‘ಹುಣ್ಣಿಮೆ ಹರಿಸಿದ ಬೆಳದಿಂಗಳ’ ದಾರಿ ಹಿಡಿದು ‘-ಸನದಿ ಸ್ಮರಣೆ

ಬಾಬಾ ಸಾಹಬ ಅಹಮದ್ ಸಾಹಬ ಸನದಿ (ಬಿ.ಎ.ಸನದಿ) ನಮ್ಮನ್ನಗಲಿ ಒಂದು ವರುಷದ ಮೇಲಾಯಿತು. 1957 ರಲ್ಲಿ ಪ್ರಕಟವಾದ ಆಶಾಕಿರಣ ಕವನ ಸಂಕಲನದಿಂದ ’ನಮ್ಮ ಪ್ರೀತಿ’ ಯ ವರೆಗೆ ಅವರ 18 ಕವನ ಸಂಕಲನಗಳು ಪ್ರಕಟವಾಗಿವೆ. ದಾರಿಯಮೊರೆ ಅವರ ಪ್ರಸಿದ್ದ ಗೀತೆ. ಸೂರ್ಯಪಾನ- ಅವರ ಸಮಗ್ರ ಕಾವ್ಯಗಳ ಸಂಪುಟ. ಈ ಹಿಂದೆ ಶ್ರೀಧರ ಬಳಗಾರರು ಪ್ರಜಾವಾಣಿಗಾಗಿ ನಡೆಸಿದ ಸನದಿಯವರ ಸಂದರ್ಶನವನ್ನ ಇಲ್ಲಿ ಪ್ರಕಟಿಸುವುದರ ಮೂಲಕ  “ಋತುಮಾನ ” ಕವಿಯನ್ನ ನೆನೆಸಿಕೊಳ್ಳುತ್ತಿದೆ.

ಬಳಗಾರ: ಸ್ಥೂಲವಾಗಿ ನಿರಂತರ ವಲಸೆ ಎಂದನಿಸುವ ಚಲನೆ ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ ವಲಯದಲ್ಲಿ ಜರುಗುತ್ತ ಬಂದಿದೆ. ಗೌರೀಶ ಕಾಯ್ಕಿಣಿಯವರು ಜನಿಸಿದ ಜಿಲ್ಲೆಯಲ್ಲೆ ತನ್ನ ದೈವವನ್ನು ಜಾಗ್ರತಗೊಳಿಸಿಕೊಂಡವರು; ಚಿತ್ತಾಲ ಸಹೋದರರು, ವಿ. ಜಿ. ಭಟ್ಟರು ಜಿಲ್ಲೆಯ ಹೊರಗೇ ನೆಲೆಸಿದವರು; ಎಕ್ಕುಂಡಿ, ಪಾಂಡೇಶ್ವರ್, ನೀವೆಲ್ಲ ಹೊರಗಿನಿಂದ ಬಂದವರು. ನಿಮ್ಮನ್ನು ಇಲ್ಲಿಗೆ ಸೆಳೆದದ್ದು ‘ಹೊಸ ಶಬ್ದ ಸಂಸಾರ’ವೊ ಅಥವ ವಾನಪ್ರಸ್ಥದ ದಾಂಪತ್ಯದ ಅನುಕೂಲತೆಯೊ? ಕರಾವಳಿಯ ಯಾವ ಮೋಹನ ಮುರಳಿ ನಿಮ್ಮನ್ನು ಕರೆಯಿತು?

