ಕಡಲ ಗಾಳಿ ಘಾಟು , ಕೊಳಂಬೆ ನೀರ ಮೆದುವೂ..

ನಾಡಿನ ಸಾಕ್ಷಿಪ್ರಜ್ಞೆಗಳಲ್ಲಿ ಒಬ್ಬರಾಗಿದ್ದ ಜಿ. ರಾಜಶೇಖರ ನಮ್ಮನಗಲಿದ್ದಾರೆ. ತಮ್ಮ ವಿಚಾರ, ಬರಹಗಳಲ್ಲಿ ನಿಷ್ಠುರತೆಯನ್ನು ನೋಂಪಿನಂತೆ ಕಾಯ್ದಿಟ್ಟುಕೊಂಡ, ಸಾಮಾನ್ಯ ಜನರ ಬದುಕಿನ ಕುರಿತು ಅಪಾರ ಪ್ರೀತಿಯಿಂದ ಚಿಂತಿಸಿದ ಜಿ. ರಾಜಶೇಖರ ಈ ನಾಡಿನ ಚಳುವಳಿಗಳಿಗೆ , ಕನ್ನಡ ಸಾಹಿತ್ಯ ವಿಮರ್ಶೆಗೆ ನೀಡಿದ ಕೊಡುಗೆ ಅನನ್ಯವಾದದ್ದು. ರಾಜಶೇಖರರ ನಿಡುಗಾಲದ ಗೆಳೆಯ ಎಂ. ರಾಜಗೋಪಾಲ್ ರಾಜಶೇಖರರ ವ್ಯಕ್ತಿತ್ವವನ್ನು, ಅವರ ಬರಹಗಳ ಮೂಲಕವೇ ಈ ಲೇಖನದಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ. ಈ ಲೇಖನವನ್ನು ಪುತ್ತೂರು ಕನ್ನಡ ಸಂಘದಿಂದ ೨೦೦೨ರಲ್ಲಿ  ಪ್ರಕಟಿತ ಎಂ . ರಾಜಗೋಪಾಲ್ ಅವರ   “ಧ್ಯಾನ, ಮಾತು ಮತ್ತು ಧ್ವನಿ” ಕೃತಿಯಿಂದ ಆಯ್ದುಕೊಳ್ಳಲಾಗಿದೆ . ಕನ್ನಡ ನಾಡು ಕಂಡ ಧೀಮಂತ ಚಿಂತಕನಿಗೆ ಋತುಮಾನದ ಶೃದ್ಧಾಂಜಲಿಯಾಗಿ ಈ ಬರಹ ನಿಮ್ಮ ಓದಿಗೆ.

divderspa

ಬಹುಶಃ ಶಿವರಾಮ ಕಾರಂತರ ನಂತರ(ಅವರ ಜೀವಿತದ ಅವಧಿಯಲ್ಲೂ) ಅವರಷ್ಟೇ ನಿರ್ಭೀತವಾಗಿ ಬರೆಯುತ್ತಿರುವವರು ರಾಜಶೇಖರ್ ಮಾತ್ರ ಎಂದೆನಿಸುತ್ತದೆ. ಎಡಪಂಥೀಯ ಧೋರಣೆಗಳನ್ನು ತ್ಯಜಿಸಿದ್ದರೂ ಒಟ್ಟಾರೆಯಾಗಿ ಅವರ ನಿಲುವು ಆರೋಗ್ಯಪೂರ್ಣವಾಗಿ ಒಟ್ಟು ಬದುಕಿಗೆ ಒಪ್ಪವಾಗಿ ಇಡುವಲ್ಲಿ ‘ಎಡ’ ಲೇಖಕರ ಓದು ಭದ್ರಬುನಾದಿಯನ್ನು ಒದಗಿಸಿದೆ – ಎಂದೂ ಅನ್ನಿಸ್ತದೆ. ಅವರೇ ವ್ಯಕ್ತಪಡಿಸುವಂತೆ ‘ಇಸಂ’ಗಳ ಹಂಗಿನಿಂದ ಮುಕ್ತವಾಗಿ ಸೃಜಿಸುತ್ತಿದ್ದಾರೆ ಎನ್ನುವಾಗಲೂ ಈ ಮಾತು ನಿಜ.

ರಾಜಶೇಖರ್ – ಏನು ಹೇಳಬೇಕೋ, ಅದರ ಬಗ್ಗೆ ಆಳವಾಗಿ ಧ್ಯಾನಿಸಿ, ಅದನ್ನು ಚುಟುಕಾಗಿ ಮತ್ತು ಅರ್ಥಪೂರ್ಣವಾಗಿ ಹೇಳಬಲ್ಲ ಅದ್ಭುತ ಪ್ರತಿಭೆಯ ಚಿಂತಕ. ಕೇವಲ ಮಾತಿನ ಮೋಡಿಯಲ್ಲಿ ಚದುರಿಹೋಗುವ ಅನಂತಮೂರ್ತಿಯವರಿಗೆ ಈ ಸತ್ಯ ಹಿಡಿಸಲಿಕ್ಕಿಲ್ಲ. ಅವರ ಧೋರಣೆಗಳಲ್ಲಿರುವ ಅಸ್ಪಷ್ಟತೆಯೂ, ರಾಮಾಯ ಸ್ವಸ್ತಿ, ರಾವಣಾಯ ಸ್ವಸ್ತಿ, ವಿಭೀಷಣಾಯ ಸ್ವಸ್ತಿ – ಮಾದರಿಯಲ್ಲಿ ಎಲ್ಲೆಲ್ಲಿಯೂ ಸಲ್ಲುವ ಚಟವೂ ಅದಕ್ಕೆ ಕಾರಣವಿರಬಹುದು.

ಲಂಕೇಶ ಪತ್ರಿಕೆ ಮತ್ತು ಅಲ್ಲೊಮ್ಮೆ ಇಲ್ಲೊಮ್ಮೆ ಪ್ರಕಟವಾಗುತ್ತಿರುವ ಬರಹಗಳನ್ನುಹೊraj1ರತಾಗಿಯೂ, ಇವರು ಬರೆದ ಲೇಖನಗಳ ತಳಹದಿಯಲ್ಲಿ, ಅದರಲ್ಲೂ ಮುಖ್ಯವಾಗಿ ಸಂದರ್ಶನ, ನಾಟಕ, ಕಾವ್ಯಗಳ ವಿಮರ್ಶೆಗಳಲ್ಲಿ ಅವರ ಚಿಂತನೆಗಳ ಜಾಡನ್ನು ಗಮನಿಸಬಹುದಾಗಿದೆ. ವಿಮರ್ಶೆ ಅನ್ನುವುದು ಒಂದು ಸೃಷ್ಟಿ ಕ್ರಿಯೆ; ಜ್ಞಾನದ ಕವಲು; ಲೇಖನದ-ಮಾತಿನ ಪ್ರಕ್ರಿಯೆಯ ಪ್ರಧಾನ ಧಾರೆಯಲ್ಲೇ ಪ್ರವಹಿಸುವಂತಹದು.ಅವರು ಅತ್ಯಂತ ಗೌರವಿಸುವ ಕಾರಂತರೊಂದಿಗಿನ ಸಂದರ್ಶನದಲ್ಲಿ ಇದು ವ್ಯಕ್ತವಾಗುತ್ತದೆ.(ರುಜುವಾತು ೩೧-೩೨)

‘ಕರ್ನಾಟಕದ ಕೆಲವು ಪರಿಸರವಾದೀ ಸಂಘಟನೆಗಳಿಗೆ ಪಶ್ಚಿಮದ ಹಣಕಾಸು ಬರುವುದನ್ನು ಕಾರಂತರು ನಿರಾಕರಿಸಿದ್ದಾರೆ. ತನ್ನ ಇನ್ನೂರು ವರ್ಷಗಳ ವಸಾಹತುಶಾಹೀ, ವರ್ಣಭೇದ, ಜನಾಂಗದಭೇದ, ಆರ್ಥಿಕ ದರೋಡೆ, ಅಣ್ವಸ್ತ್ರ ಪ್ರಯೋಗಗಳ ಪಾಪಗಳನ್ನು ಮುಂದರಿಸಿಕೊಂಡು ಹೋಗುವ ಪಶ್ಚಿಮದ ಹೊಸ ಹುನ್ನಾರ- ಈ ನೆರವು. ಇದರ ಬಗ್ಗೆ ಕಾರಂತರ ನಿರ್ಲಕ್ಷ್ಯದ ಧೋರಣೆ ನನ್ನ ವಿರೋಧವಿದೆ…

ಈ ಸಂದರ್ಶನದಲ್ಲಿ ಕಾರಂತರು ಸಾಮ್ರಾಜ್ಯಶಾಹೀ ಎನ್ನುವುದೇ ಇಲ್ಲ – ಎಂದು ಹೇಳಿದ್ದಾರೆ. ಈ ಅಭಿಪ್ರಾಯಕ್ಕೆ ಕೂಡ ನನ್ನ ವಿರೋಧವಿದೆ. ನಾಝಿಗಳ ಜನಾಂಗ ಹತ್ಯೆ, ಮುಸ್ಸೋಲಿನಿಯ ಫ್ಯಾಸಿಸಂ ಮತ್ತು ಸ್ಟಾಲಿನನ ಕೂಡುದೊಡ್ಡಿಗಳ ಹಾಗೆ ಪಶ್ಚಿಮದ ಸಾಮ್ರಾಜ್ಯಶಾಹೀ ಕೂಡಾ ಇಪ್ಪತ್ತನೆಯ ಶತಮಾನದ ದೊಡ್ದ ಕಳಂಕ. ಈ ಶತಮಾನದ ಮುಖ್ಯ ಘಟನೆಗಳನ್ನು ಎರಡು ಮಹಾಯುದ್ಧಗಳು, ಹಿರೋಷಿಮ ನಾಗಸಾಕಿ, ವಿಯಟ್ನಾಂ ಯುದ್ಧ, ಲ್ಯಾಟಿನ್ ಅಮೇರಿಕದಲ್ಲಿ ಅಮೇರಿಕದ ಹಸ್ತಕ್ಷೇಪ, ಪ್ಯಾಲೆಸ್ತೀನ್ ಮತ್ತು ದ. ಆಫ್ರಿಕದ ಜನತೆಯ ಹೋರಾಟಗಳು, ಬಹುರಾಷ್ಟ್ರೀಯ ಕಂಪನಿಗಳ ನಿರ್ಲಜ್ಜ ನಡವಳಿಕೆಗಳು – ಇವನ್ನೆಲ್ಲ ಮರೆತರೆ ಮಾತ್ರ ಪಶ್ಚಿಮದ ಸಾಮ್ರಾಜ್ಯಶಾಹೀ- ಎಂಬುದು ಇಲ್ಲವೇ ಇಲ್ಲ – ಇದು ರಾಜಶೇಖರ್ ನಿಲುವು, ಅವರ ಹೇಳಿಕೆಗಳಲ್ಲಿ ಸ್ಪಷ್ಟತೆ ಮತ್ತು ದೃಢತೆ ಇದೆ. ಚೋಮ್‌ಸ್ಕಿ, ತನ್ನ ಪ್ರಸಿದ್ಧ ಲೇಖನವೊಂದರಲ್ಲಿ ‘ಸಮಾಜವಾದದ ಆರ್ಥಿಕ ಮಾದರಿ ಒಂದು ದೊಡ್ಡ ದುರಂತ. ಆದರೆ ಪಾಶ್ಚಿಮಾತ್ಯ ಆರ್ಥಿಕ ತಳಹದಿ ಅದಕ್ಕಿಂತಲೂ ಭಯಾನಕವಾದ ಸೋಲು- ಎಂದು ಬರೆದಿದ್ದಾನೆ. ಈ ಎರಡು ಹೇಳಿಕೆಗಳ ಸಾಮ್ಯ ಬೆರಗುಗೊಳಿಸುತ್ತದೆ.’

