ಭಾರತದ ಕೊರೋನ ಬಿಕ್ಕಟ್ಟುಈಗ ಜಗತ್ತಿನ ಎಲ್ಲರ ಬಿಕ್ಕಟ್ಟು

2019ರ ಎಕನಾಮಿಕ್ಸ್ ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ-ಎಸ್ತರ್ ದೂಫ್ಲೊ ಅವರು ನ್ಯೂಯಾರ್ಕ್ ಟೈಮ್ಸ್ ಬರೆದಿರುವ ಲೇಖನದ ಅನುವಾದ .

ಈ ಕೊರೋನ ಭಾರತವನ್ನು ಯಾಕೆ ಇಷ್ಟು ದೀಢೀರನೆ ಇಷ್ಟೊಂದು ಭೀಕರವಾಗಿ ಆವರಿಸಿಕೊಂಡು ಬಿಟ್ಟಿತು ಅನ್ನುವುದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಸ್ವಲ್ಪ ಸಮಯ ಹಿಡಿಯಬಹುದು. ಆದರೆ ಒಂದಂಶ ಮಾತ್ರ ನಿಜ. ಭಾರತದ ಈ ಸಮಸ್ಯೆ ಇಂದು ವಿಶ್ವದ ಸಮಸ್ಯೆಯಾಗಿದೆ.

ವೈರಾಣು ಮೊದಲು ಪ್ರವೇಶಿಸಿದಾಗ ಭಾರತ ತೀರಾ ದಿಢೀರನೆ ಎಲ್ಲವನ್ನೂ ಮುಚ್ಚಿ ಲಾಕ್‍ಡೌನ್ ಮಾಡಿತು. ಆದರೆ, ಅಷ್ಟೇ ಬೇಗ ಮತ್ತೆ ಅದನ್ನು ತೆರವುಗೊಳಿಸಿತು. ಮಾರ್ಚ್ 2020ರಲ್ಲಿ ಕೊರೋನ ಪ್ರಕರಣಗಳು ಅಷ್ಟೊಂದು ಇಲ್ಲದಿದ್ದಾಗ, ಕೇವಲ ನಾಲ್ಕು ಗಂಟೆಯ ಸೂಚನೆ ನೀಡಿ ಲಾಕ್‍ಡೌನ್ ಘೋಷಿಸಿಬಿಟ್ಟಿತು. ಲಕ್ಷಗಟ್ಟಲೆ ಜನ ತಿನ್ನಲು ಆಹಾರವಿಲ್ಲದೆ, ಇರಲು ನೆಲೆಯಿಲ್ಲದೆ ತತ್ತರಿಸಿಹೋದರು. ಅವರಲ್ಲಿ ಬಹುತೇಕ ಜನ ವಲಸೆ ಕಾರ್ಮಿಕರು. ಆ ಸಂದರ್ಭದಲ್ಲಿ ಆರ್ಥಿಕ ವಿಪತ್ತು ಎದುರಾದಾಗ, ಕೊರೊನ ಸೋಂಕು ನಿಯಂತ್ರಣಕ್ಕೆ ಬರುವ ಮೊದಲೇ ಲಾಕ್‍ಡೌನ್ ತೆರವುಗೊಳಿಸಿದರು. ಈಗ ಭಾರತದಲ್ಲಿ ಏನಾಗುತ್ತಿದೆಯೋ ಅದೇ ಅಮೇರಿಕೆಯಲ್ಲಿ ಕೊರೊನಾ ವೈರಾಣು ತೀವ್ರವಾಗಿದ್ದಾಗ ಆಗಿದ್ದು. ಮಾರ್ಚ್ ಮತ್ತು ಏಪ್ರಿಲ್‍ನಲ್ಲಿ ಸಾವುಗಳು ಹೆಚ್ಚಾಗತೊಡಗಿದಾಗ, ರಾಜ್ಯಗಳು ಸುಮ್ಮನೆ ಕಣ್ಣಮುಚ್ಚಿಕೊಂಡು, ಪಿಡುಗು ತನ್ನಷ್ಟಕ್ಕೆ ಮಾಯವಾಗಿ ಬಿಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದವು. ಭಾರತದ ಮೊದಲ ಕೊರೋನಾ ಅಲೆ ಕಮ್ಮಿಯಾಯಿತು. ಅದಕ್ಕೆ ಕಾರಣವೇನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಭಾರತದಲ್ಲಿನ ರಾಜ್ಯಗಳಿಗೆ ಸಂಪನ್ಮೂಲಗಳ ಕೊರತೆಯಿದೆ. ಹಾಗಾಗಿ ರಾಜ್ಯಗಳ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಲಾಕ್‍ಡೌನ್ ಅಂದರೆ ತುಂಬಾ ಹಣ ಖರ್ಚು ಮಾಡಬೇಕಾಗುತ್ತದೆ. ಅದರಲ್ಲೂ ಬಡವರಿಗೆ ಆಗುವ ಅಪಾರ ಯಾತನೆಯನ್ನು ಕಡಮೆ ಮಾಡಬೇಕು ಅಂದುಕೊಂಡರಂತೂ ಖರ್ಚು ಹೆಚ್ಚೇ ಆಗುತ್ತದೆ. ಜೊತೆಗೆ ಕೇಂದ್ರ ಸರ್ಕಾರ ಆ ಖರ್ಚಿನ ಜವಾಬ್ದಾರಿಯನ್ನು ಹೊರುತ್ತಿಲ್ಲ. (ಭಾರತಕ್ಕೆ ಹೋಲಿಸಿದರೆ ಕಳೆದ ವರ್ಷ ಅಮೇರಿಕೆಯಲ್ಲಿ ಟ್ರಂಪ್ ಆಡಳಿತ ಹೆಚ್ಚು ಉದಾರಿಯಾಗಿತ್ತು.)