ಸನದಿ: ಕುಮಟ ನನ್ನ ಮಾವನ ಮನೆ; ಅಂದರೆ, ನನ್ನ ಹೆಂಡತಿಯ ತವರು ಮನೆ. ‘ಹುಣ್ಣಿಮೆ ಹರಿಸಿದ ಬೆಳದಿಂಗಳ’ ದಾರಿ ಹಿಡಿದು ‘ತೀರ’ದ ಆಸೆಯಿಂದ ಬಂದವನು ನಾನು. ನೀವು ಗುರುತಿಸಿದಂತೆ ಜಿಲ್ಲೆಯ ಸಾಹಿತ್ಯಕ್ಕೆ ಸಾಂಸ್ಕøತಿಕ ಗುಣ ಪ್ರಾಪ್ತವಾದದ್ದು ನಿರಂತರವಾದ ಅಂತರ್ ಚಲನೆಯಿಂದ ಎಂದು ನನಗೂ ಅನಿಸಿದೆ. ನಿವೃತ್ತಿಯ ನಂತರ ನಿರಾಳವಾಗಿ ನೆಮ್ಮದಿಯಿಂದ ನನ್ನ ಪಾಡಿಗೆ ನಾನು ಒಂದೆಡೆ ನೆಲಸಲು ಸೂÀಕ್ತ ಸ್ಥಳದ ಹುಡುಕಾಟದಲ್ಲಿದ್ದಾಗ ಕುಮಟ ನೆನಪಾಯಿತು. ಬೆಚ್ಚಗಿನ ಹಗುರಾದ ಕರಾವಳಿಯ ಹವಾಮಾನ ನನ್ನ ಪ್ರಕೃತಿಗೆ, ಸೂಕ್ಷ್ಮವಾದ ಆರೋಗ್ಯಕ್ಕೆ ಯೋಗ್ಯ ಅನಿಸಿತು. ಹೆಂಡತಿಗೆ ತವರಾದದ್ದರಿಂದ ಆಪ್ತ ಬಳಗದ ಒಡನಾಡಿಗಳು ನಮ್ಮನ್ನು ಸ್ವಾಗತಿಸಲು ಸಿದ್ಧರಾಗಿದ್ದರು; ಅಲೆದಾಟದಿಂದ ದಣಿದ ನಮಗೂ ಇಂಥ ಆನಂದಾಶ್ರಮದ ಅಗತ್ಯವಿತ್ತು.
ಇಲ್ಲಿಗೆ ಬಂದ ಮೇಲೆ ಅಂತರ್ಧಾನವಾದ ಸಾಹಿತ್ಯ ಸ್ಮøತಿ ಜಾಗ್ರತವಾಯಿತು. ಒಂದು ಕಾಲದಲ್ಲಿ ಗೋಪಾಲಕೃಷ್ಣ ಅಡಿಗ, ಆಮೂರ್, ಕೃಷ್ಣಮೂರ್ತಿ, ಬಿ. ಎಚ್. ಶ್ರೀಧರ ಇಲ್ಲಿಯ ಕಾಲೇಜಿನಲ್ಲಿ ಪಾಠ ಮಾಡಿದವರು. ಅವರು ಬಿಟ್ಟು ಹೋದ ಕಂಪಿನ ಕರೆಯೂ ನನ್ನೊಳಗೆ ಸುಪ್ತವಾಗಿತ್ತು. ಸ್ಥಳೀಯ ಸಾಹಿತ್ಯ ಪರಿಷತ್ತಿನ ಮೂಲಕ ನಾನು ಆ ಪರಿಮಳದ ಮೂಲಕ್ಕೆ ಹೋಗಿ ಅದನ್ನು ಮರಳಿ ತರಲು ಯತ್ನಿಸಿದೆ. ಇಲ್ಲಿ ಸಾಹಿತ್ಯದ ತೇರೆಳೆಯಲು ಸಂಘಟನೆಯಾಗಲೀ ಸಂಸ್ಥೆಯಾಗಲೀ ಇಲ್ಲ. ಸಾಹಿತ್ಯ ನಿಶ್ಯಬ್ದತೆಯನ್ನು ನೀಗಿಕೊಂಡು ಎಲ್ಲರ ‘ಶಬ್ದ ಸಂಸಾರ’ಕ್ಕೆ ಅವು ಬೇಕೆನಿಸುತ್ತದೆ.

