಿಲ್ಲ.

ಅವನು ಅಲ್ಲಿಂದ ಹೊರಟ. ಅವನೊಳಗೆ ಕಹಿ ಹುಟ್ಟಿ ತಾನು ಮೋಸ ಹೋದಂತೆ ಭಾಸವಾಯಿತು. ಹಳೆ ಹಳ್ಳಿಯು ಅವನಿಗಾಗಿ ಕಾಯಲೂ ಇಲ್ಲ. ಇದ್ದಕ್ಕಿದ್ದಂತೆ ಅವನಿಗೆ ತನ್ನ ಹಳೆಯ ಮನೆ, ಗೆಳೆಯರು ಮತ್ತು ಹಳೆಯ ಪರಿಸರಕ್ಕಾಗಿ ಹಂಬಲಿಸಿದ. ಅವನು ತನ್ನ ತಂದೆಯ ಬಗ್ಗೆ, ತಾಯಿಯ ಬಗ್ಗೆ ಯೋಚಿಸಿದ ಮತ್ತು… ಮತ್ತು …..ಅವಳ ಬಗ್ಗೆ ಯೋಚಿಸಲು ಅವನು ಧೈರ್ಯ ಮಾಡಲಿಲ್ಲ. ಆದರೂ ಮುಥೋನಿ ಹಳೆಯ ದಿನಗಳಲ್ಲಿದ್ದಂತೆಯೇ ಅವನ ಮನಸ್ಸಿಗೆ ಮರಳಿದಳು. ಅವನ ಹೃದಯದ ಬಡಿತ ಹೆಚ್ಚಾಯಿತು. ಅವನಲ್ಲಿ ಹುಟ್ಟಿದ ಆಸೆ ಮತ್ತು ಬೆಚ್ಚಗಿನ ಪ್ರೀತಿಯಿಂದ ರೋಮಾಂಚಿತನಾದ. ತನ್ನ ನಡಿಗೆಯ ವೇಗ ಹೆಚ್ಚಿಸಿದ. ತನ್ನ ಹೆಂಡತಿಯನ್ನು ನೆನಪಿಸಿಕೊಂಡಂತೆ ಹಳ್ಳಿಯ ಹೆಂಗಸರನ್ನು ಮರೆತನು. ಅವನು ಅವಳೊಂದಿಗೆ ಇದ್ದದ್ದು ಕೇವಲ ಎರಡು ವಾರಗಳಷ್ಟೇ. ನಂತರ ವಸಾಹತು ಪಡೆಗಳು ಇತರ ಅನೇಕರಂತೆ ಅವನನ್ನು ಎಳೆದೊಯ್ದಿದ್ದವು. ಅವನನ್ನು ಆತುರದಿಂದ ಪರೀಕ್ಷಿಸಿ ವಿಚಾರಣೆಯಿಲ್ಲದೆ ಬಂಧಿಸಲಾಯಿತು. ಆ ಸಮಯದಲ್ಲಿ ಅವನು ತನ್ನ ಹಳ್ಳಿ ಮತ್ತು ಸುಂದರವಾದ ಹೆಂಡತಿಯನ್ನು ಬಿಟ್ಟು ಬೇರೆನನ್ನೂ ಯೋಚಿಸಿರಲಿಲ್ಲ.

ಉಳಿದವರೂ ಅವನಂತೆಯೇ ಇದ್ದರು. ಅವರೆಲ್ಲ ತಮ್ಮ ಮನೆಯನ್ನು ಬಿಟ್ಟು ಬೇರೆ ಮಾತನಾಡುತ್ತಿರಲಿಲ್ಲ. ಒಂದು ದಿನ ಅವನು ಮುರುಂಗಾದ ಇನ್ನೊಬ್ಬ ಬಂಧಿತನ ಜೊತೆ ಕೆಲಸ ಮಾಡುತ್ತಿದ್ದ. ಸಡನ್ ಆಗಿ ಬಂಧಿತ ನಜೊರೊಗೆ ಕಲ್ಲು ಒಡೆಯುವುದನ್ನು ನಿಲ್ಲಿಸಿದ. ಭಾರವಾದ ನಿಟ್ಟುಸಿರು ಬಿಟ್ಟ. ಅವನ ದಣಿದ ಕಣ್ಣುಗಳು ದೂರ ನೆಟ್ಟಿದ್ದವು.