ಸ್ವಾಭಾವಿಕವಾಗಿಯೇ ರಾಜ್ಯ ಸರ್ಕಾರಗಳು ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ ಸಾಧ್ಯವಾದಷ್ಟು ಮುಂದೂಡುತ್ತಾ ಬಂದವು. ಈ ಮಧ್ಯೆ ಪಿಡುಗು ದೇಶವಿಡೀ ವ್ಯಾಪಿಸಿಕೊಂಡಿತು. ವೈರಾಣುವಿನಲ್ಲಿ ಹಲವು ಬದಲಾವಣೆಗಳೂ ಕಾಣಿಸಿಕೊಂಡವು. ಕೇಂದ್ರ ಸರ್ಕಾರ ಯಾವುದೇ ಜವಾಬ್ದಾರಿಯನ್ನೂ ತೆಗೆದುಕೊಳ್ಳದೇ ಹೋಗಿರುವುದರಿಂದ ಹೊಸ ವೈರಾಣು ಹೇಗೆ ನಡೆದುಕೊಳ್ಳುತ್ತಿದೆ ಅನ್ನುವುದನ್ನು ಅರ್ಥಮಾಡಿಕೊಳ್ಳಲು ಯಾರೂ ಪ್ರಯತ್ನಿಸುತ್ತಿಲ್ಲ. “ತುಂಬಾ ತಡ ಹಾಗೂ ತುಂಬಾ ಕಡಿಮೆ” ಅನ್ನುವುದು ಪ್ರಸ್ತುತ ಪಿಡುಗಿನ ಕಥೆಯಾಗಿಬಿಟ್ಟಿದೆ.

ಸರ್ಕಾರ ಈಗ ಕ್ರಮತೆಗೆದುಕೊಳ್ಳಲು ಪ್ರಾರಂಭಿಸುತ್ತಿದೆ. ಆದರೆ ಒಂದು ರಾಷ್ಟ್ರೀಯ ಕಾರ್ಯತಂತ್ರವನ್ನು ರೂಪಿಸಲು ಇನ್ನೂ ಹಿಂಜರಿಯುತ್ತಿರುವಂತೆ ತೋರುತ್ತಿದೆ. ಭಾರತಕ್ಕೆ ಇಂದು ಕೇಂದ್ರ ಸಂಯೋಜಿತ ಲಾಕ್‍ಡೌನಿನ ಅವಶ್ಯಕತೆಯಿದೆ. ಸೋಂಕು ಈಗಾಗಲೇ ಹೆಚ್ಚಿರುವ ಪ್ರದೇಶಗಳಿಗೆ (ಸೋಂಕು ಸಧ್ಯಕ್ಕೆ ಇನ್ನೂ ದೇಶದ ಶೇಕಡ 25ರಷ್ಟು ಜಿಲ್ಲೆಗಳಲ್ಲಿ ಮಾತ್ರ ಕೇಂದ್ರೀಕೃತವಾಗಿದೆ) ಮೊದಲು ಗಮನಕೊಡಬೇಕು. ನಂತರದಲ್ಲಿ ನಿಧಾನವಾಗಿ ಅವಶ್ಯಕತೆಯಿರುವ ಕಡೆಗಳಲೆಲ್ಲಾ ಕ್ರಮ ತೆಗೆದುಕೊಳ್ಳುತ್ತಾ ಹೋಗಬೇಕು.