_DSC7795 (1280x828)divderspaರಾಜಶೇಖರ್-ಮುಂದರಿಸಿ, ‘ಕಾರಂತರ ‘ಚಿಗುರಿದ ಕನಸು’ವಿನ ನಾಯಕ, ಹೃದಯವಂತಿಕೆಯ ತರುಣ. ದೆಹಲಿಯಿಂದ ತನ್ನ ಮೂಲದ ಹಳ್ಳಿಗೆ ಹಿಂದಿರುಗಿ ಅತ್ಯಂತ ಪ್ರತಿಕೂಲ ಸನ್ನಿವೇಶದಲ್ಲಿ ಕೃಷಿಮಾಡಿ ಅದರಲ್ಲಿ ಸಫಲನಾಗುತ್ತಾನೆ. ಆ ತರುಣ ಕಾಡು ಕಡಿದು ಗದ್ದೆ ಮಾಡುತ್ತಾನೆ. ಕಾರಂತರ ಪ್ರಕಾರ – ಇದು ವ್ಯಕ್ತಿಯೊಬ್ಬನ ಶ್ರಮ ಮತ್ತು ಧೀರೋದಾತ್ತತೆಗಳಿಂದ ಸಾಕಾರವಾಗುವ ಕನಸು. ಆದರೆ ವಾಸ್ತವದಲ್ಲಿ ಇದು ಭಾರತದ ಹೊಸ ಭೂಮಾಲಿಕ ಭಂಡವಾಳಶಾಹಿಯ ಕನಸು. ಕಾರಂತರ ನಾಯಕ ಹೃದಯವಂತಿಕೆಯ ತರುಣ. ಆದರೆ ದೇಶದ ಭೂಮಾಲಿಕ ಭಂಡವಾಳಶಾಹೀ ಕೃಷಿಯಲ್ಲಿ ಸಾಧಿಸಿದ ಆಧುನಿಕೀಕರಣದಲ್ಲಿ ದೇಶಾದ್ಯಂತ ಲಕ್ಷಾಂತರ ಸಣ್ಣ ರೈತರು ತಮ್ಮ ಭೂಮಿ ಕಳಕೊಂಡು ಕೃಷಿಕೂಲಿಗಳಾಗಿದ್ದಾರೆ. ಇದು ಕಠೋರ ಸತ್ಯ. ಕಾದಂಬರಿಯ ನಾಯಕ ಚರಿತ್ರೆಯ ಶಕ್ತಿಗಳಿಂದ ಬಾಧಿತನಾಗದ ಆರ್ಟಿಸ್ಟೋಕ್ರಿಟಿಕ್ ಪಾತ್ರ. ಕಾರಂತರ ಮನಸ್ಸಿನಲ್ಲಿರುವ ಆದರ್ಶದ ಪಾತ್ರವೇ, ಹೋರತು ಈ ನಾಡಿನ ಚರಿತ್ರೆಗಳಲ್ಲಿ ಬೇರು ಇರುವವನಲ್ಲ’ – ಎಂಬ ನಿರ್ಣಯಕ್ಕೆ ಬರುತ್ತಾರೆ.

ಇಲ್ಲಿ ಅಪ್ರಸ್ತುತವಲ್ಲದ, ಕು. ಶಿ. – ಕಾರಂತರನ್ನು ಸಂದರ್ಶಿಸಿದ ವೇಳೆ – ಕಾರಂತರ ಅಭಿಪ್ರಾಯವನ್ನು ನಮೂದಿಸುವುದು ಅಗತ್ಯ ಎಂದೆನಿಸುತ್ತದೆ. ‘ಕಲಾಕಾರ, ಒಬ್ಬ ವ್ಯಕ್ತಿ, ಒಂದು ಮತ, ಒಂದು ಮಾತು – ಇವುಗಳನ್ನು ನೋಡಿದಾಗ, ಕೇಳಿದಾಗ ಅನುಭವಿಸಿದಾಗ ತನಗೆ ಎನನ್ನಿಸ್ತದೋ, ಅದನ್ನು ಬರೆಯುತ್ತಾನೆ.ಇದು ಪುನಃ ಸೃಷ್ಟಿ’. ರಾಜಶೇಖರ್ ಇದನ್ನು ನಿರಾಕರಿಸುತ್ತಾ, ‘ಇಲ್ಲಿ ಒಂದು ಬೋಳುಗುಡ್ಡವಿದೆ. ಅಲ್ಲಿ ಒಬ್ಬ ಮನುಷ್ಯನಿದ್ದಾನೆ’ – ಎನ್ನುವ ಕಾರಂತರ ಗ್ರಹಿಕೆಯಲ್ಲಿ ಚರಿತ್ರೆ ಮಾತ್ರ ನಾಪತ್ತೆ. ಇದು ಒಂದು ಮಿಥ್. ಚರಿತ್ರೆಯನ್ನು ಹೊರಗಿಟ್ಟಿರುವ ಬೂರ್ಜ್ವಾ ಮಿಥ್. ರಾಜೀವ ಗಾಂಧಿ ಹೆಗ್ಡೆಗಳು – ಜನತೆಯ ಬಗ್ಗೆ, ನಂಜುಂಡಸ್ವಾಮಿ, ಸುಂದರೇಶ್- ರೈತರ ಬಗ್ಗೆ, ಚಿದಾನಂದಮೂರ್ತಿ – ಕನ್ನಡಿಗರ ಬಗ್ಗೆ, ಪರಿಸರವಾದಿಗಳು- ‘ ಮನುಕುಲ’ ಮತ್ತು ನಿಸರ್ಗದ ಬಗ್ಗೆ ಮಾತಾನಾಡುವುದು, ತನ್ನ ಮೌಲ್ಯಗಳೇ ಎಲ್ಲ ಕಾಲದ ಎಲ್ಲ ಜನರ ಮೌಲ್ಯಗಳು ಎಂದು ಚಿತ್ರಿಸಲು, ಬೂರ್ಜ್ವಾ ರಾಜಕೀಯ ಉಪಯೋಗಿಸುವ ಮಿಥ್…‘ ಎಂದು ಬರೆಯುತ್ತಾರೆ.

ಚೋಮ್‌ಸ್ಕಿ ಇಂತಹ ಮಿಥ್ ಗಳ ಬಗ್ಗೆ ಖಾರವಾಗಿ, ‘ಸ್ಲೋಗನ್ನುಗಳನ್ನು ಸೃಷ್ಟಿಸುವುದೇನೂ ಕಷ್ಟದ ಕೆಲಸವಲ್ಲ. ಆದರೆ ಬದುಕಿನ ಸೂಕ್ಷ್ಮವಾದ ಆಯ್ಕೆಗಳು ಎದುರಾದಾಗ ಇವು ಏನು ಉಪಯುಕ್ತವಾಗಲಾರವು’- ಎಂದು ವ್ಯಕ್ತಪಡಿಸುತ್ತಾನೆ.

ಸಾಕ್ಷಿ ೩೮ರಲ್ಲಿ ರಾಜಶೇಖರ್ ಬರೆದ ‘ಕಾರಂತರು ಮತ್ತು ಕಮ್ಯುನಿಸ್ಟರು’ – ಅವರ ವಿದ್ವತ್ ಪೂರ್ಣವಾದ ಬರಹ. ಅಡಿಗರ ಮತ್ತು ಕಾರಂತರ ಚಿಂತನೆಗಳ ವಿವಿಧ ಕೋನಗಳ, ಆಯಾಮಗಳ ಬಗ್ಗೆ ಸಾಮಾನ್ಯ ಓದುಗನ ಕಣ್ಣು ತೆರೆಯಿಸುವ ಲೇಖನವಿದು.

‘ಎಲ್ಲ ಶ್ರೇಷ್ಠ ಲೇಖಕರೂ ತಮ್ಮ ಸಂಸ್ಕ್ರತಿಯ ಜೊತೆ ಪ್ರೀತಿ – ದ್ವೇಷಗಳ ಸಂಬಂಧಗಳನ್ನು ಇಟ್ಟುಕೊಳ್ಳುತ್ತಾರೆ. ಎಲ್ಲ ಜೀವಂತ ಸಂಬಂಧಗಳೂ ನಮ್ಮ ಕುಟುಂಬ, ಮನೆ, ಊರು, ಉದ್ಯೋಗ ಇವುಗಳ ಜೊತೆ ನಾವಿಟ್ಟುಕೊಳ್ಳುವ ಪ್ರೀತಿ – ದ್ವೇಷಗಳ ಸಂಬಂಧಗಳೇ ತಾನೇ. ಸಂಸ್ಕೃತಿಯ ಜೊತೆ ಇಂತಹ ಸಂಬಂಧ ಇಟ್ಟುಕೊಳ್ಳುವುದು,ಬುದ್ಧಿ, ಭಾವನೆಗಳಲ್ಲಿ ವಿಶೇಷ ಜಾಗೃತಿಯನ್ನು ಸದಾ ಕಾಪಾಡಿಕೊಳ್ಳುವ ಮನಸ್ಸುಗಳಿಗೆ ಮಾತ್ರ ಸಾಧ್ಯ. ಅಡಿಗರ ಕಾವ್ಯದಲ್ಲಿ ಇಂತಹ ಸಂಬಂಧವನ್ನು ಕಾಣುತ್ತೇವೆ. ಕುವೆಂಪು – ಅವರ ಕಾದಂಬರಿಗಳಲ್ಲಿ ಇದನ್ನು ಕಾಣುತ್ತೇವೆ. ಕಾರಂತರಲ್ಲೂ ಇದು ವಿಶೇಷವಾಗಿ ಎದ್ದು ಕಾಣುತ್ತದೆ. ಈ ಜಾಗೃತಿ ಕಾಣದಾದಾಗ ಪ್ರಾಚೀನತೆಯ ಆರಾಧನೆಯ ಸುಳ್ಳುಸಾಹಿತ್ಯ ಹುಟ್ಟಬಹುದಾದಂತೆ, ಅರಗಿಸಿಕೊಳ್ಳದ ಪ್ರಗತಿಶೀಲತೆಯ ಸುಳ್ಳು ಸಾಹಿತ್ಯವೂ ಬರಬಹುದು’ – ಎನ್ನುತ್ತಾರೆ.

divderspa

ಕಾರಂತರನ್ನು ಒಂದು ಮಟ್ಟದಲ್ಲಿ ಒಪ್ಪಿಕೊಳ್ಳುತ್ತಲೇ ಅವರ ಮಿತಿಯನ್ನು ಹೇಳಲು ಹಿಂಜರಿಯದ ರಾಜಶೇಖರ್, ಲೇಖನವನ್ನು ಮುಂದರಿಸಿ… ‘ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ ದೇಶದಲ್ಲಿ ನಡೆದ ಎಲ್ಲ ಔದ್ಯಮೀಕರಣ, ಕೃಷಿ ಬೆಳವಣಿಗೆ, ನೀರಾವರಿ ಯೋಜನೆ, ಸಾರಿಗೆ, ಶಕ್ತಿ ಉತ್ಪಾದನೆಗಳ ಮೇಲೆ ಹೂಡಿದ ಅಪಾರ ಬಂಡವಾಳದ ಫಲ, ಮೇಲ್ವರ್ಗಕ್ಕೆ ಮಾತ್ರ ದೊರಕಿ, ಬಡವ-ಶ್ರೀಮಂತರ ನಡುವೆ, ಹಳ್ಳಿ-ಪಟ್ಟಣಗಳ ನಡುವೆ, ಅಂತರ ದಿನೇ ದಿನೇ ಹೆಚ್ಹುತ್ತಿರುವ ಪರಿಸ್ಥಿತಿಯಲ್ಲಿ ಕಾರಂತರು ಪ್ರತಿಪಾದಿಸುವ ‘ಮೊದಲು ಉತ್ಪನ್ನ – ನಂತರ ಹಂಚಿಕೆ’ ಎನ್ನುವ ಮಾತು – ಅರ್ಥವಿಲ್ಲದ್ದು. ಯಾವ ವ್ಯವಸ್ಥೆಯಲ್ಲೂ ಉತ್ಪನ್ನ ಮತ್ತು ಹಂಚಿಕೆ, ಬೇರ್ಪಡಿಸಲಾರದ ವಿಷಯಗಳು. ಯಾವ ಸಮಾಜದ ಉತ್ಪನ್ನವೂ ತಕ್ಕ ಕಾಲದಲ್ಲಿ ತಕ್ಕ ರೀತಿಯಲ್ಲಿ ಹಂಚಲು ಬರುವ ಅವತಾರ ಪುರುಷನಿಗೋಸ್ಕರ ಕಾಯುತ್ತಾ ಕೂಡುವುದಿಲ್ಲ’ – ಎಂದು ಕೊಂಚ ವ್ಯಂಗ್ಯವಾಗಿ ನುಡಿಯುತ್ತಾರೆ. ಪ್ರಬಂಧವನ್ನು ಮುಂದರಿಸಿ, ‘…ಅಡಿಗರಂತೆ ಕಾರಂತರೂ, ಮಾರ್ಕ್ಸ್ ವಾದ, ಸಮಾಜವಾದಗಳ ಬಗ್ಗೆ ತಮ್ಮ ತಾರುಣ್ಯದ ಕೆಲಕಾಲ ಒಲವುಳ್ಳವರಾಗಿದ್ದರು. ನೆಹರು ಯುಗದ ಬೂಟಾಟಿಕೆಯ ಸಮಾಜವಾದ ಮತ್ತು ಅದಕ್ಷ ಸರ್ಕಾರೀಕರಣ, ಎಂಥಾ ದಗಾಕೋರರೂ ತಾವು ಸಮಾಜವಾದಿಗಳೆಂದು ಜನರನ್ನು ನಂಬಿಸುವ ವಾತಾವರಣ, ಸಮಾಜವಾದದ ಶೋಷಣೆ ಮತ್ತು ಸ್ವಾರ್ಥ ಸಾಧನೆ, ರಶ್ಯಾ ಮೈತ್ರಿ ಮತ್ತು ಕಪ್ಪು ಹಣ, ಕಾಳಸಂತೆಯ ಕಾರುಬಾರುಗಳನ್ನು ಜೊತೆ ಜೊತೆಯೇ ಪೋಷಿಸಬಲ್ಲ, ಬಣ್ಣ ಬಣ್ಣದ ಮಾತಿನ ಬೆಲೂನುಗಳನ್ನು ಜನರಿಗೆ ಹಂಚಿ ತಮ್ಮ ಸ್ವಂತಕ್ಕೆ ಮಾತ್ರ ಧನ, ಕನಕ, ವಸ್ತು , ವಾಹನದ ನಿಜವಾದ ಆಸ್ತಿಯನ್ನೇ ಹೇರಳವಾಗಿ ಮಾಡಿಕೊಂಡ ನಾಯಕ ಗಣ – ಈ ರಾಜಕೀಯ ಸಂದರ್ಭ -ಇಬ್ಬರನ್ನೂ ಸಮಾಜವಾದದ ಶತ್ರುಗಳನ್ನಾಗಿ ಮಾಡಿತು’ ಎನ್ನುವ ನಿರ್ಣಯಕ್ಕೆ ಬರುತ್ತಾರೆ.