ಬಳಗಾರ: ವೃತ್ತಿ ನಿಮಿತ್ತ ನೀವು ರಾಯಭಾಗ, ಗುಲ್ಬರ್ಗ, ಬೆಂಗಳೂರು, ಗುಜರಾತ, ಮುಂಬೈ-ಹೀಗೆ ಸಂಚರಿಸಿದವರು. ನಿಮ್ಮ ಅಲೆಮಾರಿತನದಲ್ಲಿ ತನ್ನನ್ನು ಒಂದು ಮತದೊಂದಿಗೆ ಗುರುತಿಸದೆ ಮನುಷ್ಯನನ್ನಾಗಿ ಸ್ವೀಕರಿಸಿ ಎಂಬ ಅಪೇಕ್ಷೆ ಉಂಟಾಗುವಂಥ ಒತ್ತಡ ನಿಮ್ಮೊಳಗೆ ಇತ್ತೆ? ಯಾಕೆಂದರೆ, ನಿಮ್ಮ ಅನೇಕ ಕವಿತೆಗಳ ವಸ್ತುಗಳಾದ ಸಾಮರಸ್ಯ, ದೇಶಾಭಿಮಾನ, ಜಾತಿಬೇಲಿ, ಕನ್ನಡ ನುಡಿಯ ಬಗ್ಗೆ ತುಸು ಭಾವಾವೇಶದಿಂದ ಸಮರ್ಥನೆಗೆ ತೊಡಗಿದಂತೆ ಭಾಸವಾಗುತ್ತದೆ.

ಸನದಿ: ಜಾತಿ-ಮತಗಳ ಕವಚಗಳು ತಾವಾಗಿಯೆ ಕಳಚಿಹೋದ ಪರಿಸರದಲ್ಲಿ ಹುಟ್ಟಿ, ಬೆಳದದ್ದು ನನ್ನ ಅದೃಷ್ಟ. ಬೆಳಗಾವಿ ಜಿಲ್ಲೆಯ ಸಣ್ಣ ಹಳ್ಳಿಯಲ್ಲಿ ನನ್ನ ಬಾಲ್ಯ ಕಳೆಯಿತು. ನಮ್ಮ ಮನೆಯ ಆಚೀಚೆ ಬ್ರಾಹ್ಮಣ ಮತ್ತು ಲಿಂಗಾಯತರ ಕುಟುಂಬಗಳು ಇದ್ದವು. ಸಂಸ್ಕೃತ ಭಾಷೆ ಕಲಿತು, ವಚನ ಸಾಹಿತ್ಯ ಓದಿಕೊಂಡಿದ್ದೆ. ಮಸೀದಿಗೆ ಹೋಗುವ ರೂಢಿಯಂತು ಇರಲಿಲ್ಲ. ಕೆಲವು ಸಂಪ್ರದಾಯಸ್ಥರಿಗೆ ನಾನು ಮತಾಂತರಗೊಂಡೆ ಎಂದನಿಸಿರಬೇಕು. ‘ಹಣೆಗೆ ನಾಮ ವಿಭೂತಿ ಪಟ್ಟೆ ಎಳ್ಕೊ’ ಎಂದು ಲೇವಡಿ ಮಾಡಿದರು. ನನ್ನಪ್ಪ ‘ಸನದು’ ಬರೆಯುವ ಕೆಲಸ ಮಾಡ್ತಿದ್ರು. ಅಡ್ಡ ಹೆಸರು ಸನದಿ ಎಂದು ಇರಲು ಇದೇ ಕಾರಣವಿರಬಹುದು. ಮನೆಯಲ್ಲಿ ಯಾವಾಗಲೂ ರೈತರು ಇರ್ತಿದ್ರ್ರು. ಅವರು ಕನ್ನಡ, ಮರಾಠಿ, ಉರ್ದು ಎಲ್ಲಾ ಭಾಷೆ ಆಡುವವರು. ಬಹು ಭಾಷೆಗಳ, ವಿವಿಧ ಜಾತಿ-ಧರ್ಮಗಳ ಹಾಸು ಹೊಕ್ಕಿನ ಸಮುದಾಯ ಅದಾಗಿತ್ತು. ಸ್ಥಳೀಯ ಸಂಪ್ರದಾಯಗಳ ಮಿತಿಗಳನ್ನು ಮೀರಲು ಇದರಿಂದ ಅವಕಾಶವಾಯಿತು. ಉರ್ದು ಭಾಷೆಯನ್ನು ಶಾಲೆಗೆ ಹೋಗಿ ಕಲಿಯಲಾರದ ಬಗ್ಗೆ ಅದರ ಸಾಹಿತ್ಯವನ್ನು ಅಧ್ಯಯನ ಮಾಡುವ ಅವಕಾಶ ಕಳೆದುಕೊಂಡದ್ದಕ್ಕಾಗಿ ನನಗೆ ವಿಷಾದವಿದೆ. ಮನುಷ್ಯ ಸಹಜವಾದ ಸಂಬಂಧಗಳ ನಡುವೆ ಜಾತಿ-ಮತಗಳ ನೆನಪು ಆಗದ ಕಾಲ ಅದು.
ವಾರ್ತಾ ಇಲಾಖೆಯ ಕ್ಷೇತ್ರ ಪ್ರಚಾರಕನಾಗಿ ನಾನು ಕೆಲಸ ಮಾಡಿದೆ. ಜಾತಿ-ಮತ-ಭಾಷೆಗಳ ಗಡಿಗಳನ್ನು ದಾಟಿ ಹೋಗಲು ನನ್ನ ವೃತ್ತಿಯೂ ಕಾರಣ. ಕಾಲ ಕಾಲಕ್ಕೆ ವರ್ಗಾವಣೆ ಆಗುತ್ತ ಮಹಾನಗರಗಳಲ್ಲಿ ವಾಸವಾದದ್ದರಿಂದ ಹಳ್ಳಿಗಳಲ್ಲಿ ಬಾಧಿಸುತ್ತಿದ್ದ ಧಾರ್ಮಿಕ ಆಚರಣೆ, ರೂಢಿ, ಸಂಪ್ರದಾಯಗಳು ಕಟ್ಟುಪಾಡುಗಳಾಗಿ ಕಾಡಲಿಲ್ಲ.