ಸರ್ಕಾರ ತುಂಬಾ ನಿಧಾನವಾಗಿ ಕಾರ್ಯಪ್ರವೃತ್ತವಾಗಿದೆ. ಮತ್ತೆ ಲಾಕ್‍ಡೌನ್ ಜಾರಿಗೊಳಿಸಿದರೆ ಆರ್ಥಿಕತೆಗೆ ಏನಾಗಬಹುದು ಅದರಲ್ಲೂ ವಿಶೇಷವಾಗಿ ಬಡವರಿಗೆ ಏನಾಗಬಹುದು ಅನ್ನುವ ಆತಂಕ ಈ ನಿಧಾನಕ್ಕೆ ಒಂದು ಕಾರಣವಿರುಬಹುದು. ಲಾಕ್‍ಡೌನ್ ಘೋಷಿಸಿದ ಪ್ರದೇಶಗಳಲ್ಲಿ ಸಂಕಷ್ಟದಲ್ಲಿರುವವರಿಗೆ ಜೀವನಕ್ಕೆ ಬೇಕಾದ ಹಣವನ್ನು ಸರ್ಕಾರ ನೇರವಾಗಿ ಅವರ ಖಾತೆಗೆ ವರ್ಗಾಯಿಸಲಾಗುತ್ತದೆ ಎನ್ನುವ ಭರವಸೆ ನೀಡಬೇಕು. ಸರ್ಕಾರದ ಯಾವುದೇ ಗುರುತು ಚೀಟಿ ಇದ್ದವರಿಗೂ ಈ ಸೌಲಭ್ಯ ಸಿಗಬೇಕು. ಈ ಭರವಸೆಯೊಂದಿಗೆ ಲಾಕ್‍ಡೌನ್ ಪ್ರಕ್ರಿಯೆಯನ್ನು ತ್ವರಿತಗೊಳಿಸಬಹುದು. ಜೊತೆಗೆ ಈಗ ಜಿಲ್ಲೆಗಳ ನಡುವಿನ ಸಂಚಾರದ ಮೇಲೆ ಮಿತಿಯನ್ನು ಹೇರಬೇಕು.

ಲಸಿಕೆಯ ವಿಷಯದಲ್ಲೂ ಇದನ್ನೇ ಮಾಡಬೇಕು. ಕೇಂದ್ರ ಸರ್ಕಾರದ ಪ್ರಕಾರ ಯಾರೂ ಬೇಕಾದರೂ ಲಸಿಕೆ ಹಾಕಿಸಿಕೊಳ್ಳಬಹುದು (ನಿಮಗೆ ಲಸಿಕೆ ಸಿಕ್ಕರೆ). ಆದರೆ ಅದರ ಹಣವನ್ನು ಆಯಾ ವ್ಯಕ್ತಿಗಳು ಅಥವಾ ರಾಜ್ಯ ಸರ್ಕಾರ ಭರಿಸಬೇಕು. ಇದರ ಪರಿಣಾಮ ಆಂದರೆ ಯಾರಿಗೆ ಹಣ ತೆರಲು ಸಾಧ್ಯವೋ ಅವರಿಗೆ ಲಸಿಕೆ ಸಿಗುತ್ತದೆ. ಕೆಲವು ರಾಜ್ಯಗಳಲ್ಲಿ ಸರ್ಕಾರವೇ ಉಳಿದವರ ಲಸಿಕೆಯ ಖರ್ಚನ್ನು ಭರಿಸಬಹುದು. ಆದರೆ ಉಳಿದ ಕಡೆ ಜನ ತಮ್ಮ ಪಾಡನ್ನು ತಾವೇ ನೋಡಿಕೊಳ್ಳಬೇಕಾಗುತ್ತದೆ. ಲಸಿಕೆಗಳು ಉಚಿತವಾಗಿ ಪ್ರತಿಯೊಬ್ಬರಿಗೂ ಸಿಗುವಂತೆ ಮಾಡಬೇಕು. ಮತ್ತು ಅದನ್ನು ಆಗುಮಾಡುವುದಕ್ಕೆ ಬೇಕಾದ ಆಡಳಿತಾತ್ಮಕ ವ್ಯವಸ್ಥೆಯನ್ನು ಮತ್ತು ಮಾನವ ಸಂಪನ್ಮೂಲವನ್ನು ಮೀಸಲಿಡಬೇಕು. ಆಗ ಆತಂಕದಲ್ಲಿರುವ ದೇಶಕ್ಕೆ ಭರವಸೆ ನೀಡಿದಂತಾಗುತ್ತದೆ. ಮತ್ತು ಜಗತ್ತನ್ನು ರಕ್ಷಿಸುವುದಕ್ಕೂ ಸಾಧ್ಯವಾಗುತ್ತದೆ