ಒಂದು ಮಾನವ ಸಮಾಜದಲ್ಲಿ ಬದುಕಿ ಇತರ ವ್ಯಕ್ತಿಗಳ ಇರುವಿಕೆಯನ್ನು, ಅವರ ಅನುಭವಗಳನ್ನು ಅವು ತಮ್ಮ ಜೀವನ ವಿಧಾನದಿಂದ ನೇರ ವಿರುದ್ಧ ದಿಕ್ಕಿನಲ್ಲಿವೆ – ಎನ್ನುವ ಕಾರಣಕ್ಕಾಗಿ ಅವುಗಳ ‘ಸ್ಥಿತಿ’ಯನ್ನೇ ಅಲ್ಲಗೆಳೆಯುವ ಬೌದ್ಧಿಕ, ನಿಜವಾಗಿಯೂ ಬೆಳೆದಿರುವುದಿಲ್ಲ. ಇಂತಹ ಅಚಾತುರ್ಯವನ್ನು ರಾಜಶೇಖರ್ ಎಂದೂ ಪ್ರದರ್ಶಿಸುವುದಿಲ್ಲವಾದ್ದರಿಂದ, ತಮ್ಮ ಚಿಂತನೆಗಳ ನೇರದಲ್ಲಿಲ್ಲದ ಕಾರಣಕ್ಕೆ ಕಾರಂತ, ಅಡಿಗರನ್ನು ದ್ವೇಷಿಸುವುದಿಲ್ಲ. ಅವರಿಬ್ಬರನ್ನೂ ಗೌರವಿಸಿ, ಅವರ ಕಾಣ್ಕೆಗಳನ್ನು ಕೊಂಡಾಡುತ್ತಾರೆ. ಅಂತೆಯೇ ಭಿನ್ನಾಭಿಪ್ರಾಯಗಳನ್ನು ಯಾವುದೇ ಮುಲಾಜಿಲ್ಲದೆ ಸಕಾರಣವಾಗಿ ಹೇಳಬಲ್ಲ ಧೈರ್ಯವೂ ಅವರಿಗಿದೆ. ಇದರಿಂದ, ‘ಅಡಿಗರ ಕಾವ್ಯದ ಮನೋಧರ್ಮ’ ಮತ್ತು ‘ಕಾರಂತರು ಮತ್ತು ಕಮ್ಯುನಿಸ್ಟರು’ ಮಾದರಿಯ ಉಚ್ಚಮಟ್ಟದ ಪ್ರಬಂಧಗಳನ್ನು ಬರೆಯಲು ಸಾಧ್ಯವಾಯಿತು, ಎಂದು ತೋರುತ್ತದೆ.

ಕಾರಂತರ ಬಗ್ಗೆ ತಮ್ಮ ಲೇಖನವನ್ನು ಮುಂದರಿಸಿ, ‘…ನಮ್ಮ ಸಾಂಸ್ಕೃತಿಕ, ಸಾಮಾಜಿಕ ಸನ್ನಿವೇಶದ ಎಲ್ಲ ವೈರುಧ್ಯಗಳನ್ನೂ ಕಾರಂತರು ಗಮನಿಸುವುದರಿಂದ ಸಂಸ್ಕೃತಿಯ ಜೊತೆ ಪ್ರೀತಿ, ಕುತೂಹಲಗಳಿಂದ ನೋಡಿದ ಇನ್ನೊಬ್ಬ ಲೇಖಕ ಕನ್ನಡದಲ್ಲಿಲ್ಲ. ಎಲ್ಲಿ ನಿಜವಾದ ಪ್ರೀತಿ ಇರುತ್ತದೋ, ಅಲ್ಲಿ ನಿಜವಾದ ಆಸಕ್ತಿಯೂ ಇರುತ್ತದೆ, ಈ ಬದುಕು ಯಾಕೆ ಹೀಗಿದೆ ಎನ್ನುವ ಸಿಟ್ಟೂ ಇರುತ್ತದೆ. ಈ ನಾಡಿನ ಜನ ಹೇಗೆ ಬದುಕುತ್ತಾರೆ, ಏನನ್ನು ಉಣ್ಣುತ್ತಾರೆ, ಹೇಗೆ ತಮ್ಮ ಅನ್ನ ಸಂಪಾದಿಸುತ್ತಾರೆ, ಹೇಗೆ ಪ್ರೀತಿಸುತ್ತಾರೆ, ಯಾವ ವಿಷಯದ ಬಗ್ಗೆ ಯೋಚಿಸುತ್ತಾರೆ ಎಂದು ಗೊತ್ತಿಲ್ಲದ ಜನ, ಬಲ, ಎಡ, ಲೋಹಿಯಾವಾದಿ, ಕಮ್ಯುನಿಸ್ಟ್ -ಯಾರೇ ಆಗಿರಲಿ -ಏನು ಪ್ರಯೋಜನ?‘ ಎಂದು ಖಂಡತುಂಡವಾಗಿ ಪ್ರಶ್ನಿಸುತ್ತಾರೆ.

‘ಇಸಂ’ಗಳಿಂದ ಭ್ರಮನಿರಸನ ಹೊಂದುತ್ತಿರುವ ವೇಳೆಗಷ್ಟೇ ಬರೆದ ಈ ಲೇಖನದಲ್ಲಿ ರಾಜಶೇಖರ್ ಒಬ್ಬ ಧ್ಯಾನಿಯಂತೆ ಈ ಪ್ರಶ್ನೆಗಳನ್ನು ತನಗೇ ಹಾಕಿಕೊಳ್ಳುತ್ತಾರೇನೋ ಅನ್ನುವ ಗುಮಾನಿ – ನನ್ನದು. ಜನರ ಬಗ್ಗೆ ಪ್ರೀತಿ – ಕುತೂಹಲ, ಕಾರಂತರಿಗಿದ್ದಂತೆ, ರಾಜಶೇಖರ್ ಗೂ ಅದೇ ಮಟ್ಟದಲ್ಲಿರುವುದರಿಂದ, ಅವರಿಗೆ ಕಾರಂತರು ಹೆಚ್ಚು ಅರ್ಥವಾಗುತ್ತಾರೆ, ಆಪ್ತವಾಗುತ್ತಾರೆ. ಇದರಿಂದಾಗಿಯೇ ಕಾರಂತರ ಬಗ್ಗೆ ಪ್ರಾಯಶಃ ಬೇರೆ ಯಾವ ಪ್ರಬುದ್ಧ ಲೇಖಕರಿಗಿಂತಲೂ ರಾಜಶೇಖರ್ ಸಂದರ್ಶನ ಮತ್ತು ಲೇಖನಗಳು ಹೆಚ್ಚು ವಸ್ತುನಿಷ್ಟವಾಗಿವೆ ಮತ್ತು ಅರ್ಥಪೂರ್ಣವಾಗಿವೆ ಎಂದೆನಿಸುತ್ತದೆ.

divderspa

divderspaದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಮಿಯ ಪ್ರಶ್ನೆ (ಸಾಕ್ಷಿ ೨೯) 

ತನ್ನ ಈ ದೀರ್ಘ ಪ್ರಬಂಧಕ್ಕೆ ಅಗತ್ಯವಾದ ನುಡಿಕಟ್ಟುಗಳನ್ನು ತಾನೇ ಅನ್ವೇಷಿಸಿ, ಅವುಗಳ ಅರ್ಥವನ್ನು ವಿವರಿಸಿ ಬರೆದ ಪ್ರಬುದ್ದ ಲೇಖನವಿದು. ಬಹುಶಃ ಒಂದು ಸರಕಾರ, ಯುನಿವರ್ಸಿಟಿ, ಸಮೂಹ ಮಾಧ್ಯಮಗಳಾದ ಪ್ರೆಸ್, ರೇಡಿಯೋ, ಟಿ. ವಿ. ಗಳಂತಹ ಬೃಹತ್ ಸಂಸ್ಥೆಗಳು ನಡೆಸಬಹುದಾದಂತಹ ಕೆಲಸವನ್ನ್ಜು ಒಬ್ಬನೇ ವ್ಯಕ್ತಿ, ತನ್ನ ಪರಿಮಿತ ಸಮಯ, ಆರ್ಥಿಕ ಬಲಗಳೊಂದಿಗೆ ಓಡಿಯಾಡಿ, ಮಾಹಿತಿ – ಆಕರಗಳನ್ನು ಸಂಗ್ರಹಿಸಿ, ಒಂದು ಧ್ಯಾನದಂತೆ ಬರೆದ ಮೇರು ಕೃತಿ ಇದು. ಎಲ್ಲೂ ಒಪ್ಪಂದವನ್ನು ಮಾಡಿಕೊಳ್ಳದ, ಒಂದು ಸೈದ್ಧಾಂತಿಕ ತಳಹದಿಯಲ್ಲಿ ರೂಪಿತವಾದ ಈ ಲೇಖನ ಸಾಕಷ್ಟು ಚರ್ಚೆಗೆ ಗುರಿಯಾಗಿ, ಈಗ ಹಳತಾಗ ಬೇಕಿದ್ದರೂ, ಹಾಗಾಗದೆ ಇನ್ನೂ ತನ್ನ ಹೊಸತನವನ್ನು ಉಳಿಸಿಕೊಂಡಿದೆ. ಭಾರೀ ಭೂಮಾಲಿಕ, ಸಣ್ಣ ಹಿಡುವಳಿದಾರ, ರೈತ, ಕೃಷಿಕೂಲಿ, ಕಾರ್ಮಿಕರೆಂದು ಹೆಸರಿಸುವುದರಿಂದ ಆರಂಭಿಸಿ, ಲೇಖನಕ್ಕೆ ಉಪಯೋಗಿಸಿದ ಶಬ್ದಗಳ ಸಾಂದರ್ಭಿಕ ಅರ್ಥವ್ಯಾಪ್ತಿಯನ್ನು ವಿವರಿಸಿ ಬರೆದ ಈ ಮೂಲ ಲೇಖನ, ಲಿಬರಲ್ ಚಿಂತಕರನ್ನು ಆರಂಭದಲ್ಲೇ ನೆಲೆಯಿಲ್ಲದಂತೆ ಮಾಡುತ್ತದೆ. ಕೆಲವೊಮ್ಮೆ ಖಾರವಾಗಿ, ಖಂಡತುಂಡ ಮಾತುಗಳಲ್ಲಿ, ಒಮ್ಮೊಮ್ಮೆ ವ್ಯಂಗ್ಯವಾಗಿ, ಆದರೆ ಎಲ್ಲೂ ಮೂಲ ದ್ರವ್ಯವನ್ನು ಬಿಟ್ಟುಕೊಡದೆ ಸಾಗುವ ಈ ಬರಹ, ಗಾಲ್‍ಬ್ರೈತ್ ನ ‘ಇಂಡಿಯದಲ್ಲಿ ಸೋಮಾರಿಗೂ , ದುಡಿಯುವವನಿಗೂ ಸ್ಪಷ್ಟವಾದ ವಿಭಜನೆಯಿಲ್ಲ’- ಎನ್ನುವ ಪ್ರಸಿದ್ದ ಮಾತನ್ನು ಗಾಳಿಗೆ ತೂರುತ್ತದೆ. ಇದೂ ಅಲ್ಲದೆ (೧) ದುಡಿಯುವ ಕೈಗಳು ಅಗತ್ಯಕ್ಕಿಂತ ಹೆಚ್ಚು, (೨) ವರ್ಷದ ಎಲ್ಲಾ ದಿನಗಳಲ್ಲಿ ದುಡಿಯುವುದಿಲ್ಲ (೩) ಒಬ್ಬ ಮಾಡಬಹುದಾದ ಕೆಲಸವನ್ನು ಇಬ್ಬರು ಅಥವ ಹೆಚ್ಚು ಜನರು ಮಾಡುವುದು – ಎನ್ನುವ ನಿರುದ್ಯೋಗ ಸ್ವರೂಪದ ವಿಶ್ಲೇಷಣೆಗಿಂತ ಬೇರೆಯೇ ಆದದ್ದನ್ನು ರಾಜಶೇಖರ್ – ಮಂಡಿಸುತ್ತಾರೆ.