ಬಳಗಾರ: ನಿಮ್ಮ ಮನೆ ಮಾತು ಉರ್ದು.ನೀವು ಇಂಗ್ಲಿಷ್ ಮತ್ತು ಸಂಸ್ಕೃತವನ್ನು ಅಧ್ಯಯನ ಮಾಡಿದವರು. ಕನ್ನಡದಲ್ಲಿ ಬರವಣಿಗೆ. ಕನ್ನಡದ ಕೆಲವು ಮುಖ್ಯ ಲೇಖಕರು ಬಹು ಭಾಷಾ ಪರಂಪರೆಗೆ ಸೇರಿದವರು. ಈ ಬಗೆಯ ಬಹುವಚನೀಯ ಸಾಧ್ಯತೆಗಳು ಸಾಂಸ್ಕೃತಿಕವಾಗಿ ನಿಮಗೆ ಹೇಗೆ ಮುಖ್ಯ ಅನಿಸಿದೆ?

ಸನದಿ: ಉರ್ದು ನನ್ನ ಅಂತರಂಗದಲ್ಲಿ ಅಂತರ್ಗತವಾಗಲೇ ಇಲ್ಲ. ನಾನೇನೊ ಹೈಸ್ಕೂಲಿನಲ್ಲಿ ಉರ್ದು ಕಲಿಯುವ ಪ್ರಯತ್ನ ಮಾಡಿದೆ. ಯಾಕೊ ಅದು ಕನ್ನಡದಷ್ಟು ಸಲೀಸಾಗಿ, ಆಪ್ತವಾಗಿ ನನ್ನ ಜಾಯಮಾನಕ್ಕೆ ಒಗ್ಗಲೆ ಇಲ್ಲ. ನಮಗೆ ಉರ್ದು ಪಾಠ ಮಾಡುತ್ತಿದ್ದ ಮಾಸ್ತರೊಬ್ಬರು ಒಂದಿನ ಕ್ಲಾಸಿನಲ್ಲಿ ನನ್ನ ಎದ್ದು ನಿಲ್ಲಿಸಿ, “ಉರ್ದುವನ್ನು ನೀನು ಕನ್ನಡದ ಇಂಟೊನೇಷನ್‍ನಲ್ಲಿ ಮಾತಾಡ್ತೀಯಾ. ಉರ್ದು ಕಲಿಯೋದಕ್ಕೆ ನೀನು ಅಯೋಗ್ಯ” ಎಂದು ಅವಮಾನ ಮಾಡಿದ್ರು ಈ ಘಟನೆಯಿಂದ ಬೇಸರಗೊಂಡು ನಾನು ಸಂಸ್ಕøತ ಕ್ಲಾಸಿನಲ್ಲಿ ಕೂರಬೇಕಾಯಿತು. ದೇಶದ ಸಾಂಸ್ಕøತಿಕ ವೈವಿಧ್ಯತೆಯನ್ನು ಅರಿಯಲು ಬಹುಭಾಷೆಗಳು ಬೇಕು ಎಂದು ನನಗೆ ಅನಿಸಿದೆ. ಕೊನೆಗೂ ಉರ್ದುವನ್ನಾಗಲಿ, ಪರ್ಶಿಯನ್ನಾಗಲಿ ಕಲಿಯಲಾಗಲಿಲ್ಲ ಎಂದು ನನಗೆ ಖೇದವಿದೆ.

