ಬೆಳಕಿಗೆ ಹೆದರಿ ಓಡಿದ ಕೊರೊನಾ ! ಚಾಮರಾಜನಗರ ಜಿಲ್ಲೆ

ಕೊರೊನಾ ಕಾಲದಲ್ಲಿನ ಗ್ರಾಮಿಣ ಬದುಕಿನ ಚಿತ್ರಗಳನ್ನ ಋತುಮಾನಕ್ಕಾಗಿ ಎ.ಆರ್.ವಾಸವಿ ಮತ್ತು ಕೆ.ಪಿ ಸುರೇಶ ಸಂಪಾದಿಸಿ ಕೊಟ್ಟಿದ್ದಾರೆ.ಇಂತಹ ನಾಡಿನ ಹತ್ತು ವಿವಿಧ ಹಳ್ಳಿಯ ಚಿತ್ರಗಳು ದಿನಕ್ಕೊಂದರಂತೆ ಕೊರೊನಾ ಕಾಲದಲ್ಲಿ ಗ್ರಾಮಿಣ ಬದುಕು ಅನ್ನುವ ಶೀರ್ಷಿಕೆಯಲ್ಲಿ ಋತುಮಾನದಲ್ಲಿ ಪ್ರಕಟವಾಗುತ್ತಿದೆ.

ಕೊರೊನಾ ಸೋಂಕಿನ ಕಾರಣದಿಂದ ಗೃಹಬಂಧಿಯಾಗಿರುವ ಜನರು ಅತಂಕ ಮತ್ತು ಭಯದ ಸ್ಥಿತಿಯಲ್ಲಿದ್ದಾರೆ. ಇಂತಹ ಸಂಕಷ್ಟ ಸಂದರ್ಭಗಳಲ್ಲಿ ಮನೆಯ ಭಾಗಿಲಿಗೆ ಎಕ್ಕ, ಮಜ್ಜಿಗೆ ಕಾಯಿ (ಕೊರೊನಾ ಆಕಾರದ ಕಾಯಿ), ದತ್ತೂರಿ ಗಿಡ, ಬೇವು ಕಟ್ಟಿಸುವುದರಿಂದ ಕೊರೊನಾ ಹೋಗುತ್ತದೆ ಎಂಬ ಸುದ್ಧಿ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಹಬ್ಬಿದೆ. ಏಪ್ರಿಲ್ 05, ಭಾನುವಾರದಂದು ದೇಶದ ಪ್ರಧಾನಿ ಅವರು ದೀಪವನ್ನು ಬೆಳಗಿಸಿ ಕತ್ತಲನ್ನು ಓಡಿಸಲು ರಾತ್ರಿ 09 ಗಂಟೆಯಿಂದ 9 ನಿಮಿಷ ಮನೆಗಳಲ್ಲಿ ಎಣ್ಣೆ ದೀಪ, ಕ್ಯಾಂಡಲ್, ಬ್ಯಾಟರಿ ಬೆಳಕು ಹಚ್ಚಿ, ವಿದ್ಯುತ್ ದೀಪಗಳನ್ನು ಆರಿಸಲು ದೇಶದ ಜನರಿಗೆ ಕೋರಿದರು. ಪ್ರಧಾನಿಯವರ ಕೋರಿಕೆಯನ್ನು ಜನ ಅಲ್ಲಗಳೆಯದೆ ಭಾವನಾತ್ಮಕ ಬೆಂಬಲ ಕೊಟ್ಟು ದೀಪ ಹಚ್ಚಿದರು. ದೀಪ ಹಚ್ಚುವುದನ್ನು ಜನರು ಪಾಲಿಸುವಂತೆ ಮಾಧ್ಯಮಗಳು ಕೂಡ ಹೆಚ್ಚು ಪ್ರಚಾರ ನೀಡಿದವು.