raj2ಒಂದು ಧ್ಯಾನದಂತೆ ಆರಂಭವಾಗುವ ಬರಹ, ಥಟ್ಟನೆ ನಮ್ಮನ್ನು ಆವರಿಸಿಬಿಡುತ್ತದೆ.

“….ಕೃಷಿಕಾರ್ಮಿಕರ ಮಟ್ಟಿಗೆ ಕನಿಷ್ಟ ದಿನಕೂಲಿ ಎಂಬುದು ಅರ್ಥಹೀನವಾದದ್ದು, ಶಬ್ದಗಳನ್ನು ಅವುಗಳ ಅರ್ಥನಿಖರತೆಯ ಬಗ್ಗೆ ಯೋಚಿಸದೆ, ಈ ಸಂದರ್ಭದಲ್ಲಿ ಈ ಶಬ್ದಕ್ಕೆ ನಾನು ಕೊಡುವ ಅರ್ಥ ಇದು – ಎಂದು ಡಿಫೈನ್ ಮಾಡದೆ, ಉಪಯೋಗಿಸಿದಾಗ ಶಬ್ದ ಹೇಳಹೊರಟ ಸತ್ಯ ಹೇಗೆ ಮರೆಯಾಗಿಬಿಡುತ್ತದೆ – ಎಂಬುದಕ್ಕೆ ಇದು ಒಂದು ಉದಾಹರಣೆ. ಮಾತಿಗೆ ಮತ್ತು ಯೋಚಿಸುವುದಕ್ಕೆ ನಮಗಿರುವುದು ಇದೊಂದೇ ಭಾಷೆಯಾದ್ದರಿಂದ ಭಾಷೆಯ ಅರ್ಥನಿಖರತೆಯನ್ನು ವ್ರತದಂತೆ ಕಾಪಾಡಿಕೊಂಡು ಬರಬೇಕಾದ ಅಗತ್ಯ ಎಂದಿಗಿಂತಲೂ ಈಗ ಹೆಚ್ಚು….’

ಇಲ್ಲಿ ‘ಭಾಷೆಗೆ ಕೇವಲ ಅಭಿವ್ಯಕ್ತಿ ಮಾಧ್ಯಮವಾಗಿ ನೆಲೆ ಇರುವುದಲ್ಲ. ರಾಜಕೀಯ ಪ್ರತಿಕ್ರಿಯೆಯಾಗಿಯೂ ಅದಕ್ಕೊಂದು ಆಯಾಮವಿದೆ’ ಎನ್ನುವ ಗ್ರಾಮ್‍‌ಸ್ಕಿಯ ಚಿಂತನೆಗೆ ಹತ್ತಿರವಾಗಿ ರಾಜಶೇಖರ್ ಯೋಚಿಸುತ್ತಾರೆ.

‘ಕಾಗದದ ಮೇಲೆ ಕಾರಿಕೊಂಡದ್ದು, ಮೈಕಿನ ಮುಂದೆ ಉಗುಳಿದ್ದು, ಮೊದಲು ಸುಳ್ಳಾದದ್ದು ನಂತರ ಭ್ರಮೆಯಾಗುತ್ತದೆ. ಸುಳ್ಳಿನ ಬಲೆಯಲ್ಲಿ ಬಿದ್ದ ಪೆದ್ದನಂತೆ ಬಲೆ ಬೀಸಿದ ಫಟಿಂಗನೂ ತನ್ನ ಜಾಲದಲ್ಲಿ ತಾನೇ ಸಿಕ್ಕಿಕೋಳ್ಳುತ್ತಾನೆ. ದೇಶವೇ ಇಂತಹ ಸುಳ್ಳಿನ ಬಲೆಯೊಳಗೆ ಸಿಕ್ಕಿ ಒದ್ದಾಡುತ್ತಿರುವ ದುರಂತ ಈಗ ನಮ್ಮ ಕಣ್ಣೆದುರಿಗೆ ನಡೆಯುತ್ತಿರುವಂತದ್ದು….’

‘…ಕರ್ನಾಟಕ ಭೂ ಶಾಸನದಿಂದ ನಮ್ಮ ಕೃಷಿವ್ಯವಸ್ಥೆಯ ಮೂಲಭೂತ ವೈರುದ್ಯ ಕೊನೆಗೊಳ್ಳುವುದಿಲ್ಲ. ಭೂ ಸುಧಾರಣೆಯಿಂದ ಭೂಮಿ ಪಡೆಯುವ ಒಕ್ಕಲುಗಳಲ್ಲಿಯೂ ಬಹುಪಾಲು ಬಡರೈತರೇ, ಭೂಮಿ ಪಡೆದ ಇವರು ಸಣ್ಣ ಹಿಡುವಳಿದಾರರಾಗುತ್ತಾರೆ; ಅಂದರೆ ಇಲ್ಲಿ ಆಸ್ತಿಯ ಹಸ್ತಾಂತರವಾಗುತ್ತದೆಯೇ ಹೊರತು ಆಸ್ತಿಯ ವಿತರಣೆಯಾಗುವುದಿಲ್ಲ. ಇವರೂ, ಇತರ ಕುಟುಂಬದವರೂ ಕೃಷಿ ಕೆಲಸದಲ್ಲಿ ಭಾಗವಹಿಸಿದರೂ (ಗೇಣಿಗೆ ಭೂಮಿ ಕೊಟ್ಟ ಸಣ್ಣ ಹಿಡುವಳಿದಾರ ಇಷ್ಟನ್ನೂ ಮಾಡದೆ ಕೂತು – ಗೇಣಿ ತಿನ್ನುತ್ತಾನೆ ಎನ್ನುವುದನ್ನು ನಾವು ಮರೆಯಕೂಡದು) ಕೃಷಿಕೂಲಿಗಳನ್ನು ಇವರೂ ಬಳಸಬೇಕಾಗುತ್ತದೆ. ಗೇಣಿ ಪದ್ದತಿ- ಅದು ಭಾರೀ ಭೂಮಾಲಿಕ, ಮಧ್ಯಮ ರೈತ, ಸಣ್ಣ ಹಿಡುವಳಿದಾರ – ಯಾರಿಗೇ ಸಂಬಂಧಿಸಿರಲಿ ಒಂದು ಪಾಳೆಯಗಾರೀ ಅವಶೇಷ. ಇಡೀ ದೇಶದಲ್ಲೇ ಈಗ ಕೃಷಿಯ ಅರ್ಥವ್ಯವಸ್ಥೆ ಪಾಳೆಯಗಾರೀವ್ಯವಸ್ಥೆಯಿಂದ ಬಂಡವಾಳಶಾಹೀ ವ್ಯವಸ್ಥೆಯತ್ತ ಹೊರಳಿಕೊಳ್ಳುತ್ತಿದೆ.” ನಮ್ಮ ಹಳ್ಳಿಗಳ ಭೂಹೀನ ಕೃಷಿ ಕಾರ್ಮಿಕರನ್ನು, ಬಡ ರೈತರನ್ನು, ಭೂ ಸುಧಾರಣಾ ಕಾನೂನಿನಿಂದ ನಿರ್ಗತಿಕರಾದವರನ್ನು ನಮ್ಮ ಅರ್ಥವ್ಯವಸ್ಥೆಯಲ್ಲಿ ಕ್ರಿಯಾಶೀಲವಾಗಿ ಭಾಗವಹಿಸುವಂತೆ ಮಾಡುವ, ಮನುಷ್ಯ ಯೋಗ್ಯ ಬದುಕಿನ ಕನಿಷ್ಠ ಅಗತ್ಯಗಳನ್ನಾದರೂ ಅವರು ಪಡೆಯುವಂತೆ ಮಾಡುವ ಯಾವ ಮಾರ್ಗವೂ ಇಲ್ಲವೇ? ಪ್ರಸ್ತುತ ರಾಜಕೀಯ ಆರ್ಥಿಕ ವ್ಯವಸ್ಥೆಯಲ್ಲಿ ಈ ಪ್ರಶ್ನೆಗಳಿಗೆ ಪರಿಹಾರವಿಲ್ಲ.

‘ಈ ನೆಲದ ದರಿದ್ರರು ಸದಾ ಹೀಗೆಯೇ ಇತಿಹಾಸದ ಗತಿಗೆ ಅನ್ಯರಾಗಿ, ನಿಶ್ಚಲ ಇದ್ದು ಬಿಡುತ್ತಾರೆಯೇ? ಈ ವ್ಯವಸ್ಥೆವೂ ನಿಂತಿರುವುದು ತಮ್ಮ ದುಡಿಮೆಯ ಮೇಲೆ ಎಂಬುದನ್ನು ತಿಳಿಯದೆ ಹೋಗುತ್ತಾರೆಯೇ? ಈ ಪ್ರಶ್ನೆಗಳಿಗೆ ನನ್ನ ಉತ್ತರಗಳೇನು ಎಂದು ಯಾರಿಗೂ ಹೊಳೆಯಬಹುದಾದ್ದು – ಎಂದು ಓದುಗನನ್ನು ಚಿಂತನೆಗೆ ಹಚ್ಚಿ ಅತ್ಯಂತ ಮೌಲಿಕವಾದ ಬರಹವನ್ನು ನಿಲ್ಲಿಸಿಬಿಡುತ್ತಾರೆ. ಅವರು ನೀಡುವ ತಾತ್ವಿಕ ಹೊಳಪು ಮಾತ್ರ ಅನನ್ಯವಾದದ್ದು – ಎಂದೇ ನನ್ನೆಣಿಕೆ.’

ಬಹುಶಃ ರಾಜಶೇಖರ್ ಬೇರೇನನ್ನೂ ಬರೆಯದೆ. ‘ದಕ್ಷಿಣ ಕನ್ನಡದಲ್ಲಿ ಭೂಮಿಯ ಪ್ರಶ್ನೆ ‘ಮತ್ತು’ಕಾಗೋಡು ಸತ್ಯಾಗ್ರಹ’-ಎರಡೇ ಲೇಖನಗಳನ್ನು ಬರೆಯುತ್ತಿದ್ದರೂ ಪ್ರಬುದ್ದ ಲೇಖಕರ ಸಾಲಿಗೆ ಎಂದೋ ಸೇರಿಬಿಡುತ್ತಿದ್ದರು.