ಬಳಗಾರ: ದೀರ್ಘ ಕಾಲ ನೀವು ಮುಂಬೈಯಲ್ಲಿದ್ದವರು. ನಿದ್ರಿಸದ ಆ ಬೃಹತ್ ಮಾಯಾ ನಗರದ ಯಾಂತ್ರಿಕತೆ, ಅಸಂಗತತೆ, ಹಿಂಸೆಯ ಕುರಿತು ನೀವು ಹಲವು ಕವಿತೆಗಳನ್ನು ಬರೆದಿದ್ದೀರಿ. ಮುಂಬೈಗೆ ಮಾನವೀಯ ಮುಖವೂ ಇರಬೇಕಲ್ಲ, ಅದರ ದರ್ಶನ ನಿಮಗೆ ಆಗಲಿಲ್ಲವೆ?

ಸನದಿ: ಮುಂಬೈ ಸಂಕೀರ್ಣವಾದ ಸಂಕ್ಷಿಪ್ತ ಭಾರತ. ದೇಶದ ಎಲ್ಲೆಡೆಯಿಂದ ಕಾಯಕವೇ ಕೈಲಾಸ ಎನ್ನುತ್ತ ತಮ್ಮ ದೈವವನ್ನು ಹುಡುಕಿಕೊಂಡು ಬರ್ತಾರೆ. ಜಾತಿ, ಮತ, ಭಾಷೆಗಳ ವಿಚಿತ್ರ ಸಮೀಕರಣ, ಕಲಸುಮೆಲೋಗರ ಅಲ್ಲಿದೆ. ಹೊರಗಿನಿಂದ ಹೋದವರು ಬೇರು ಬಿಡುವ ಯತ್ನದಲ್ಲಿ ಕೇವಲ ಮನುಷ್ಯರಾಗಿರುತ್ತಾರೆ. ಆದರೆ, ಕೆಲವು ಸ್ಥಳೀಯ ಶಕ್ತಿಗಳಿಗೆ ಈ ಆಗಂತುಕರು ತಮ್ಮ ಕೆಲಸಕ್ಕೆ ಸ್ಪರ್ಧಿಗಳಾಗುತ್ತಿದ್ದಾರೆಂದು ಅನಿಸಿದರೆ ಸಾಕು ಗಲಾಟೆ ಶುರು. ದಕ್ಷಿಣ ಭಾರತದವರೊಂದಿಗೆ ಭಾಷೆಯ ಜಗಳ; ಉತ್ತರದವರೊಂದಿಗೆ ಕೂಲಿ ಕೆಲ್ಸದ ಜಗಳ; ವಲಸಿಗರು ಬಡತನದಿಂದಾಗಿ, ಅವಲಂಬನದಿಂದಾಗಿ ಒಂದು ಮಟ್ಟದವರೆಗೆ ಹಿಂಸೆ, ಅವಮಾನ ಸಹಿಸಿಕೊಂಡಿರ್ತಾರೆ. ಹಾಗೆ ನೋಡಿದರೆ ಪರಸೊತ್ತಿನಲ್ಲಿ ಅವರಿಗೆ ಜಗಳಕ್ಕೂ ಪುರಸೊತ್ತಿಲ್ಲ. ಆಧುನಿಕ ಯಂತ್ರ ನಾಗರೀಕತೆ ಒಂದೇ ಚಾವಿಯಿಂದ ಸ್ವರ್ಗ ಮತ್ತು ನರಕ ಎರಡನ್ನೂ ತೆರೆದಿದೆ. ಮತೀಯತೆಯ ಮತ್ತು ಆಧುನಿಕತೆಯ ವಿಕ್ರತಿಗಳು ನನ್ನ ‘ದೃವ ಬಿಂಧು’ ಮತ್ತು ‘ಮನೆಮನೆಗೆ ಬೇಲಿ’ ಕವನ ಸಂಕಲಗಳಲ್ಲಿ ಅಭಿವ್ಯಕ್ತಿಗೊಂಡಿವೆ.
1993ರಲ್ಲಿ ಮುಂಬೈಯಲ್ಲಿ ಮತೀಯ ಗಲಭೆಯಾಯಿತು. ಜನರು ಹಿಂಸೆ ಬಿಟ್ಟು ಒಗ್ಗೂಡಲು ನಾವೊಂದು ಸಣ್ಣ ಪ್ರಯೋಗ ಮಾಡಿದೆವು. ಕರ್ನಾಟಕ ಸಂಘದಡಿಯಲ್ಲಿ ‘ಕಲಾ ಭಾರತಿ’ ಎಂಬ ಕಾರ್ಯಕ್ರಮ ಆರಂಭಿಸಿದೆವು. ಪ್ರತಿ ರವಿವಾರ ಕಲೆಯ ಯಾವುದಾದರೂ ಪ್ರಕಾರದ ಪ್ರದರ್ಶನ ಸಾರ್ವಜನಿಕರಿಗೆ ಪುಕ್ಕಟೆಯಾಗಿ ನೀಡತೊಡಗಿದೆವು. ಬೇರೆ ಬೇರೆ ಧರ್ಮ, ಭಾಷೆ, ಪ್ರಾಂತಗಳಿಗೆ ಸೇರಿದವರು ತಮ್ಮ ‘ಮೂಲವ್ಯಾಧಿ’ಯನ್ನು ಮರೆತು, ಕಲೆಯಲ್ಲಿ ಅಸಹಜ ಗಡಿಗಳನ್ನು ಮೀರಿ ಒಂದಾದರು. ಹಿಂಸೆಯಿಂದ ಜನರ ಗಮನವನ್ನು ಬೆರೆಡೆಗೆ ಸೆಳೆಯಲು ಸ್ವಲ್ಪ ಯಶಸ್ಸನ್ನು ನಾವು ಕಂಡೆವು.