“ಏನಾಯ್ತಪ್ಪ? ಏನಾಯ್ತು ನಿನಗೆ” ಕಾಮು ಕೇಳಿದ.

” ನನ್ನ ಹೆಂಡತಿ. ನಾನವಳನ್ನು ಬಿಟ್ಟು ಬಂದಾಗ ಅವಳು ತುಂಬು ಗರ್ಭೀಣಿ. ಅವಳಿಗೆ ಏನಾಯ್ತೋ ಹೇಗಿದ್ದಾಳೊ ಗೊತ್ತಿಲ್ಲ”

ಮತ್ತೊಬ್ಬ ಬಂಧಿತ, ” ನಾನು ನನ್ನ ಹೆಂಡತಿಯ ಜೊತೆ ಮಗುವನ್ನೂ ಬಿಟ್ಟು ಬಂದಿದ್ದೇನೆ. ಆಗಷ್ಟೇ ಹುಟ್ಟಿದ ಮಗು. ನಾವೆಲ್ಲ ತುಂಬಾ ಸಂತೋಷವಾಗಿದ್ದೇವು. ಆದರೇ ಆ ದಿನವೇ ನನ್ನನ್ನು ಬಂಧಿಸಿದರು”

ಎಲ್ಲರದ್ದೂ ಹೀಗೆಯೇ ಕತೆ. ಅವರೆಲ್ಲ ಕಾದಿದ್ದು ಒಂದೇ ದಿನಕ್ಕಾಗಿ. . ತಾವು ಮರಳಿ ಮನೆಗೆ ಹೋಗುವ ದಿನಕ್ಕಾಗಿ. ಮತ್ತೆ ಹೊಸದಾಗಿ ಬದುಕು ಆರಂಭಿಸುವುದಕ್ಕಾಗಿ.

ಕಾಮು ಸ್ವತಃ ತನ್ನ ಹೆಂಡತಿಯನ್ನು ಮಕ್ಕಳಿಲ್ಲದೆ ಬಿಟ್ಟು ಬಂದಿದ್ದ. ಅವನಿನ್ನ ವಧು-ದಕ್ಷಿಣೆಯನ್ನು ಪಾವತಿಸಿ ಮುಗಿಸಿರಲಿಲ್ಲ. ಆದರೀಗ ಆತ ನೈರೋಬಿಗೆ ಹೋಗಿ ಕೆಲಸ ಹುಡುಕಿ ಮಥೋನಿಯ ಪಾಲಕರಿಗೆ ಉಳಿದ ಹಣ ಪಾವತಿಸುವ ಯೋಚನೆ ಮಾಡಿದ. ಬದುಕು ನಿಜವಾಗಿಯೂ ಹೊಸದಾಗಿ ಆರಂಭವಾಗುವುದಿತ್ತು. ಒಬ್ಬ ಗಂಡು ಮಗು ಹುಟ್ಟಿ ಅವನನ್ನು ತಮ್ಮ ಮನೆಯಲ್ಲೇ ಬೆಳೆಸಬೇಕು. ಈ ನಿರೀಕ್ಷೆಗಳ ಜೊತೆಗೆ ಅವನು ಇನ್ನಷ್ಟು ವೇಗವಾಗಿ ಹೆಜ್ಜೆ ಹಾಕಿದ. ಅವನು ಓಡಲು ಬಯಸಿದ .. ಇಲ್ಲ. ತನ್ನ ಮರಳುವಿಕೆಯನ್ನು ಇನ್ನಷ್ಟು ತ್ವರಿತಗೊಳಿಸಲು ಹಾರಲು ಬಯಸಿದ. ಈಗ ಆತ ಬೆಟ್ಟದ ತುದಿಯ ಹತ್ತಿರದಲ್ಲಿದ್ದ.