_DSC7753 (1280x854)divderspaಜನ್ನನ ಯಶೋಧರ ಚರಿತೆಯ ಬಗ್ಗೆ ರಾಜಶೇಖರ್ ಬರೆದ ಲೇಖನ ಅವರ ಚಿಂತನೆಯ ಪ್ರಬುದ್ದತೆಯ ಬಗ್ಗೆ ಒಂದು ಶ್ರೇಷ್ಠ ನಿದರ್ಶನ.(ರುಜುವಾತು – ೬)

ಎಲ್ಲ ಶ್ರೇಷ್ಠ ಸಾಹಿತ್ಯ ಕೃತಿಗಳಂತೆ ಯಶೋಧರ ಚರಿತೆಯೂ ತನ್ನ ಕಾಲ, ದೇಶದ ಚೌಕಟ್ಟನ್ನು ಮೀರಿ ಮನುಷ್ಯನ ಅದೃಷ್ಟದ ಬಗ್ಗೆ ಚಿಂತಿಸುತ್ತದೆ. ಕಾವ್ಯದಲ್ಲಿ ಕವಿ ಮನುಷ್ಯಾನುಭವದ ಬಗ್ಗೆ ಎತ್ತುವ ನೈತಿಕ ಪ್ರಶ್ನೆಗಳು, ಅವನು ಅವುಗಳಿಗೆ ಜೈನಧರ್ಮ ರೀತ್ಯಾ ಒದಗಿಸುವ ಉತ್ತರಗಳಿಂದ ಹೆಚ್ಚು ಮುಖ್ಯವಾಗಿವೆ. ಮಾತ್ರವಲ್ಲ. ಕಾವ್ಯದ ಅನುಭವ ಮತ್ತು ಅದು ಪ್ರತಿಪಾದಿಸುವ ಜೈನ ಧಾರ್ಮಿಕ ನಂಬಿಕೆ ಇವೆರಡರ ನಡುವೆ ಅರ್ಥಪೂರ್ಣವಾದ ಸಂವಾದವೂ ಕವಿಗೆ ಸಾಧ್ಯವಾಗಿದೆ. ಕಾವ್ಯದ ಈ ಡಯಲೆಕ್ಟಿಕ್ ಬಹುರೂಪಿಯಾಗಿದೆ.ಪ್ರವೃತ್ತಿ – ಸಂಸ್ಕಾರ, ದೇಹ – ಆತ್ಮ. ಇಂದ್ರಿಯಾನುಭವ – ಜಿತೇಂದ್ರಿಯತ್ವ, ದಾಂಪತ್ಯ – ಹಾದರ, ವ್ಯಕ್ತಿ- ಸಮಾಜ… ಹೀಗೆ ಹಲವು ದ್ವಂದ್ವಗಳನ್ನು ಅದು ಒಳಗೊಂಡಿದೆ.

‘…ಅಮೃತಮತಿ, ಅಷ್ಟವಂಕನನ್ನು ಮೋಹಿಸುವ ವರ್ಣನೆ – ಕಾವ್ಯದಲ್ಲಿ ಪಡೆದುಕೊಂಡಿರುವ ಸಂಕೀರ್ಣ ವಿನ್ಯಾಸಗಳನ್ನು ಗಮನಿಸದೆ ಈ ಕೃತಿಯ ಬಹುತೇಕ ವಿಮರ್ಶಕರು ಆಕೆಯದು ಅನೈತಿಕ ರತಿ ಎಂಬ ಒಮ್ಮತದ ನಿರ್ಣಯಕ್ಕೆ ಬಂದಿದ್ದಾರೆ.

ರಾಜಶೇಖರ್ ಇದನ್ನು ಅಲ್ಲಗಳೆಯಲು ಬಳಸುವ ತರ್ಕ – ನಿಜವಾಗಿಯೂ ವಿಮರ್ಶೆಯಲ್ಲಿ ಒಂದು ಮಹತ್ವದ ಮಜಲು. ಅವರು ಕಾವ್ಯದ ಅರ್ಥವ್ಯಾಪ್ತಿಯನ್ನು ಬೇರೆಯೇ ಆಯಾಮಕ್ಕೆ ಒಯ್ಯುತ್ತಿದ್ದಾರೆ – ಎಂದನಿಸ್ತದೆ.

‘…ಆದರೆ ಕಾವ್ಯದಲ್ಲಿ ಈ ಅಭಿಪ್ರಾಯಗಳನ್ನು ಸಮರ್ಥಿಸಲು ಹೇಗೋ, ಹಾಗೆಯೇ ಅವುಗಳನ್ನು ಅಲ್ಲಗಳೆದು ತದ್ವಿರುದ್ಧವಾದ ನಿಲುವನ್ನು ತಳೆಯಲು ಸಾಕಷ್ಟು ಆಧಾರಗಳಿವೆ;ಕಾವ್ಯದ ವಿನ್ಯಾಸವೇ ಹಾಗಿದೆ. ಅಮೃತಮತಿಯದ್ದು ಕೇವಲ ಇಂದ್ರಿಯಗಳು ಮಾತ್ರ ಜೀವಂತವಾಗಿರುವ ಪ್ರಾಣಿಜೀವವಲ್ಲ. ಅವಳ ಪ್ರವೃತ್ತಿಗೆ ತನ್ನದೇ ಆದ ತಾರ್ಕಿಕ ಹಿನ್ನೆಲೆಯಿದೆ. ಒಮ್ಮೆ ಅಷ್ಟವಂಕನನ್ನು ಮೋಹಿಸಿದ ಮೇಲೆ, ಅವಳಿಗೆ ಗಂಡನನ್ನು ನೋಡುವ, ಮಾತನಾಡುವ, ಮುದ್ದಿಸುವ ಮೊದಲಿನ ಸ್ಥಿತಿ ಮತ್ತೆ ಮರುಕಳಿಸದು. ಆಷ್ಟವಂಕನ ಬಳಿ ಸಾರುವಾಗ ಹೂ,ಗಂಧ, ವೀಳಯಗಳನ್ನು ಒಯ್ದಿದ್ದಳು ಎಂಬ ವಿವರದಲ್ಲಿ ಅವಳ ಮೋಹ ಇಂದ್ರಿಯಗಳ ವ್ಯಭಿಚಾರವನ್ನು ಮೀರಿದ ಒಲವಿನ ಶೃಂಗಾರದ ಧ್ವನಿಯನ್ನು ಪಡೆದುಕೊಳ್ಳುತ್ತದೆ.’

‘…ಆಷ್ಟವಂಕನಿಂದ ಬಾಸುಂಡೆ ಬರುವಂತೆ ಹೊಡೆಸಿಕೊಂಡೂ, ಅವನಲ್ಲಿಯೇ ತನ್ನ ಪ್ರೀತಿ ಸಾರುವ ಅಮೃತಮತಿ, ತನ್ನ ಗಂಡ ನೈದಿಲೆ ಹೂವಿನಲ್ಲಿ ನೆಪಕ್ಕೆ ಹೊಡೆದರೂ ಅವಳು ಮೂರ್ಛೆ ಹೋಗುತ್ತಾಳೆ. ಅಮೃತಮತಿಯ ಪ್ರವೃತ್ತಿ ಕಾಮ ಮಾತ್ರವಲ್ಲ. ಅದು ಸಕಲೇಂದ್ರಿಯಗಳ ಅನುಭವವನ್ನು ಇಷ್ಟಪಟ್ಟು ಅದಕ್ಕೆ ಹಾತೊರೆಯುವಂಥದ್ದು. ಆದರೆ ಅವಳು ಬಾಳಿದ ಸಂಸ್ಕೃತಿಯ ಆವರಣ ಇದಕ್ಕೆ ತದ್ವಿರುದ್ಧವಾದ ನಿಗ್ರಹವನ್ನು ಬೋಧಿಸುತ್ತದೆ.’

… ಯಶೋಧರ ಕಾವ್ಯದ ಸಾಂಸ್ಕೃತಿಕ ಹಿನ್ನೆಲೆಯನ್ನು ಅರಿತುಕೊಳ್ಳಲು, ಜೈನ ಧರ್ಮದ ಆಂತರಿಕ ವೈರುಧ್ಯಗಳನ್ನು ಗುರುತಿಸಬಹುದಾಗಿದೆ. ಜೈನ ಧರ್ಮವೂ ಬೌದ್ದ ಧರ್ಮದಂತೆಯೇ ಹಿಂದೂ ಧರ್ಮದ ವಿರುದ್ದವಾಗಿ ಬಂಡಾಯದ ರೀತಿಯಲ್ಲಿ ಹುಟ್ಟಿದ್ದು ಐತಿಹಾಸಿಕ ಸಂಗತಿಯಾಗಿದೆ. ಇವು ತಮ್ಮ ಹುಟ್ಟಿನಲ್ಲಿ ಸಮಾನತೆ, ಅಹಿಂಸೆ ಮತ್ತು ನಾಸ್ತಿಕತೆಯ ಮೌಲ್ಯಗಳನ್ನು ಎತ್ತಿ ಹಿಡಿದುವು. ಆದರೆ ಇದೇ ಸಮಯದಲ್ಲಿ ಉತ್ತರ ಭಾರತದಲ್ಲಿ ಆಸ್ತಿಯ ಖಾಸಗೀ ಒಡೆತನ, ನೀರಿನ ಹಕ್ಕು, ಗುಲಾಮರ ನೇಮಕ, ದೇಶೀಯ ವಾಣಿಜ್ಯ, ಲೇವಾದೇವಿ – ಇವು ಖಚಿತ ರೂಪ ಪಡೆದುಕೊಳ್ಳುತ್ತಿದ್ದವು.raj3

ಆಸ್ತಿಯ ಒಡೆತನ, ಸಮಾನತೆ, ಮುಕ್ತವಾದ ಗಂಡು-ಹೆಣ್ಣಿನ ಸಂಬಂಧ ಪಾಪಪ್ರಜ್ಞೆ ಬಾಧಿಸದ ಹಾಡು ಕುಣಿತ, ಸುಂದರ ಬದುಕಿನ ಗುಡ್ಡಗಾಡಿನ ಪಂಗಡಗಳನ್ನು ಕ್ರೂರವಾಗಿ ಹತ್ತಿಕ್ಕಿ, ಅರಸೊತ್ತಿಗೆ ತಲೆಎತ್ತುತ್ತಿದ್ದ ಕಾಲವೂ ಅದಾಗಿತ್ತು. ಪಂಗಡಗಳ ಮೇಲೆ ಅರಸೊತ್ತಿಗೆಗಳು ನಡೆಸುತ್ತಿದ್ದ ಕ್ರೂರ ದಬ್ಬಾಳಿಕೆಗಳನ್ನು ಎರಡೂ ಧರ್ಮಗಳು ಖಂಡಿಸಲಿಲ್ಲ.ಇದರಿಂದಾಗಿ ಅವರ ಅಹಿಂಸೆ, ಅಪರಿಗ್ರಹಗಳು ಅಮೂರ್ತ ಮೌಲ್ಯಗಳಾದುವು. ಬಹುಶಃ ಇದು ಎಲ್ಲ ಕಾಲದ ಆದರ್ಶಗಳ ದುರ್ದೈವ. ಯಶೋಧರ ಚರಿತೆಯಲ್ಲಿ ನಾವು ಕಾಣುವುದು ಈ ವೈರುಧ್ಯದ ಚಿತ್ರಣವನ್ನೇ.’

ಹಕ್ಲ್ಸೆಯ ಮೂಲಭೂತ ಚಿಂತನೆಗಳಲ್ಲಿ ಒಂದು-‘ಸತ್ಯ ಮಹತ್ತಾದದ್ದು ಅದಕ್ಕಿಂತಲೂ ಮುಖ್ಯವಾಗಿ ಸತ್ಯದ ಬಗ್ಗೆ ಮೌನವಾಗಿರುವುದು’. ಆದರೆ ಸತ್ಯದ ಬಗ್ಗೆ ಮೂಕಪ್ರೇಕ್ಷಕವಾದ ಬೌದ್ದ, ಜೈನ ಧರ್ಮಗಳೆರಡೂ ಇಂಡಿಯಾದಲ್ಲಿ ನೆಲಕಚ್ಚಿದುವು. ಒಬ್ಬ ಬೌದ್ದಿಕನ ಸಾಕ್ಷಿ ಪ್ರಜ್ಞೆಯಿಂದ ಆತನ ಜವಾಬ್ದಾರಿ ಬೇರೆಯಾದ ಫಲವಿದು. ಆದ್ದರಿಂದ ರಾಜಶೇಖರ ಈ ಮೌನವನ್ನು ‘ದುರ್ದೈವ’ ಎಂದಿರಬೇಕು.