ಕುಳ್ಳೂರು ಗ್ರಾಮದಲ್ಲೂ ಏಪ್ರಿಲ್ 05 ರ ಭಾನುವಾರ ಕೊರೊನಾ ವೈರಸ್ ಹೊಡೆದೋಡಿಸಲು ಸಂಜೆ ಬಹುತೇಕ ಎಲ್ಲರೂ ಮನೆಗಳನ್ನು ಶುಚಿಗೊಳಿಸಿ, ಮನೆಯ ಒಳ ಮತ್ತು ಹೊರ ಭಾಗದಲ್ಲಿ ಗೋ ಮೂತ್ರವನ್ನು ಸಿಂಪಡಿಸಿ, ರಂಗೋಲಿ ಹಾಕಿ, ಸ್ನಾನ ವÁಡಿ ಎಣ್ಣೆ ದೀಪ ಹಚ್ಚಿದ್ದಾರೆ. ಕೆಲವರು “ಮೋದಿ ದೀಪ” ಹಚ್ಚಬೇಕು ಎಂದು ಹೇಳುತ್ತಿದ್ದುದು ಉಂಟು. ಗ್ರಾಮದ ಮನೆಗಳಲ್ಲಿ ಸಂಜೆಯೇ ವಿದ್ಯುತ್ ದೀಪ ಆರಿಸಿದವರು ಮತ್ತೇ ವಿದ್ಯುತ್ ದೀಪ ಹಾಕಿಲ್ಲ. ಮತ್ತೊಂದು ಗ್ರಾಮ ಹೊಂಗನೂರಲ್ಲಿ ಮನೆ ಮುಂದೆ ನೀರು ಹಾಕಿ ರಂಗೋಲಿ ಬಿಟ್ಟು, ರಂಗೋಲಿ ಮೇಲೆ 09 ದೀಪಗಳನ್ನು ಹಚ್ಚಿದ್ದಾರೆ. ಈ 09 ದೀಪಗಳ ವಿಶೇಷವೆಂದರೆ ಏಪ್ರಿಲ್ 04ನೇ ತಿಂಗಳು + 05ನೇ ತಾರಿಖು ಸೇರಿದರೆ 09 ಆಗುತ್ತದೆ. ಆ 09 ನವಗ್ರಹಗಳಾಗಿದ್ದು, ಅವುಗಳನ್ನು ಪೂಜಿಸುವುದರಿಂದ ಕೊರೊನಾ ಓಡಿ ಹೋಗುತ್ತದೆ ಎಂಬ ಭಾವನೆಯಿಂದ ದೀಪ ಅಥವಾ ಕ್ಯಾಂಡಲ್ ಹಚ್ಚಿರುವುದಾಗಿ ಅಲ್ಲಿನ ನಿವಾಸಿ ರಾಧ ತಿಳಿಸಿದ್ದಾರೆ. ದೊಡ್ಡಮೋಳೆ ಗ್ರಾಮದ ಜಯಸುಂದ್ರ ತಿಳಿಸಿದಂತೆ ವಾಟ್ಸಪ್‍ನಲ್ಲಿ ದೀಪ ಹಚ್ಚುವುದರಿಂದ 37 ಡಿಗ್ರಿಯಷ್ಟು ಶಾಖಾ ಬರುವುದರಿಂದ ಕೊರೊನಾ ವೈರಸ್ ಸತ್ತು ಹೋಗುತ್ತದೆ ಎಂಬ ಮಾಹಿತಿ ಬಂದಿತ್ತು. ಅದು ಎಷ್ಟು ನಿಜನಾ ಸುಳೋ ಗೊತ್ತಿಲ್ಲ. ಆದರೆ ನಮ್ಮ ಗ್ರಾಮದಲ್ಲಿ ದೀಪ ಹಚ್ಚುವುದನ್ನು ಹಬ್ಬದ ಹಾಗೇ ಮಾಡಿದರು ಎಂದು ತಿಳಿಸಿದ್ದಾನೆ. ಚಾಮರಾಜನಗರದಲ್ಲಿ ದೀಪ ಹಚ್ಚುವುದರ ಜೊತೆ ಪಟಾಕಿಗಳನ್ನು ಸಿಡಿಸಿ ಖುಷಿಪಟ್ಟರು.

ವೈಜ್ಞಾನಿಕವಾಗಿ ನೋಡಬೇಕಾದಂತಹ ಇಂತಹ ಸಂದರ್ಭದಲ್ಲಿ ಮೂಢನಂಬಿಕೆ ಪ್ರವೇಶ ಮಾಡಿತು. ಎಲ್ಲಾ ಜನ ಕಷ್ಟ ಕಾಲದಲ್ಲಿ ಕಣ್ಣಿಗೆ ಕಾಣದ ದೇವರ ಮೊರೆ ಹೋಗುವುದು ಸಹಜ. ಆದರೆ ಸರ್ಕಾರದ ಕೆಲಸ ಇದನ್ನು ಪ್ರೋತ್ಸಾಹಿಸುವುದಲ್ಲ. ಈ ಜಾಗಟೆ, ಪಾತ್ರ ಪರಡಿ ಹೊಡೆದು ಸದ್ದು ಮಾಡಿ, ಆಮೇಲೆ ದೀಪ ಹಚ್ಚುವ ಕೈಂಕರ್ಯ ಜನರ ಮೌಢ್ಯವನ್ನು ಇನ್ನಷ್ಟು ಹೆಚ್ಚಿಸಿದೆ, ಅಷ್ಟೇ.

 

– ಪಿ.ವೀರಭದ್ರನಾಯ್ಕ

P. Veerabhadranaika; has a doctorate in Sociology from Mysore University and is currently with the Punarchith Collective, Nagavalli, Chamarajanagar Dt. 
One comment to “ಬೆಳಕಿಗೆ ಹೆದರಿ ಓಡಿದ ಕೊರೊನಾ ! ಚಾಮರಾಜನಗರ ಜಿಲ್ಲೆ”
  1. ಎಲ್ಲಾ ತರಹದ ಪೂಜಾ ಸ್ಥಳಗಳು ಮುಚ್ಚಿವೆ. ಜನರು ದೀಪ ಬೆಳಗಿಸಿದರು.ಹಬ್ಬಿದ ಭೀತಿಗೆ ಜನ ಗುಡಿಗಳನ್ನು ಮರೆತು, ತಮ್ಮ ನಂಬಿಕೆಗೆ ಬೇಡಿ ಕೊಂಡರು. ನಂಬಿಕೆ ಇರಬೇಕಿದಿದ್ದು ಅವರವರಲ್ಲಿ.
    ಎಲ್ಲಿ ಆ ವಿವಿಧ ವೇಷದ ಗುರುಗಳು?
    ತಮ್ಮ ನೆಮ್ಮದಿಗೆ ಗುಡಿ, ಗುರುಗಳು ಉತ್ತರವಲ್ಲ. ನನ್ನ ಈಗಿನ ಸ್ಥಿತಿಗೆ ಆಳುವ ವರ್ಗ / ಅಧಿಕಾರ ವರ್ಗ ಕಾರಣ.ಇದನ್ನು ತಿಳಿಯುವ ಮಾರ್ಗ ತೆರೆದಿದೆ.
    ನನ್ನ ಊರಿಗೆ, ನನ್ನ ಮನೆಗೆ ನನ್ನನ್ನು ಹೋಗಲು ಬಿಡದ ಇವರು ಯಾರು? ನಾನು ಇವರನ್ನು ತಿಳಿಯಲೇ ಇಲ್ಲ…..

Leave a Reply to Lalitha Cancel reply