ಈಗಲೇ ತನ್ನ ಅಣ್ಣ-ತಂಗಿಯರನ್ನು ಭೇಟಿಯಾಗಲು ಹಾತೊರೆದ. ಅವರು ಇವನನ್ನು ಪ್ರಶ್ನಿಸುವರೇ? ಅವನು ಹೇಗಿದ್ದರೂ ಅವರಿಗೆ ಎಲ್ಲವನ್ನೂ ಹೇಳುತ್ತಿರಲಿಲ್ಲ. ಹೊಡೆತ ತಿಂದದ್ದು, ತಪಾಸಣೆ, ಅವನು ವಿಶ್ರಾಂತಿ ಪಡೆದರೆ ಅವನನ್ನು ಒದೆಯಲು ಸದಾ ಸಿದ್ದನಾಗಿರುವ ಅಸ್ಕರಿಯೊಂದಿಗೆ ರಸ್ತೆ ಮತ್ತು ಕ್ವಾರಿಗಳಲ್ಲಿ ಕೆಲಸ. ಹೌದು ಅವನು ಸಾಕಷ್ಟು ಅವಮಾನಗಳನ್ನು ಅನುಭವಿಸಿದ್ದಾನೆ. ಯಾವುದಕ್ಕೂ ಅವನು ಪ್ರತಿರೋಧಿಸಲಿಲ್ಲ. ಆದರ ಅಗತ್ಯವಾದರೂ ಇತ್ತೆ? ಆದರೆ ಅವನ ಆತ್ಮ ಮತ್ತು ಅವನ ಪುರುಶತ್ವದ ಎಲ್ಲಾ ಶಕ್ತಿಯು ಕೋಪ ಮತ್ತು ಕಹಿಯಿಂದ ದಂಗೆಯೆದ್ದಿತು.

ಒಂದು ದಿನ ಈ ವಾಜಿಂಗುಗಳು (ಬಿಳಿಯರು) ತೊಲಗುತ್ತವೆ!

ಒಂದು ದಿನ ಅವನ ಜನರು ಸ್ವತಂತ್ರರಾಗುತ್ತಾರೆ. ಆಗ! ಆಗ ಅವನಿಗೆ ಏನು ಮಾಡಬೇಕೆಂದು ತಿಳಿದಿರಲಿಲ್ಲ. ಅದಾಗ್ಯೂ ಯಾರೂ ಮತ್ತೆಂದೂ ಅವನ ಪುರುಷಾವಸ್ಥೆಯನ್ನು ಕೆಣಕಲಾರರು ಎಂದು ತನ್ನಷ್ಟಕ್ಕೆ ಭರವಸೆ ಕೊಟ್ಟುಕೊಂಡ.

ಅವನು ಬೆಟ್ಟವನ್ನು ಹತ್ತಿದ. ನಂತರ ನಿಂತ. ಇಡೀ ಬಯಲು ಕೆಳಗಡೆ ಇತ್ತು. ಹೊಸ ಹಳ್ಳಿ ಅವನೆದುರಿಗಿತ್ತು. ವೇಗವಾಗಿ ಕಣ್ಮರೆಯಾಗುತ್ತಿರುವ ಸೂರ್ಯನ ಕೆಳಗೆ ಬಯಲಿನಲ್ಲಿ ಕುಳಿತಿದ್ದ ಸಾಂದ್ರವಾದ ಮಣ್ಣಿನ ಗುಡಿಸಲಿನ ಸಾಲುಗಳು. ವಿವಿಧ ಗುಡಿಸಲುಗಳಿಂದ ಕಡು ನೀಲಿ ಹೊಗೆ ಮೇಲಕ್ಕೆ ಸುರುಳಿಯಾಗಿ ಹಳ್ಳಿಯ ಮೇಲೆ ಸುಳಿದಾಡುವ ಕಪ್ಪು ಮಂಜನ್ನು ರೂಪಿಸಿತು. ಆಚೆ, ಆಳವಾದ ಕೆಂಪು ರಕ್ತದ ಸೂರ್ಯ ಮುಳುಗುತ್ತ , ಬೆರಳಿನಂತಹ ಬೆಳಕಿನ ಗೆರೆಗಳನ್ನು ಹೊರಹಾಕಿದನು. ಆ ಬೆಳಕಿನ ಗೆರೆಗಳು ಹೊರಕ್ಕೆ ತೆಳುವಾಗಿ ದೂರದ ಬೆಟ್ಟಗಳನ್ನು ಆವರಿಸಿದ್ದ ಬೂದು ಮಂಜಿನೊಂದಿಗೆ ಬೆರೆತು ಹೋಯಿತು.