ಅಷ್ಟೇ ಅಲ್ಲ ಭಾರತದಲ್ಲಿ ಹೆಚ್ಚುತ್ತಿರುವ ದುರಂತಕ್ಕೆ ಜಗತ್ತು ತುಂಬಾ ನಿಧಾನವಾಗಿ ಪ್ರತಿಕ್ರಿಯಿಸುತ್ತಿದೆ. ಲಸಿಕೆಗಳನ್ನು ಹಾಗೂ ತುರ್ತು ನೆರವನ್ನು ನೀಡುವುದಾಗಿ ಬೈಡೆನ್ ಆಡಳಿತ ಏಪ್ರಿಲ್ ಕೊನೆಯಲ್ಲಿ ಘೋಷಿಸಿತು. ಆ ವೇಳೆಗೆ ಸೋಂಕಿತರ ಸಂಖ್ಯೆ ಮೂರು ಲಕ್ಷ ದಾಟಿ ಒಂದು ವಾರ ಕಳೆದಿತ್ತು. ಸಮಸ್ಯೆ ಎಷ್ಟು ಅಗಾಧವಾಗಿದೆ ಅಂದರೆ ಹೊರಗಡೆಯ ನೆರವಿನಿಂದ ಮಾಡಬಹುದಾದದ್ದು ಸಾಪೇಕ್ಷವಾಗಿ ತುಂಬಾ ಕಡಿಮೆ. ಅಂದ ಮಾತ್ರಕ್ಕೆ ಅಮೇರಿಕೆ ಹಾಗೂ ಯುರೋಪ್ ಕಳುಹಿಸುತ್ತಿರುವ ಲಸಿಕೆಗಳು, ಆಮ್ಲಜನಕ, ಹಾಗೂ ಹಣ ನಿಲ್ಲಬಾರದು. ಹಾಗೆಯೇ ಲಸಿಕೆಗಳನ್ನು ತಯಾರಿಸಲು ಬೇಕಾದ ಸಾಮಗ್ರಿಗಳ ರಫ್ತಿನ ಮೇಲಿರುವ ನಿರ್ಬಂಧವೂ ತೆರವಾಗಬೇಕು. ಪ್ರತಿಯೊಂದು ಜೀವವೂ ಮುಖ್ಯ.

ಆದರೆ ಜಗತ್ತು ಭಾರತದ ಆಚೆಗೆ ನೋಡಬೇಕು. ಸಕಾಲದಲ್ಲಿ ಕ್ರಮ ತೆಗೆದುಕೊಳ್ಳಬೇಕು. ಮತ್ತೊಮ್ಮೆ ಆ ನಿಟ್ಟಿನಲ್ಲಿ ತಪ್ಪಾಗಬಾರದು. ಮೊದಲ ಅಲೆ ಬಂದಾಗ ವೈರಾಣು ಅಷ್ಟೊಂದು ಬೇಗ ಹರಡುತ್ತದೆ ಅನ್ನುವುದನ್ನು ನಾವು ಅರ್ಥಮಾಡಿಕೊಂಡಿರಲಿಲ್ಲ. ಅದನ್ನು ಈಗ ಮರೆಯಬಾರದು. ಅಮೇರಿಕೆ ಹಾಗೂ ಐರೋಪ್ಯ ದೇಶಗಳಲ್ಲಿ ಲಸಿಕೆಯ ಪ್ರಚಾರದಲ್ಲಿ ಒಳ್ಳೆಯ ಪ್ರಗತಿಯಾಗುತ್ತಿದೆ. ಆದರೆ ಉಳಿದ ದೇಶಗಳು ಅದರಿಂದ ತಮಗೆ ರಕ್ಷಣೆ ದೊರಕಿಬಿಡುತ್ತದೆ ಎನ್ನುವ ಸುಳ್ಳು ಭ್ರಮೆಯಲ್ಲಿ ನಿದ್ದೆ ಹೋಗಬಾರದು.