 

ಸತ್ತವರ ನೆರಳು- ನಾಟಕದ ತತ್ವಗಳು (ಸಾಕ್ಷಿ – ೨೭)

ಇಲ್ಲಿ ಒಟ್ಟು ನಾಟಕದ ತತ್ವಗಳ ಬಗ್ಗೆ ಅತ್ಯಂತ ಗಾಢವಾದ ಮತ್ತು ನಿರ್ಭೀತವಾದ ಹೇಳಿಕೆಗಳನ್ನು ರಾಜಶೇಖರ್ ಕೊಡುತ್ತಾರೆ.

…ಸತ್ತವರ ನೆರಳು ನಾಟಕದ ತಾತ್ವಿಕ ಧೋರಣೆಗಳನ್ನು ತಿರಸ್ಕರಿಸಲು ಕಾರಣ, ಆ ಧೋರಣೆಗಳನ್ನು ರೂಪಿಸಿದ ಜೀವನಾನುಭವ ಅಖಂಡವಲ್ಲದ್ದು ಎಂಬುದು. ಕಳೆದ ನೂರು ವರ್ಷಗಳಲ್ಲಿ ಈ ದೇಶದ ಆರ್ಥಿಕ, ಸಾಮಾಜಿಕ ಬದಲಾವಣೆಗಳಿಂದ ನೆಲ ಕಳೆದುಕೊಂಡ, ಉದ್ಯೋಗ ಕಳೆದುಕೊಂಡ , ಹೊತ್ತಿನ ಊಟದ ಖಾತ್ರಿ ಇಲ್ಲದ, ಬರೇ ಹಸಿವು ನಿಶ್ಯಕ್ತಿಗಳಿಂದ ಹುಳ ಸತ್ತಂತೆ ಸಾಯುವ ಅಸಂಖ್ಯ ಭಾರತೀಯರು ಒಂದು ಕ್ಷಣ ತಮ್ಮ ಮತ್ತು ತಮ್ಮ ಪರಿಸರದ ಬಗ್ಗೆ ಸ್ಪಷ್ಟವಾಗಿ ಯೋಚಿಸಬಲ್ಲರಾದರೆ ಆಗ ಅವರಿಗೆ ಮಠದ ಬಗ್ಗೆ, ಶ್ರದ್ಧೆಯ ಬಗ್ಗೆ , ರಾಜಕೀಯದ ಬಗ್ಗೆ ಏನು ಅನ್ನಿಸೀತು? ಸದ್ಯದ ಭಾರತದಲ್ಲಿ ಬರೆಯುವ ಲೇಖಕ ಹೀಗೆ ಯೋಚಿಸಿದಾಗ ಮಾತ್ರ ಆತ ವರ್ತಮಾನಕ್ಕೆ ಪೂರ್ಣವಾಗಿ ಸ್ಪಂದಿಸಬಲ್ಲ. ಆಗ ಅಸಮಾನ ವ್ಯವಸ್ಥೆಯೊಂದರಲ್ಲಿ ಮೇಲು ಜಾತಿಯ ಮೇಲು ವರ್ಗಗಳವರ ಶ್ರದ್ಧೆಯ ಮಿತಿ, ಮಠದ ಮಿತಿ, ಅನುಭವದ ಮಿತಿ, ವ್ಯಕ್ತಿಗಳ ಸಾತ್ವಿಕತೆಯ ಮಿತಿ ಗೊತ್ತಾಗುತ್ತದೆ.’ಇದೊಂದು ಆರೋಗ್ಯಪೂರ್ಣವಾದ ನಿಲುವು. ಅವರ ಇತ್ತೀಚಿಗಿನ ಲೇಖನಗಳನ್ನು ಮಠದ ಬಗ್ಗೆ ನಿರ್ದಾಕ್ಷಿಣ್ಯವಾಗಿ ಬರೆದು ಬಲಪಂಥೀಯರ ಕೆಂಡದ ಕಣ್ಣುಗಳನ್ನು ಎದುರಿಸಬೇಕಾಗಿ ಬಂದದ್ದು; ತನ್ನ ಈ ನಿಲುವಿನಿಂದ. ಆದರೆ ಪ್ರಗತಿಪರ ಚಿಂತಕರೂ , ರಾಜಶೇಖರ್ ಅಗತ್ಯಕ್ಕಿಂತ ಹೆಚ್ಚು ಪ್ರತಿಕ್ರಯಿಸುತ್ತಿದ್ದಾರೋ ಏನೋ’ – ಎನ್ನುವ ಅನುಮಾನವನ್ನು ವ್ಯಕ್ತಪಡಿಸಿದ್ದು ಅವರು ಮತ್ತೆ ಮತ್ತೆ ತಮ್ಮ ಒಟ್ಟು ಧೋರಣೆಗಳನ್ನು ಒಂದರ ಹಿಂದೆ ಇನ್ನೊಂದು ಲೇಖನಗಳಲ್ಲಿ ಸ್ಪಷ್ಟವಾಗಿ ಮತ್ತೂ ಸ್ಪಷ್ಟವಾಗಿ ಹೇಳ ಹೋದದ್ದರಿಂದ. ರಾಜಶೇಖರ್ ಗೆ ಸತ್ಯವನ್ನು ತಿಳಿ ಹೇಳುವ ಸೌಜನ್ಯವಿದೆ, ಬರಹಗಳನ್ನು ಕೆಚ್ಚೆದೆಯಿಂದ ಬರೆದು ಪ್ರಕಟಿಸುವ ಧೈರ್ಯವಿದೆ. ಅಂತೆಯೇ ನಿದ್ದೆ ಬಂದಂತೆ ನಟಿಸುವವರನ್ನು ಕೆಣಕಿ ಎಬ್ಬಿಸಿ ಮಾತಿನಲ್ಲಿ ಗುದ್ದಾಡುವ ಛಲವಿದೆ.

_DSC7787 (1280x854)divderspaಚಿತ್ತಾಲರ ಕೊನೆಯ ಪದ್ಯಗಳು :(ರುಜುವಾತು ೨೭)

ಚಿತ್ತಾಲರ ಕವನಗಳ ಬಗ್ಗೆ ಬಂದ ವಿಮರ್ಶೆಗಳು ವಿರಳ; ಬಂದವುಗಳಲ್ಲಿಯೂ ಬೌದ್ದಿಕ ಕಸರತ್ತು ಬಹಳ. ಅವರ ಅಂತಃಸತ್ವವನ್ನು ಮುಟ್ಟಲು ಯತ್ನಿಸಿದವು ಇಲ್ಲವೆಂದೇ ಅನ್ನಬೇಕು. ಗುಣವಾಗದ ರೋಗವೊಂದರಿಂದ ಕಾಡಿಸಿಕೊಂಡು ದಾರುಣವಾಗಿ ನರಳುತ್ತಿದ್ದ ಚಿತ್ತಾಲರ ಎಡಪಂಥೀಯ ಒಲವು** ಅವರ ದ್ವಂದ್ವಗಳು, ಅವರ ಸವಾಲುಗಳು, ಎಲ್ಲವನ್ನೂ ವಿಶಿಷ್ಟವಾದ ರೀತಿಯಲ್ಲಿ ಸೆರೆಹಿಡಿ** ರಾಜಶೇಖರ್ ಬರಹ ; ಒಂದು ಆಪ್ತ ಗ್ರಹಿಕೆ.

‘…ಚಿತ್ತಾಲರ ಪದ್ಯಗಳು ಅನುಭವವನ್ನು ಹಸಿಹಸಿಯಾಗಿ ಹೇಳುವುದಿಲ್ಲ; ಬದಲು ನೆನಪಿನಲ್ಲಿ ಮೂಡಿದ ಅನುಭವವನ್ನು ಧೇನಿಸುತ್ತದೆ.’ – ಗಂಗಾಧರ ಚಿತ್ತಾಲರ ಒಟ್ಟು ಒಟ್ಟು ಬರಹಕ್ಕೆ ಮುನ್ನುಡಿಯಂತಿದೆ.

ಚಿತ್ತಾಲರ ಕಡೆಯ ಪದ್ಯಗಳಲ್ಲಿ ದೇವರ ಭರವಸೆಯಿಲ್ಲ. ಅದಕ್ಕಿಂತ ಮುಖ್ಯವಾದ ಸಂಗತಿ ಎಂದರೆ ಈ ಪದ್ಯಗಳಲ್ಲಿ ಸಮಾಜವೂ ಇಲ್ಲ. ಚಿತ್ತಾಲರು ಶಬ್ದಗಳನ್ನು ಅವುಗಳ ಪ್ರಾಥಮಿಕ ಅರ್ಥಕ್ಕೋಸ್ಕರ ಮಾತ್ರ ಉಪಯೋಗಿಸುತ್ತಾರೆ. ಬಳಕೆ ಮತ್ತು ಸಂಪ್ರದಾಯದಿಂದ ಶಬ್ದಗಳು ಪಡೆಯುವ ಧ್ವನಿಯನ್ನು ಅವರು ಉದ್ದೇಶಪಟ್ಟು ದೂರವಿರಿಸುತ್ತಾರೆ. ಮಾತಿನ ಶಕ್ತಿಯಲ್ಲೇ ವಿಶ್ವಾಸ ಕಳೆದುಕೊಂಡು ಹತಾಶರಾದ ಕವಿ – ಅವರು. ಆದರೆ ಕವಿಯ ಕಷ್ಟವೆಂದರೆ ಮಾತು ನಿರರ್ಥಕವೆನಿಸಿದಾಗಲೂ ಅದನ್ನು ಬಿಟ್ಟು ಬೇರೆ ಗತಿ ಇಲ್ಲದಿರುವುದು. ತನ್ನ ನೋವನ್ನು ಮಾತುಗಳಲ್ಲಿ ಸಮರ್ಥವಾಗಿ ಬಣ್ಣಿಸುವ ಪ್ರಯತ್ನ ವ್ಯರ್ಥವೆಂದು ಗೊತ್ತಿದ್ದರೂ

ಚಿತ್ತಾಲರು ಮತ್ತೆ ಮತ್ತೆ ಶಬ್ದಗಳ ಮೊರೆ ಹೋಗುತ್ತಾರೆ.

ಮುಂದೆ ರಾಜಶೇಖರ್ ಒಂದು ಗಂಭೀರವಾದ ಸಮಸ್ಯೆಯನ್ನು ಎತ್ತಿಕೊಂಡು ವಿಮರ್ಶೆಯಲ್ಲೇ ಒಂದು ಹೊಸ ಮಜಲನ್ನು ತಡವುತ್ತಾರೆ.

‘ಪ್ರತ್ಯಕ್ಷ ಎನಿಸುವಷ್ಟು ನಿಖರ ಅನುಭವ ಗೋಚರವಾದದ್ದಕ್ಕೆ ಚಹರೆಯೇ ಇಲ್ಲದಿರುವುದು ಚಿತ್ತಾಲರ ನಿಜವಾದ ಸಮಸ್ಯೆ. ಆದರೆ ಚಿತ್ತಾಲರು ಈ ಸಮಸ್ಯೆಯನ್ನು ಬಗೆಹರಿಸಲು ಸುಲಭದ ಉಪಾಯಗಳನ್ನು ಬಳಸುವುದಿಲ್ಲ ತನ್ನ ತಾತ್ವಿಕತೆ ಮತ್ತು ತನ್ನ ಕಾವ್ಯದ ಭಾಷೆ ಎರಡರಲ್ಲೂ ಚಿತ್ತಾಲರು ಯಾವ ನಂಬಿಕೆಯ ಊರುಗೋಲೂ ಇಲ್ಲದ ಅಪ್ಪಟ ನಾಸ್ತಿಕರು. ದೇವರಲ್ಲಿ ನಂಬಿಕೆ ಇಟ್ಟವನಿಗೆ ವ್ಯಕ್ತಪಡಿಸಲು ಭಾಷೆ ಸಿದ್ಧವಾಗಿದೆ. ಭಾಷೆ ಕೈಕೊಡುವುದು ನಾಸ್ತಿಕನಿಗೆ ಮಾತ್ರ. ಧರ್ಮ, ಸಂಸ್ಕೃತಿ ಮತ್ತು ಭಾಷೆಯ ಆಸರೆ ಚಿತ್ತಾಲರ ಪಾಲಿಗೆ ಇಲ್ಲ’-ಎನ್ನುವ ಅಭಿಪ್ರಾಯಕ್ಕೆ ಬರುತ್ತಾರೆ.

