೧೯೯೦ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆರ್.ಸಿ.ಹಿರೇಮಠ ಅವರ ಆಯ್ಕೆಯನ್ನು ವಿರೋಧಿಸಿ ಕನ್ನಡದ ಅನೇಕ ಪ್ರಮುಖ ಲೇಖಕರು ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ (೧೬, ೧೭, ೧೮ ಫೆಬ್ರವರಿ ೧೯೯೦) ಬೆಂಗಳೂರು ಜಾಗೃತ ಸಾಹಿತ್ಯ ಸಮಾವೇಶ (ಸಾಹಿತ್ಯದಲ್ಲಿ ಶ್ರೇಷ್ಠತೆಯ ಆದರ್ಶ – ಮುಕ್ತ ಅಧಿವೇಶನ) ವನ್ನು ನಡೆಸಿದರು . ಲಂಕೇಶ್ ಇದರ ಉದ್ಗಾಟಕರಾಗಿದ್ದರು ಮತ್ತು ಅಡಿಗರು ಉದ್ಗಾಟನಾ ಸಮಾರಂಭದಲ್ಲಿ ಅಧ್ಯಕ್ಷರಾಗಿದ್ದರು . ಅಡಿಗರು ಅಧ್ಯಕ್ಷೀಯ ಭಾಷಣದಲ್ಲಿ ಸಾಹಿತ್ಯದಲ್ಲಿ ಶ್ರೇಷ್ಟತೆ ‘ನನಗೆ ಜೀವನ್ಮರಣದ ಪ್ರಶ್ನೆ’ ಎಂದರು . ಸಮ್ಮೇಳನದ ಎರಡನೇ ದಿನ ಕೆ. ವಿ . ಸುಬ್ಬಣ್ಣ “ಶ್ರೇಷ್ಟತೆಯ ವ್ಯಸನ” ಎಂದು ಭಾಷಣ ಮಾಡಿದರು . ಮುಂದೆ ಆ ಎರಡೂ ಭಾಷಣಗಳು ಕನ್ನಡ ಸಾಹಿತ್ಯ ವಲಯದಲ್ಲಿ ಚರ್ಚೆಗೊಳಗಾದವು . ಮಾರ್ಚ್ 4 ರ ಲಂಕೇಶ್ ಪತ್ರಿಕೆಯ ಸಂಪಾದಕೀಯದಲ್ಲಿ ‘ನನಗಂತೂ ಜೀವನ್ಮರಣದ ಪ್ರಶ್ನೆ’ ಎಂದು ಲಂಕೇಶ್ ಸಮ್ಮೇಳನದಲ್ಲಿ ಚರ್ಚಿತವಾದ ವಿಷಯಗಳ ಕುರಿತಾಗಿ ಬರೆದರು .