ಬಳಗಾರ: ಎಡ-ಬಲ ಹಠಮಾರಿ ಪಂತಗಳಿಂದ ಒಡೆದು ಹೋದ ನಮ್ಮ ಕಾಲದ ಸಮಾಜಕ್ಕೆ ಮತ್ತೊಂದು ಮಾನವೀಯ ಮಧ್ಯಮ ಪಥದ ಅವಶ್ಯಕತೆಯಿದೆ ಎಂದು ನಿಮಗೆ ಅನಿಸಿದೆಯೆ?

ಸನದಿ: ಎಡ-ಬಲ ಸಿದ್ಧಾಂತಗಳಿಂದ ಸಾಮಾಜಿಕ ವಿಘಟನೆ ಆದದ್ದು ನಿಜ. ಈ ಎರಡೂ ಸಿದ್ಧಾಂತಗಳು ಸಾಂಸ್ಕøತಿಕ ಸಂಘರ್ಷಗಳಾಗದೆ ರಾಜಪ್ರಭುತ್ವಗಳ ದಾಳವಾಗುತ್ತಿರುವುದು ವಿಷಾದನೀಯ. ನೀವೆಂದಂತಯೇ ಮನುಷ್ಯನಿಗಿಂತ ಅವನ ಜಾತಿ, ಕುಲಗಳ ಲೆಕ್ಕಾಚಾರಗಳಲ್ಲೆ ರಾಜಕೀಯ ಲಾಭಗಳಿವೆ. ರಾಜಕೀಯ ಸಾಹಿತ್ಯಕ್ಕಿಂತ ಸಾಹಿತ್ಯದಲ್ಲಿನ ರಾಜಕೀಯ ಹೆಚ್ಚು ಅಪಾಯಕಾರಿ. ಕಲೆ-ಸಾಹಿತ್ಯದ ಒಳಗೆ ಹೊಸ ಮಠಗಳು ಉದ್ಭವಿಸುತ್ತಿವೆ. ಒಳ ಹುತ್ತಗಳಲ್ಲಿ ಹಾವುಗಳಿವೆ. ಎರಡೂ ಜನರಿಗೆ ಸಾಕಾಗಿದೆ. ತೃತೀಯ ಅವಕಾಶವನ್ನು ಶೋಧಿಸುವ ಕಾಲ ಸನ್ನಿಹಿತವಾಗಿದೆ.