ಮನುಷ್ಯ ಬುದ್ಧಿಯಿದ್ದ ಪ್ರಾಣಿ. ಬುದ್ಧಿ ಸಮಸ್ಯೆಗಳನ್ನು ಲೀಲಾಜಾಲವಾಗಿ ಬಿಡಿಸುವುದೇನೋ ನಿಜ; ಆದರೆ ಅದೇ ಬುದ್ಧಿ ಅನಾಯಾಸವಾಗಿ ನಿಷ್ಠುರ ಸಮಸ್ಯೆಗಳನ್ನು ನಿರ್ಮಿಸಲೂಬಹುದು – ಅಲ್ಲವೇ?

divderspa

divderspa
ರಾಜಶೇಖರ್ ಬರಹಗಳಿಗೆ ಶಿಖರಪ್ರಾಯವಾಗಿ ಇತ್ತೀಚೆಗೆ ಬಿಡುಗಡೆಗೊಂಡ ‘ಕೋಮುವಾದದ ರಾಜಕೀಯ’-ಮಹಾ ಪ್ರಬಂಧವಿದೆ. ‘ಇಸಂ’ಗಳ ಹಂಗಿನಿಂದ ಮುಕ್ತವಾಗಿ ಬರೆದ ಒಂದು ಮೌಲಿಕವಾದ ದೀರ್ಘ ಲೇಖನವಿದು.

ರಾಜಶೇಖರ್ ಸೈದ್ಧಾಂತಿಕ ತಳಹದಿಯಲ್ಲಿ ಬರೆದ ತಮ್ಮೆಲ್ಲಾ ಹಿಂದಿನ ಬರಹಗಳನ್ನು disown ಮಾಡಿದ ನಂತರ ಕೆಲಕಾಲ ಮೌನವಾಗಿದ್ದರು. ಆದರೆ ಒಬ್ಬ ಬೌದ್ಧಿಕನಿಗೆ ಮೌನವೂ ಸಹಿಸಲಾರದ ಹೊರೆಯಾಗುತ್ತದೆ. ಎದುರು ಜ್ವಲಂತ ಸಮಸ್ಯೆ ಇರುವಾಗ ಸುಮ್ಮನಿರುವುದೆಂದರೆ ಅದಕ್ಕೆ ಅಪರೋಕ್ಷವಾಗಿ ತನ್ನ ಸಮ್ಮತಿಯೂ ಇದೆ – ಎಂದು ಗಾಢವಾಗಿ ಕಾಡಲಾರಂಭಿಸುತ್ತದೆ. ಒಂದು ಸೆಕ್ಯುಲರ್ ದೇಶದಲ್ಲಿ ಬದುಕುವ ಧೀಮಂತನಿಗೆ ಕೋಮುವಾದ ನುಂಗಲಾರದ ತುತ್ತಾಗುತ್ತದೆ.

ರಾಜಶೇಖರ್ ತನ್ನಿಬ್ಬರು ಗೆಳೆಯರೊಂದಿಗೆ ಕೂಡಿಕೊಂಡು ಒಂದು ಸೂಕ್ಷ್ಮವಾದ, ಆದರೆ ಅತ್ಯಂತ ಜರೂರಿನ ‘ಕೋಮುವಾದ’ದ ಸಮಸ್ಯೆಯನ್ನು ಕೈಗೆತ್ತಿಕೊಂಡಿದ್ದಾರೆ. ಸುರತ್ಕಲ್ ಗಲಭೆಗಳ ನಂತರ ರಾಜಶೇಖರ್ ತಮ್ಮ ಗೆಳೆಯರೊಂದಿಗೆ ಸಾಕಷ್ಟು ಓಡಿಯಾಡಿ ಮಾಹಿತಿ ಸಂಗ್ರಹಿಸಿ, ಜನರನ್ನು, ಸಂತ್ರಸ್ತರನ್ನು ಭೇಟಿಯಾಗಿ ಸಂದರ್ಶಿಸಿ ಸಿದ್ದಪಡಿಸಿದ ದೀರ್ಘ ಲೇಖನವಿದು. ವ್ಯಾಪ್ತಿ, ಆಳ – ವಿಸ್ತಾರಗಳಲ್ಲಿ ಅವರ ಈವರೆಗಿನ ಲೇಖನಗಳ ಅಡಕವನ್ನು ಹೊತ್ತುಕೊಂಡ ಈ ಬರಹ ಒಂದು ಸ್ವಸ್ಥ ಸಮಾಜ ವಹಿಸಲೇಬೇಕಾದ ಜವಾಬ್ದಾರಿಯನ್ನು ನೆನಪಿಸುತ್ತದೆ.

raj4ಬಹುಶಃ ನಮ್ಮ ಬುದ್ಧಿಜೀವಿಗಳಲ್ಲಿ ಕೋಮುವಾದ, ಅದರ ಹಿನ್ನೆಲೆ, ಅದು ಒಳಗೊಳ್ಳುವ ರಾಜಕೀಯ – ಇವುಗಳ ಬಗ್ಗೆ ರಾಜಶೇಖರ್‌ನಷ್ಟು ಆಳವಾಗಿ ಅಧ್ಯಯಿಸಿದವರು, ಮತ್ತು ನಿರ್ಭೀಡೆಯಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದವರು ಯಾರೂ ಇಲ್ಲವೆಂದೇ ಹೇಳಬಹುದು.

ಲಂಕೇಶ್ ಪತ್ರಿಕೆ ಮತ್ತು ಇತರ ನಿಯತಕಾಲಿಕಗಳಲ್ಲಿ ಆಗಾಗ್ಗೆ ಪ್ರಕಟಗೊಳ್ಳುತ್ತಿರುವ ರಾಜಶೇಖರ್ ಬರಹಗಳು, ಅವರ ಎದುರಾಳಿಗಳನ್ನು, ಅರ್ಥಾತ್ ಕೋಮುವಾದಿಗಳನ್ನು ಎಷ್ಟು ಬಲವಾಗಿ ಕಾಡಿದೆಯೆಂದರೆ ‘ರಾಜಶೇಖರ್ ಮುಸ್ಲಿಂವಾದಿ, ಒಬ್ಬ ಮುಸ್ಲಿಂ ಮುಲ್ಲಾ, ತಾಲಿಬಾನ್ ಪ್ರತಿಪಾದಿ – ಅವರ ಹೆಸರು ರಾಜಾಶೇಖ್’ – ಇತ್ಯಾದಿ ನಾಮಧೇಯ, ಬಿರುದು ಬಾವಲಿಗಳಿಂದ ಪುರಸ್ಕರಿಸುವವರೆಗೂ ಸಾಗಿದೆ. ಇದಕ್ಕೆ ಪೂರಕವಾಗಿ, ಅವರು ಜಮಾತ್-ಏ-ಇಸ್ಲಾಂನಂತಹ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳ ಆಶ್ರಯದಲ್ಲಿ ವಕ್ತಾರರಾಗಿ ಕೊಡುವ ಹೇಳಿಕೆಗಳೂ ಕಾರಣವಾಗಿರಬಹುದು. (ಇಂತಹ ಮೂಲಭೂತವಾದೀ ಸಂಘಟನೆಗಳಲ್ಲಿ ರಾಜಶೇಖರ್ – ಮಾತನಾಡುವುದು, ಎಡಪಂಥೀಯರಿಗೂ ಇರುಸು ಮುರುಸು ತಂದಿದೆ ಎನ್ನುವುದು ನಿಜ.)

ರಾಜಶೇಖರ್‌ರನ್ನು ತರ್ಕದಲ್ಲಿ ನೇರವಾಗಿ ಎದುರಿಸಲಾರದ ಎದುರಾಳಿಗಳು ಈ ಸ್ಥಿತಿಗೆ ತಲುಪುವುದು ವಿಶೇಷವೇನೂ ಅಲ್ಲ; ಅದೂ ಅಲ್ಲದೆ ಇತ್ತೀಚೆಗೆ ಅವರನ್ನು ಹಿಂಸೆಯಿಂದ ಎದುರಿಸುವ ಹುನ್ನಾರ ನಡೆಯುವುದೂ ವಿಚಿತ್ರ ಎನ್ನಿಸುವುದಿಲ್ಲ. ಅಂದರೆ ತಾರ್ಕಿಕವಾಗಿ ಎದುರಿಸಲಾರದ ಸಮಸ್ಯೆಗಳನ್ನು ಹೇಡಿಗಳು ಕ್ರೂರವಾಗಿ ಹತ್ತಿಕ್ಕಲು ಯತ್ನಿಸುವುದು ಒಂದು ಐತಿಹಾಸಿಕ ವಾಸ್ತವಿಕತೆ.

‘ಒಬ್ಬ ಧೀಮಂತ ನಿಜವಾದ ಅರ್ಥದಲ್ಲಿ ‘ಸೆಕ್ಯುಲರ್’ ಚಿಂತಕ ಎಂದನ್ನಿಸಿಕೊಳ್ಳಬೇಕಾದರೆ ಆತ ಯಾವ ಮಟ್ಟದಲ್ಲೂ ರಾಷ್ಟ್ರ, ಮತ, ಆಳುವ ಪ್ರಭೃತಿಗಳಿಗೆ ಅಡಿಯಾಳು ಆಗಿರಬಾರದು’- ಇದು ಎಡ್ವರ್ಡ್ ಸೈದನ ನಿಲುವು. ರಾಜಶೇಖರ್ ಇದಕ್ಕೆ ಹೊರತಲ್ಲ.

ರಾಜಶೇಖರ್ ‘ಕೋಮುವಾದ’ ಮತ್ತು ‘ಮೂಲಭೂತವಾದ’ – ಪದಗಳ ಅರ್ಥವ್ಯಾಪ್ತಿಯನ್ನು ವಿವರಿಸಿಯೇ ತಮ್ಮ ಪ್ರಬಂಧವನ್ನು ಆರಂಭಿಸುತ್ತಾರೆ. ಪ್ರಾಯಶಃ ಇದು ಲಂಕೇಶ್ ಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ಅವರ ಲೇಖನಗಳನ್ನು ಓದದ, ಓದುಗರಿಗೆ ಸಹಾಯಕವಾಗಲಿ ಎಂದಿರಬಹುದು. (ಒಂದು ದೀರ್ಘ ಪ್ರಬಂಧ, ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿರುವ ವೇಳೆಯಲ್ಲಿ ಇದು ಅಗತ್ಯ ಕೂಡಾ)

‘ಕೋಮುವಾದದ ತತ್ವ ಮತ್ತು ತಂತ್ರಗಳನ್ನು ಅರ್ಥಮಾಡಿಕೊಳ್ಳದೆ ಅದನ್ನು ಎದುರಿಸುವುದು ಸಾಧ್ಯವಿಲ್ಲ. ಕೋಮುವಾದದ ಬಗ್ಗೆ ಬಂದಿರುವ ಅನೇಕ ಬರಹಗಳಲ್ಲಿ ಕೋಮುವಾದ ಮತ್ತು ಮೂಲಭೂತವಾದ – ಎಂಬ ನುಡಿಕಟ್ಟುಗಳನ್ನು ಸಲೀಸಾಗಿ ಒಂದರ ಬದಲು ಇನ್ನೊಂದನ್ನು ಬಳಸುವುದನ್ನು ಕಾಣುತ್ತೇವೆ. ರಾಜಕೀಯ ಅಧಿಕಾರಕ್ಕಾಗಿ ಒಂದು ಧರ್ಮದ ಅನುಯಾಯಿಗಳನ್ನು ಇನ್ನೊಂದು ಧರ್ಮದವರ ವಿರುದ್ಧ ಎತ್ತಿಕಟ್ಟುವುದು ಮತ್ತು ಬಹುಸಂಖ್ಯಾತರ ಸಂಸ್ಕೃತಿಗೆ ಅಲ್ಪಸಂಖ್ಯಾತರು ಹೊರಗಿನವರು ಎಂದು ವಾದಿಸಿ ಅವರ ಬಗ್ಗೆ ದ್ವೇಷ, ತಿರಸ್ಕಾರಗಳನ್ನು ಬೆಳೆಯಿಸುವುದು ಕೋಮುವಾದ. ತನ್ನ ಧರ್ಮದ ಕಟ್ಟುಪಾಡುಗಳಿಗೆ ಮತ್ತು ಪವಿತ್ರ ಗ್ರಂಥಗಳಿಗೆ, ಆ ಧರ್ಮಕ್ಕೆ ಸೇರಿದ ಪ್ರತಿಯೊಬ್ಬನೂ ತಲೆಬಾಗಬೇಕು ಎಂದು ಒತ್ತಾಯಿಸುವುದು – ಮೂಲಭೂತವಾಗಿದೆ.