ಹಳ್ಳಿಯಲ್ಲಿ ಅವನು ಬೀದಿಯಿಂದ ಬೀದಿಗೆ ಚಲಿಸುತ್ತ ಹೊಸ ಮುಖಗಳನ್ನು ಭೇಟಿಯಾದನು. ಅಲ್ಲಲ್ಲಿ ವಿಚಾರಿಸಿದನು. ಅವನು ತನ್ನ ಮನೆಯನ್ನು ಕಂಡುಕೊಂಡ. ಮನೆಯ ಅಂಗಳದ ಪ್ರವೇಶ ದ್ವಾರದಲ್ಲಿ ನಿಂತು ಗಟ್ಟಿಯಾಗಿ ಮತ್ತು ಸಂಪೂರ್ಣವಾಗಿ ಒಮ್ಮೆ ಉಸಿರಾಡಿದನು. ಇದು ಅವನು ಮನೆಗೆ ಹಿಂತಿರುಗಿದ ಕ್ಷಣವಾಗಿತ್ತು. ಅವನ ತಂದೆ ಮೂರು ಕಾಲಿನ ಸ್ಟೂಲಿನ ಮೇಲೆ ಒಂಟಿಯಾಗಿ ಕುಳಿತಿದ್ದ. ಅವನಿಗೀಗ ತುಂಬಾ ವಯಸ್ಸಾಗಿತ್ತು. ಕಾಮು ಆ ಮುದುಕನನ್ನು ಕರುಣೆಯಿಂದ ನೋಡಿದ. ಆದರೆ ಅವನು ಬದುಕಿ ಉಳಿದಿದ್ದ. – ಹೌದು ಅವನ ಮಗನು ಮನೆಗೆ ಮರಳುವುದನ್ನು ನೋಡಲು ಅವನನ್ನು ಉಳಿಸಲಾಗಿತ್ತು.

“ಅಪ್ಪ!”

ಆ ಮುದುಕ ಉತ್ತರಿಸಲಿಲ್ಲ. ಅವನು ವಿಚಿತ್ರವಾದ ಖಾಲಿ ಕಣ್ಣುಗಳಿಂದ ಕಾಮುನನ್ನು ನೋಡಿದ. ಕಾಮು ಅಸಹನೆಯಿಂದಿದ್ದ. ಅವನಿಗೆ ಕಿರಿಕಿರಿಯಾಯಿತು. ಅವನು ತನ್ನನ್ನು ನೋಡಲಿಲ್ಲವೇ? ಕಾಮು ನದಿಯಲ್ಲಿ ಭೇಟಿಯಾದ ಹೆಂಗಸರಂತೆ ಇವನೂ ವರ್ತಿಸುತ್ತಿದ್ದಾನೆಯೇ?

ಬೀದಿಯಲ್ಲಿ, ಬೆತ್ತಲೆ ಮತ್ತು ಅರೆಬೆತ್ತಲೆ ಮಕ್ಕಳು ಆಟವಾಡುತ್ತಾ ಒಬ್ಬರಿಗೊಬ್ಬರು ಧೂಳು ಎರಚುತ್ತಿದ್ದರು. ಸೂರ್ಯ ಈಗಾಗಲೇ ಮುಳುಗಿದ್ದನು ಮತ್ತು ಚಂದ್ರನ ಬೆಳಕು ಇರುವಂತೆ ಕಾಣುತ್ತಿತ್ತು.