ಬಳಗಾರ: ನೀವು ಬರವಣಿಗೆ ಆರಂಭಿಸಿದ ದಿನಗಳಲ್ಲಿ ಕವಿಗೆ ಪ್ರತಿಭೆ, ಪಾಂಡಿತ್ಯ, ಪರಂಪರೆಯ ಅರಿವು ಮತ್ತು ಪ್ರತಿಭಟನೆ ಮುಖ್ಯವಾಗಿದ್ದವು. ಈ ಹಿನ್ನಲೆಯಲ್ಲಿ ಹೊಸ ತಲೆಮಾರಿನ ಕವಿಗಳ ಸಿದ್ಧತೆ ಮತ್ತು ಸಾಧ್ಯತೆಯ ಬಗ್ಗೆ ಏನು ಹೇಳ್ತೀರಿ?

ಸನದಿ: ನಾನು ಕಾವ್ಯ ಕೃಷಿಗೆ ತೊಡಗಿದ ಕಾಲದಲ್ಲಿ ಅನುಭವದ ಪಕ್ವತೆಗೆ ಕಾಯುವ ಪ್ರಾಮಾಣಿಕತೆ, ಹೊಸತನದ ಹುಡುಕಾಟ, ಬದ್ಧತೆ ಇದ್ದವು. ಧಾರ್ಮಿಕ ಭಕ್ತಿಯಿಂದ, ಪ್ರಭುತ್ವದ ಶರಣಾಗತಿಯಿಂದ ಹೊರಳಿ ನಾಡು, ನುಡಿ, ಪ್ರಕೃತಿಯೇ ಆಧ್ಯಾತ್ಮ ಎಂಬ ಮನುಷ್ಯತ್ವದ ಅರಿವಿನತ್ತ ನಡೆದ ಕಾಲ ಅದು. ಹೊಸ ತಲೆಮಾರಿನ ಹೆಚ್ಚಿನ ಕವಿಗಳು ‘ಪ್ರತಿಭಾ ವಿಲಾಸವನ್ನು’ ಮಾತ್ರ ನಂಬಿದವರು. ಅವರು ಜಾಹೀರಾತಿನ ಮತ್ತು ಮಾರುಕಟ್ಟೆಯ ಆಮಿಷಗಳಿಗೆ ಮಾರು ಹೋದದ್ದು ನಿಜ. ಸಾಹಿತ್ಯದಲ್ಲಿ ಗುಣ ವಿಮರ್ಶೆಗಿಂತ ಗುಂಪುಗಾರಕೆ, ವೈಯಕ್ತಿಕ ಹಿತಾಸಕ್ತಿಗಳೇ ವಿಜ್ರಂಭಿಸುತ್ತಿವೆ.
ಬಳಗಾರ: ನಿಮ್ಮ ಕುಟುಂಬ ವಿಶೇಷವಾಗಿ ನಿಮ್ಮ ಹೆಂಡತಿ ಸಾಹಿತ್ಯ ಕೃಷಿಗೆ ಹೇಗೆ ಸಹಕರಿಸಿದ್ದಾರೆ?

ಸನದಿ: ಸಂಸಾರ ಸಂತೆಯ ಎಲ್ಲ ವ್ಯವಹಾರಗಳನ್ನು ಅಚ್ಚುಕಟ್ಟಾಗಿ ಅವರೇ ನಿರ್ವಹಿÀಸುತ್ತಿದ್ದದರಿಂದ ನನ್ನ ಸಮಯವನ್ನು ಸಂಪೂರ್ಣವಾಗಿ ಸಾಹಿತ್ಯಕ್ಕೆ ಮುಡಿಪಾಗಿಡಲು ಅವಕಾಶವಾಯ್ತು. ಅವರ ಕನ್ನಡ ಪ್ರೀತಿ, ಅತಿಥಿ ಸತ್ಕಾರ ಮತ್ತು ಅಡಿಗೆಯ ರುಚಿ ನನ್ನ ಸಾಹಿತ್ಯದ ಗುಣವಾದರೆ ಅಚ್ಚರಿ ಪಡಬೇಕಾಗಿಲ್ಲ. ವಿದೇಶದಲ್ಲಿರುವ ನಮ್ಮ ಮಕ್ಕಳ ಒಲುಮೆ ನಮ್ಮ ದಾಂಪತ್ಯವನ್ನು ಪೊರೆದಿದೆ.