ಭಾರತದಲ್ಲಿ ಮೊದಲಿಗೆ ಕಾಣಿಸಿಕೊಂಡು ಬಿ.1.617 ಮಾದರಿ, ಈಗ ದೇಶದ ಸರಹದ್ದನ್ನು ದಾಟಿ ಹರಡುತ್ತಿದೆ. ಭಾರತದಲ್ಲಿ ಲಸಿಕೆ ತೆಗೆದುಕೊಂಡ ಕೆಲವರೂ ಸೋಂಕಿಗೆ ತುತ್ತಾದಂತೆ ಕಾಣುತ್ತಿದೆ. ಪಶ್ಚಿಮದಲ್ಲಿ ಸಿಗುವ “ಉತ್ತಮ” ಲಸಿಕೆಗಳು ನಮ್ಮ ಜೀವವನ್ನು ರಕ್ಷಿಸಿಬಿಡುತ್ತದೆ ಎಂದು ಭಾವಿಸುವುದು ಮೂರ್ಖತನವಾಗುತ್ತದೆ. ಮುಖಂಡರುಗಳು ಹಾಗೂ ವಿಜ್ಞಾನಿಗಳು ವಿಭಿನ್ನ ವೈರಾಣುಗಳನ್ನು ಎದುರಿಸಲು ಏನು ಮಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಬೂಸ್ಟರ್ ಡೋಸ್, ಹೊಸ ವ್ಯಾಕ್ಸಿನ್, ಮಾಸ್ಕಗಳು, ಅನ್‍ಲಾಕ್ ಪ್ರಕ್ರಿಯೆಯನ್ನು ನಿಧಾನಗೊಳಿಸುವುದು ಇತ್ಯಾದಿ ನಿಟ್ಟಿನಲ್ಲಿ ಯೋಚಿಸಬೇಕು.

ವೈರಾಣು ಆಫ್ರಿಕಾ ಮೂಲಕ ಹರಡುವ ಸಾಧ್ಯತೆಯಿದೆ. ಈ ಬಗ್ಗೆ ಎಚ್ಚರಿಕೆ ಬೇಕು. ಅಲ್ಲಿ ಲಸಿಕೆಗಳ ಕಾರ್ಯಕ್ರಮ ಇನ್ನೂ ಸರಿಯಾಗಿ ಪ್ರಾರಂಭವೇ ಆಗಿಲ್ಲ. ಭಾರತದ ಸಧ್ಯದ ಪರಿಸ್ಥಿತಿಯಿಂದ ಅವರ ಕಷ್ಟ ಮತ್ತಷ್ಟು ಬಿಗಡಾಯಿಸಿದೆ. ಭಾರತ ತನ್ನನ್ನು ನೆಚ್ಚಿಕೊಂಡ ಬಹತೇಕ ದೇಶಗಳಿಗೆ ಲಸಿಕೆಗಳನ್ನು ರಫ್ತು ಮಾಡುವುದನ್ನು ನಿಲ್ಲಿಸಿಬಿಟ್ಟಿದೆ. ಇದು ಆಮ್ಲಜನಕ ಪೂರೈಕೆ ಹಾಗೂ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ತೀವ್ರವಾಗಿರುವ ದೇಶಗಳಲ್ಲಿ ದುರಂತವನ್ನು ಸೃಷ್ಟಿಸುತ್ತದೆ. ಅಮೇರಿಕಾ ಹಾಗೂ ಐರೋಪ್ಯ ದೇಶಗಳು ಅವಶ್ಯಕತೆ ಬಂದಾಗ ತ್ವರಿತವಾಗಿ ಕ್ರಮತೆಗೆದುಕೊಳ್ಳಲು ಸಿದ್ಧರಿರಬೇಕು. ಅಂದರೆ ಲಸಿಕೆಗಳನ್ನು ಆದಷ್ಟು ಬೇಗ ತಯಾರಿಸಿ ಸಾಗಿಸಲು ತಯಾರಿರಬೇಕು. ಅದಕ್ಕಿಂತ ಮುಖ್ಯವಾಗಿ ಜಾಗತಿಕ ಮಟ್ಟದಲ್ಲಿ ನಿಗಾ ಹಾಗು ಪರೀಕ್ಷೆಗೆ ಕ್ರಮ ತೆಗೆದುಕೊಳ್ಳಬೇಕು. ಸಮಯಕ್ಕೆ ಆಮ್ಲಜನಕ ಮತ್ತು ಸಾಮಗ್ರಿಗಳನ್ನು ರವಾನಿಸಲು ತಯಾರಿರಬೇಕು. ಲಾಕ್‍ಡೌನಿನಲ್ಲಿ ಸಂಕಟದಲ್ಲಿರುವ ಜನರಿಗೆ ಹಣಕಾಸಿನ ನೆರವನ್ನು ನೀಡಬೇಕು.

ಕೃಪೆ : ನ್ಯೂಯಾರ್ಕ್ ಟೈಮ್ಸ್
ಅನುವಾದ: ಟಿ ಎಸ್ ವೇಣುಗೋಪಾಲ್ ಹಾಗೂ ಶೈಲಜ

ಪ್ರತಿಕ್ರಿಯಿಸಿ