” ಅಪ್ಪ, ನಿನಗೆ ನನ್ನ ನೆನಪಿಲ್ಲವೇ?” ಅವನಲ್ಲಿ ಭರವಸೆ ಮುಳುಗುತ್ತಿತ್ತು.

ಅವನಿಗೆ ಆಯಾಸವಾಯಿತು. ನಂತರ ಅವನು ತನ್ನ ತಂದೆ ಇದ್ದಕ್ಕಿದ್ದಂತೆ ಉಬ್ಬಿಕೊಂಡು ಎಲೆಯಂತೆ ನಡುಗುವುದನ್ನು ನೋಡಿದನು. ಮುದುಕನು ತನ್ನ ಕಣ್ಣುಗಳನ್ನೇ ನಂಬಂದಂತೆ ದಿಟ್ಟಿಸುವುದನ್ನು ನೋಡಿದನು. ಆ ಕಣ್ಣುಗಳಲ್ಲಿ ಭಯ ಸ್ಪಷ್ಟವಾಗಿತ್ತು. ಅವನ ತಾಯಿ ಬಂದರು. ಮತ್ತು ಅವನ ಸಹೋದರರೂ ಬಂದರು. ಅವರು ಅವನ ಸುತ್ತಲೂ ನೆರೆದಿದ್ದರು. ಅವನ ವಯಸ್ಸಾದ ತಾಯಿ ಅವನನ್ನು ಅಂಟಿಕೊಂಡು ತೀವ್ರವಾಗಿ ಅಳುತ್ತಿದ್ದಳು.

“ನನ್ನ ಮಗ ಬರುತ್ತಾನೆಂದು ನನಗೆ ತಿಳಿದಿತ್ತು. ಅವನು ಸತ್ತಿಲ್ಲ ಎಂದು ನನಗೆ ತಿಳಿದಿತ್ತು.”

“ಏಕೆ, ನಾನು ಸತ್ತೆ ಅಂತ ನಿನಗೆ ಯಾರು ಹೇಳಿದ್ರು?”

“ಆ ಕರಂಜ , ನ್ಜೋಗುವಿನ ಮಗ .”

ನಂತರ ಕಾಮು ಅರ್ಥ ಮಾಡಿಕೊಂಡನು. ತನ್ನ ನಡಗುವ ತಂದೆಯನ್ನು ಅರ್ಥ ಮಾಡಿಕೊಂಡನು. ನದಿಯ ಬಳಿಯ ಮಹಿಳೆಯರನ್ನು ಅರ್ಥ ಮಾಡಿಕೊಂಡನು. ಆದರೇ ಒಂದು ವಿಷಯ ಅವನನ್ನು ಗೊಂದಲಗೊಳಿಸಿತು. ಅವನು ಕರಂಜ ನ ಜೊತೆ ಅದೇ ಬಂಧಿತರ ಕ್ಯಾಂಪಿನಲ್ಲಿ ಎಂದಿಗೂ ಇರಲಿಲ್ಲ. ಏನೇ ಆಗಲಿ ಈಗ ಅವನು ಹಿಂತಿರುಗಿಯಾಗಿತ್ತು. ಅವನು ಈಗ ಮುಥೋನಿಯನ್ನು ನೋಡಲು ಬಯಸಿದನು. ಅವಳು ಏಕೆ ಹೊರಗೆ ಬರಲಿಲ್ಲ? ಅವನು “ನಾನು ಬಂದಿದ್ದೇನೆ, ಮುಥೋನಿ ; ನಾನು ಇಲ್ಲಿದ್ದೇನೆ” ಎಂದು ಕೂಗಬೇಕೆಂದು ಕೊಂಡನು . ಸುತ್ತಲೂ ನೋಡಿದನು. ಅವನ ತಾಯಿ ಅವನನ್ನು ಅರ್ಥಮಾಡಿಕೊಂಡಳು. ಅವಳು ಬೇಗನೆ ತನ್ನ ಗಂಡನ ಕಡೆಗೆ ಒಮ್ಮೆ ನೋಡಿ ಸಹಜವಾಗಿ ಹೇಳಿದಳು:

” ಮುಥೋನಿ ಹೊರಟು ಹೋದಳು.”