ಬಳಗಾರ: ‘ಮನುಷ್ಯ ಕುಲಂ ತಾನೊಂದೆ ವಲಂ’ ಎಂಬ ಪಂಪನ ಸಾಲೊಂದರ ಹಿನ್ನಲೆಯಲ್ಲಿ ನಿಮಗೊಲಿದು ಬಂದ ಈ ಸಾಲಿನ ಪಂಪ ಪ್ರಶಸ್ತಿ ಸಂದರ್ಭದಲ್ಲಿ ನಿಮ್ಮ ಪ್ರತಿಕ್ರಿಯೆ ಏನು?

ಸನದಿ: ಪಂಪನ ಹೆಸರಿನ ಜೊತೆ ನಾನು ನಿಲ್ಲುವಂತಾದದ್ದು ನಿಜಕ್ಕೂ ಸಂತೋಷದ ಸಂಗತಿಯೇ. ನನಗಿಂತ ಅರ್ಹರಾದ ನನ್ನ ಸಮಕಾಲೀನ ಅನೇಕರು ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಬಹುದಿತ್ತು ಎಂದನಿಸಿತು. ಪ್ರಾದೇಶಿಕ ನ್ಯಾಯಕ್ಕಾಗಿ ನನ್ನನ್ನು ಆಯ್ಕೆ ಮಾಡಿರಬಹುದು. ‘ಆರಂಕುಶವಿಟ್ಟೊಡೆಂ ನೆನೆವುದೆನ್ನ ಮನಂ ಬನವಾಸಿ ದೇಶಂ’ ಎಂಬ ಕವಿಯ ವಾಣಿ ನನ್ನೊಳಗಿನ ಒಳ ಆದೇಶವಾಗಿದೆ. ಕಾಜಾಣವಾಗಿಯೊ ಮರಿ ದುಂಬಿಯಾಗಿಯೋ ತಾನು ಬನವಾಸಿಯಲ್ಲಿಯೇ ಪುನ: ಜನ್ಮ ತಾಳುವೆ ಎಂದ ಪಂಪನಿಗೆ ಅಂಥ ಪಾವಿತ್ರ್ಯ ಇಂದಿನ ಬನವಾಸಿ ದೇಶದಲ್ಲಿದೆಯೇ ಎಂದು ಪ್ರಶ್ನಿಸಬೇಕೆಂದು ಅನಿಸುತ್ತದೆ.
ಜಾತ್ಯಾತೀತ ತತ್ವದ ಮೂಲ ಪುರುಷ ಪಂಪನೇ. ಬಸವಣ್ಣ, ಗಾಂಧಿ, ಅಂಬೇಡ್ಕರ್, ಲೋಹಿಯಾ ಮುಂತಾದವರ ಮೂಲಕ ಒಂದು ಪರಂಪರೆಯಾಗಿ ಜಾತ್ಯಾತೀತತೆ ಮುಂದೆ ಸಾಗಿದ ವಿಷಯದಲ್ಲೂ ಅವನು ಆದಿ ಕವಿ. ‘ಮನುಷ್ಯ ಕುಲಂ ತಾನೊಂದೆ ವಲಂ’ ಎಂಬುದನ್ನು ಸರಕಾರ ಘೋಷ ವಾಕ್ಯವನ್ನಾಗಿ ಅಂಗೀಕರಿಸಿ, ರಾಷ್ಟ್ರಗೀತೆ, ನಾಡಗೀತೆಯಂತೆ ಎಲ್ಲ ಇಲಾಖೆ, ಶಾಲಾ ಕಾಲೇಜುಗಳಲ್ಲಿ ನಿತ್ಯ ನುಡಿಯಾಗಿ ಆಚರಿಸಲು ಮುಂದಾಗಬೇಕು ಎಂಬುದು ನನ್ನ ವಿನಮ್ರ ವಿನಂತಿ.

ಕೃಪೆ: ಪ್ರಜಾವಾಣಿ


ಪ್ರತಿಕ್ರಿಯಿಸಿ