ಕಾಮುವಿನ ಹೊಟ್ಟೆಯಲ್ಲಿ ತಣ್ಣಗೆ ಏನೋ ತಿವಿದಂತಾಯ್ತು. ಅವನು ಹಳ್ಳಿಯ ಗುಡಿಸಲುಗಳು ಮತ್ತು ನಿಸ್ತೇಜ ನೆಲವನ್ನು ನೋಡಿದ. ಅವನಲ್ಲಿ ಅನೇಕ ಪ್ರಶ್ನೆಗಳಿದ್ದವು. ಕೇಳುವ ಧೈರ್ಯ ಬರಲಿಲ್ಲ.

ಮುಥೋನಿ ಬಿಟ್ಟು ಹೋಗಿದ್ದಾಳೆಂದು ಅವನಿಗೆ ಇನ್ನೂ ನಂಬಲಾಗಲಿಲ್ಲ. ಆದರೆ ನದಿಯಲ್ಲಿದ್ದ ಮಹಿಳೆಯರ ನೋಟದಿಂದ, ಅವನ ಹೆತ್ತವರ ನೋಟದಿಂದ ಅವಳು ಹೋಗಿದ್ದಾಳೆಂದು ಅವನಿಗೆ ತಿಳಿದಿತ್ತು.

“ಅವಳು ನಮಗೆ ಒಳ್ಳೆಯ ಮಗಳಾಗಿದ್ದಳು” ಅವನ ತಾಯಿ ವಿವರಿಸುತ್ತಿದ್ದರು.

“ಅವಳು ನಿನಗಾಗಿ ಕಾಯುತ್ತಿದ್ದಳು ಮತ್ತು ನೆಲದ ಎಲ್ಲಾ ತೊಂದರೆಗಳನ್ನು ತಾಳ್ಮೆಯಿಂದ ಸಹಿಸಿಕೊಂಡಳು. ನಂತರ ಕಾರಂಜಾ ಬಂದು ನೀನು ಸತ್ತಿದ್ದೀಯಾ ಎಂದು ಹೇಳಿದ. ನಿನ್ನ ತಂದೆ ಅವನನ್ನು ನಂಬಿದ. ಅವಳು ಕೂಡ ಅವನನ್ನು ನಂಬಿದಳು ಮತ್ತು ಒಂದು ತಿಂಗಳು ರೋಧಿಸಿದಳು. ಕಾರಂಜಾ ನಿರಂತರವಾಗಿ ನಮ್ಮಲ್ಲಿ ಭೇತಿ ನೀಡುತ್ತಿದ್ದ. ಅವನು ನಿನ್ನ ವಯಸ್ಸಿನವನೇ, ನಿನಗೆ ಗೊತ್ತು. ನಂತರ ಅವಳಿಗೆ ಒಂದು ಮಗು ಜನಿಸಿತು. ನಾವು ಅವಳನ್ನು ಇಟ್ಟುಕೊಳ್ಳಬಹುದಿತ್ತು. ಆದರೆ ಜಾಗ ಎಲ್ಲಿದೆ? ಆಹಾರ ಎಲ್ಲಿದೆ? ಭೂ ಕ್ರೋಢೀಕರಣದ ನಂತರ, ನಮ್ಮ ಕೊನೆಯ ಭದ್ರತೆಯನ್ನು ಸಹ ಕಸಿದುಕೊಳ್ಳಲಾಯಿತು. ನಾವು ಕಾರಂಜಾನನ್ನು ಅವಳೊಂದಿಗೆ ಹೋಗಲು ಬಿಟ್ಟೆವು. ಇತರ ಮಹಿಳೆಯರು ಇನ್ನಷ್ಟು ಕೇಡನ್ನು ಮಾಡಿದ್ದಾರೆ – ಪಟ್ಟಣಕ್ಕೆ ಹೋಗಿದ್ದಾರೆ. ದುರ್ಬಲರು ಮತ್ತು ವೃದ್ಧರು ಮಾತ್ರ ಇಲ್ಲಿ ಉಳಿದಿದ್ದಾರೆ.”

ಅವನು ಕೇಳಿಸಿಕೊಳ್ಳುತ್ತಿರಲಿಲ್ಲ. ಅವನ ಹೊಟ್ಟೆಯಲ್ಲಿ ತಣ್ಣಗೆ ತಿವಿದದ್ದು ಕಹಿ ತುಂಬಿದ ನೋವಾಗಿ ಬದಲಾಯಿತು. ಅವನು ಎಲ್ಲರಿಂದ ಮೋಸ ಹೋದಂತೆ ಭಾವಿಸಿದನು. ಅವನ ತಂದೆ ಮತ್ತು ತಾಯಿ ಸೇರಿದಂತೆ ಎಲ್ಲಾ ಜನರು ಅವನಿಗೆ ದ್ರೋಹವೆಸಗಿದ್ದರು. ಕಾರಂಜಾ ಯಾವತ್ತಿಗೂ ಅವನ ಪ್ರತಿಸ್ಪರ್ಧಿಯಾಗಿದ್ದ. ಐದು ವರ್ಷ ಕಡಿಮೆ ಸಮಯವಲ್ಲ ಹೌದು. ಆದರೇ ಆಕೆ ನನ್ನನ್ನು ಯಾಕೆ ಬಿಟ್ಟು ಹೋದಳು? ಇವರೆಲ್ಲ ಯಾಕೆ ಆಕೆಯನ್ನು ಬಿಟ್ಟುಕೊಟ್ಟರು? ಇವನು ಮಾತನಾಡಲು ಬಯಸಿದ್ದ. ಹೌದು ಎಲ್ಲವನ್ನು ಖಂಡಿಸ ಬೇಕೆಂದಿದ್ದ. – ನದಿಯ ಮಹಿಳೆಯರು, ಆ ಹಳ್ಳಿ ಮತ್ತು ಅಲ್ಲಿನ ಜನ ಎಲ್ಲವನ್ನೂ. ಆದರವನಿಗೆ ಸಾಧ್ಯವಾಗಲಿಲ್ಲ. ಈ ಕಹಿಯಾದ ನೋವು ಅವನನ್ನು ಉಸಿರುಗಟ್ಟಿಸುತ್ತಿತ್ತು.

 

” ನೀನು.. ನೀನು.. ನನ್ನವಳನ್ನೇ ಕೊಟ್ಟು ಬಿಟ್ಟೆಯಾ?” ಎಂದು ಪಿಸುಗುಟ್ಟಿದನು.

” ಇಲ್ಲಿ ಕೇಳು ಮಗು.. ಮಗೂ”

ದೊಡ್ಡ ಹಳದಿ ಚಂದ್ರನು ದಿಗಂತವನ್ನು ಆವರಿಸಿದ್ದನು. ಅವನು ಕಹಿ-ನೋವು ಮತ್ತು ಕುರುಡನಾಗಿ ಆತುರದಿಂದ ಹೊರಟುಹೋದನು ಮತ್ತು ನೇರ ಹೋನಿಯಾ ನದಿಯ ಬಳಿ ಬಂದಾಗಲೇ ನಿಂತನು. ಮತ್ತು ದಡದಲ್ಲಿ ನಿಂತಾಗ, ಅವನು ನದಿಯನ್ನು ನೋಡಲಿಲ್ಲ, ಆದರೆ ಅವನ ನಿರೀಕ್ಷೆಗಳು ನೆಲದ ಮೇಲೆ ಬಿದ್ದಿದ್ದವು. ತನ್ನ ನಿರಂತರ ಏಕತಾನತೆಯಲ್ಲಿ ಗುಣುಗುಟ್ಟುತ್ತ ನದಿ ವೇಗವಾಗಿ ಚಲಿಸಿತು. ಕಾಡಿನಲ್ಲಿ ಕ್ರಿಕೆಟ್ಟು ಕೀಟ ಮತ್ತು ಇತರ ಕೀಟಗಳು ನಿರಂತರ ಝೇಂಕಾರವನ್ನು ಮಾಡುತ್ತಲೇ ಇದ್ದವು. ಮತ್ತು ಮೇಲೆ, ಚಂದ್ರನು ಪ್ರಕಾಶಮಾನವಾಗಿ ಹೊಳೆಯುತ್ತಿದ್ದನು. ಅವನು ತನ್ನ ಕೋಟ್ ಅನ್ನು ತೆಗೆಯಲು ಪ್ರಯತ್ನಿಸಿದಾಗ ಅವನು ತುಂಬಾ ದೃಢವಾಗಿ ಹಿಡಿದಿದ್ದ ಸಣ್ಣ ಗಂಟು ಕೆಳಗೆ ಬಿದ್ದಿತು. ಅದು ದಡದಿಂದ ಉರುಳಿತು ಮತ್ತು ಕಾಮುಗೆ ಏನಾಗುತ್ತಿದೆ ಎಂದು ತಿಳಿಯುವ ಮೊದಲು, ಅದು ನದಿಯ ಕೆಳಗೆ ವೇಗವಾಗಿ ತೇಲುತ್ತಿತ್ತು.

ಒಂದು ಕ್ಷಣ ಅವನು ಆಘಾತಕ್ಕೊಳಗಾದನು ಮತ್ತು ಅದನ್ನು ಮರಳಿ ಪಡೆಯಲು ಬಯಸಿದನು. ಅವನು ಅದರಿಂದ ಏನು ತೋರಿಸುತ್ತಿದ್ದನು – ಓಹ್, ಅವನು ಇಷ್ಟು ಬೇಗ ಮರೆತನೆ? ಅವನ ಹೆಂಡತಿ ಬಿಟ್ಟು ಹೋಗಿದ್ದಳು ಅದರ ಜೊತೆಗೇ ಅವಳನ್ನು ವಿಚಿತ್ರವಾಗಿ ನೆನಪಿಸಿದ ಮತ್ತು ಅವನು ಇಷ್ಟು ವರ್ಷಗಳ ಕಾಲ ಕಾವಲು ಕಾಯುತ್ತಿದ್ದ ಸಣ್ಣ ಸಂಗತಿಗಳೂ ಹೋಗಿದ್ದವು! ಅವನಿಗೆ ಏಕೆ ಎಂದು ತಿಳಿಯಲಿಲ್ಲ ಆದರೆ ಹೇಗೋ ಅವನಿಗೆ ನಿರಾಳವೆನಿಸಿತು. ಮುಳುಗುವ ಆಲೋಚನೆಗಳು ಚದುರಿಹೋದವು. ಅವನು ತನ್ನ ಕೋಟ್ ಅನ್ನು ಮತ್ತೆ ಧರಿಸಲು ಪ್ರಾರಂಭಿಸಿದನು, “ಅವಳು ನನಗಾಗಿ ಏಕಾದರೂ ಕಾಯಬೇಕಿತ್ತು? ಎಲ್ಲಾ ಬದಲಾವಣೆಗಳು ನನ್ನ ಮರಳುವಿಕೆಗಾಗಿ ಏಕಾದರೂ ಕಾಯಬೇಕಿತ್ತು?” ಎಂದು ತನ್ನೊಳಗೇ ಗೊಣಗಿಕೊಂಡ.

ಅನುವಾದ : ಕಿರಣ್ ಮಂಜುನಾಥ್

ಪ್ರತಿಕ್ರಿಯಿಸಿ