GR6ಕೋಮುವಾದ ಒಂದು ಆಧುನಿಕ ರಾಜಕೀಯ ಸಿದ್ಧಾಂತ. ಅದು ಪ್ರಭುತ್ವವನ್ನು ವಶಪಡಿಸಿಕೊಳ್ಳುವ ಒಂದು ತಂತ್ರ. ಅದಕ್ಕೂ ಧರ್ಮಕ್ಕೂ ಇರುವ ಸಂಬಂಧ ನೆಪ ಮಾತ್ರ. ಜನರನ್ನು ಧರ್ಮದ ಹೆಸರಿನಲ್ಲಿ ಒಟ್ಟುಗೂಡಿಸಿ ಇನ್ನೊಂದು ಧರ್ಮದವರ ವಿರುದ್ಧ ಎತ್ತಿಕಟ್ಟುವ ಮತೀಯವಾದಿಗಳಿಗೆ, ಹಸಿವು, ಬಡತನ, divderspaಅಸಮಾನತೆಗಳ ಆಧಾರದಲ್ಲಿ ಜನರನ್ನು ಒಟ್ಟುಗೂಡಿಸುವ ರಾಜಕೀಯ ಎಂತಹ ಪ್ರಳಯಾಂತಕ ಶಕ್ತಿ ಆಗಬಲ್ಲುದು ಎಂಬುದರ ಸರಿಯಾದ ಕಲ್ಪನೆ ಇದೆ. ಹಾಗಾಗಿ ಕಮ್ಯುನಿಸ್ಟರು, ಎಡಪಂಥೀಯರು, ಸಮಾಜವಾದಿಗಳು ಎಂದರೆ ಇವರಿಗೆ ದುಃಸ್ವಪ್ನ. ಅನಂತರ ದಲಿತರ ಹಕ್ಕುಗಳಿಗಾಗಿ ಹೋರಾಡುವವರು, ಪರಂಪರಾಗತ ಆಚರಣೆಗಳನ್ನು ಪ್ರಶ್ನಿಸುವ ವಿಚಾರವಾದಿಗಳು, ರಾಜಕಾರಣದಿಂದ ಧರ್ಮವನ್ನು ಹೊರಗಿಡಬೇಕು ಎನ್ನುವ ಸೆಕ್ಯೂಲರಿಸ್ಟರು, ಹೆಂಗಸರ ಹಕ್ಕುಗಳಿಗಾಗಿ ಹೋರಾಡುವವರು, ತಮ್ಮ ಅಭಿಪ್ರಾಯಗಳನ್ನು ಒಲ್ಲದ ಬುದ್ಧಿಜೀವಿಗಳು ಮತ್ತು ಕಲಾವಿದರು, ಯುದ್ಧಗಳನ್ನು ವಿರೋಧಿಸುವವರು, ಅಣುಬಾಂಬುಗಳನ್ನು ಖಂಡಿಸುವವರು ಮತ್ತು ಈ ದೇಶದ ಪ್ರಜೆಗಳಲ್ಲಿ ಹಿಂದುಗಳಲ್ಲದವರು… ಇವರೆಲ್ಲ ಶತ್ರುಗಳು ಮತ್ತು ದೇಶದ್ರೋಹಿಗಳು.

ರಾಜಶೇಖರ್ ಮಹಾ ಚಿಕಿತ್ಸಕ ಬುದ್ಧಿಯ ಮೇಧಾವಿ. ಹಾಗಾಗಿ ಯಾವ ಸೂಕ್ಷ್ಮಗಳೂ, ಒಳಸುಳಿಗಳೂ ಪಕ್ಕನೆ ಅವರ ಕಣ್ಣು ತಪ್ಪಿಸುವಂತಿಲ್ಲ. ಮೇಲಿನ ಪಟ್ಟಿಯನ್ನೇ ಗಮನಿಸಿ. ಸಂಘ ಪರಿವಾರ ಒಳಗೊಳ್ಳದ ಎಲ್ಲಾ ಕೂಟಗಳನ್ನು ಒಟ್ಟುಗೂಡಿಸಿದರೆ ಸಂಘ ತನ್ನ ಅಭದ್ರ ನೆಲೆಯ ಬಗ್ಗೆ ಗಾಬರಿಯಾದೀತು. ಆದರೆ ಸಂಘ ಪರಿವಾರಕ್ಕೆ ಇದೂ ತಿಳಿದಿದೆ. ಹೂ ಮಾರುವವನ ‘ಹೂ ಬೇಕೇ ಹೂ’ ಚಿಕ್ಕ ಗಂಟಲಿನ ಹಿಂದೆಯೇ ಮೀನು ಮಾರುವವಳ ‘ಮೀನು ಬೇಕೆ ಮೀನು’ ದೊಡ್ಡ ಗಂಟಲು ಹೊರಟರೆ – ಮೆಲುಧ್ವನಿಗಳು ಅಡಗಿ ಹೋಗುತ್ತವೆ. ಮತ್ತೆ ಎಲ್ಲ ಸರಿಯಾಗುತ್ತದೆ. ಅಧಿಕಾರ ಮತ್ತು ಆರ್ಥಿಕ ಬಲದಿಂದ ಏನನ್ನೂ ಸಾಧಿಸಬಹುದು, ಇಲ್ಲದ್ದನ್ನು ಸೃಷ್ಟಿಸಬಹುದು.

‘ಜರ್ಮನಿಯ ನಾಝಿಗಳು ಯಹೂದಿಗಳನ್ನು ದ್ವೇಷಿಸಿದಂತೆಯೇ, ಸಂಘ ಪರಿವಾರದವರು ಭಾರತದ ಮುಸ್ಲಿಮರನ್ನು ಮತ್ತು ಕ್ರಿಶ್ಚಿಯನ್ನರನ್ನು ದ್ವೇಷಿಸುತ್ತಾರೆ. ಇಟಲಿಯ ಫ್ಯಾಸಿಸ್ಟರ ಹಾಗೆ ಕಮ್ಯುನಿಸ್ಟರು ಮತ್ತು ಸಮಾಜವಾದಿಗಳನ್ನು ದೇಶದ್ರೋಹಿಗಳು ಎಂದು ಪರಿಗಣಿಸುತ್ತಾರೆ. ನಾಝಿಗಳು ಮತ್ತು ಫ್ಯಾಸಿಸ್ಟರ ಹಾಗೆ ಸಂಘ ಪರಿವಾರದವರೂ ಬಲಿಷ್ಠ ಸರಕಾರ, ಬಲಿಷ್ಠ ಸೈನ್ಯ, ಕೇಂದ್ರೀಕೃತ ಅಧಿಕಾರ ಹಾಗೂ ಸಾಮಾನ್ಯ ಪ್ರಜೆಗಳಲ್ಲಿ ಶಿಸ್ಟು ಮತ್ತು ವಿಧೇಯತೆಯ ಮೌಲ್ಯಗಳನ್ನು ಪ್ರತಿಪಾದಿಸುತ್ತಾರೆ.

ಇದರ ಅರ್ಥ – ಹಿಂದೆ ಯುದ್ಧ ಮಾಡುವ ಸೈನಿಕರಿಗೆ ತಾವು ಯಾರೊಂದಿಗೆ, ಯಾಕಾಗಿ ಹೋರಾಡುತ್ತೇವೆ ಎನ್ನುವ ಕಾರಣ ತಿಳಿದಿತ್ತು. ಈಗ ಅದು ತಿಳಿದಿರುವುದಿಲ್ಲ. ಮಾತ್ರವಲ್ಲ, ಮತ್ತೂ ಭಯಾನಕವಾಗಿ ತಿಳಿಯಬೇಕೆಂಬ ಇಚ್ಛೆಯೇ ಇರುವುದಿಲ್ಲ. ಈ ಸ್ಥಿತಿಯನ್ನು ಎರಡೂ ಕೈಗಳಲ್ಲಿ ಬರಮಾಡಿಕೊಳ್ಳುವ ಬಲಪಂಥೀಯರನ್ನು ರಾಜಶೇಖರ್ ನೇರವಾಗಿ ತರಾಟೆಗೆ ತೆಗೊಳ್ಳುತ್ತಾರೆ.

ಮ್ಮ ಚರಿತ್ರೆಯಲ್ಲಿ ಹಿಂದೂ, ಮುಸ್ಲಿಂ, ಬ್ರಿಟಿಷ್ ಎಂದು ವರ್ಗೀಕರಿಸಿದವರು – ವಸಾಹತುಶಾಹೀ ಚರಿತ್ರೆಕಾರರು. ವಾಸ್ತವವಾಗಿ ಹಿಂದೂ ರಾಜರ ಕಾಲ ಎಂದು ಗುರುತಿಸಲಾಗುವ ಕಾಲದಲ್ಲಿ ದೇಶದ ಅನೇಕ ಕಡೆ ಹಿಂದೂಯೇತರ ಪ್ರಭುತ್ವಗಳಿದ್ದುವು. ಹಿಂದೂ ಧರ್ಮಕ್ಕೆ ತೀವ್ರ ಪ್ರತಿರೋಧ ಒಡ್ಡಿದ ವೈಚಾರಿಕ ಚಳುವಳಿಗಳೂ ನಡೆದಿದ್ದುವು. ಮುಸ್ಲಿಮರ ಆಳ್ವಿಕೆಯ ಕಾಲ ಎಂದು ಈ ವಸಾಹತುಶಾಹೀ ಚರಿತ್ರಕಾರರು ಹಣೆಪಟ್ಟಿ ಹಚ್ಚಿದ ಕಾಲದಲ್ಲಿ, ದೇಶದ ಅನೇಕ ಕಡೆ ಹಿಂದೂ ರಾಜರ ಆಳ್ವಿಕೆಯೇ ಇತ್ತು. ಅಲ್ಲದೆ, ಮುಸ್ಲಿಂ ಅರಸರೇ ಪರಸ್ಪರ ಕಚ್ಚಾಡಿಕೊಂಡದ್ದೂ ಇದೆ. ಬ್ರಿಟಿಷರು ಈ ದೇಶದಲ್ಲಿ ತಮ್ಮ ಅಧಿಕಾರವನ್ನು ಭದ್ರಪಡಿಸುವವರೆಗೆ, ಇಲ್ಲಿ ಯಾವುದೇ ಕಾಲದಲ್ಲೇ ಆಗಲೀ ಒಂದು ಏಕೀಕೃತ ರಾಷ್ಟ್ರವಾಗಲೀ ಪ್ರಭುತ್ವವಾಗಲೀ ಇರಲೇ ಇಲ್ಲ.

ಇದೊಂದು ಮಹತ್ವದ ಚಾರಿತ್ರಿಕ ದೃಷ್ಟಿಕೋನ. ಬಹುಶಃ ‘ಕಣ್ಣಿದ್ದೂ ಕುರುಡರು, ಕಿವಿಯಿದ್ದೂ ಕಿವುಡರು’ ಎನ್ನುವಂತಹ ತಿಳಿಗೇಡಿ ಜನರನ್ನು ಬಿಟ್ಟರೆ ಈ ಇತಿಹಾಸ ಹೇಳುವುದನ್ನು ಯಾರೂ ಅಲ್ಲಗಳೆಯಲಾರರು. ರಾಜಶೇಖರ್ ತಮ್ಮ ಪ್ರಬಂಧವನ್ನು ಮುಂದುವರಿಸಿ ‘ಆರ್.ಎಸ್.ಎಸ್., ಹಿಂದೂ ಧರ್ಮದ ಒಗ್ಗಟ್ಟಿನ ಪರಿಕಲ್ಪನೆಯನ್ನು ಎರವಲು ಪಡೆದದ್ದು ಕ್ರಿಶ್ಚಿಯನ್ ಮತ್ತು ಇಸ್ಲಾಂ ಹಾಗೂ ಯಹೂದಿ ಧರ್ಮಗಳಿಂದ’ – ಎಂದು ಸಕಾರಣವಾಗಿ ವಿವರಿಸಿ, ತನ್ನ ನಿಲುವನ್ನು ಸಮರ್ಥಿಸಿಕೊಳ್ಳುತ್ತಾರೆ.

GR5ಪ್ರಜಾಪ್ರಭುತವೆಂದರೆ ಬಹುಸಂಖ್ಯಾತರ ಇಚ್ಛೆಗೆ ಅನುಗುಣವಾಗಿ ಪ್ರಭುತ್ವವಲ್ಲ. ಅದು ಅಲ್ಪಸಂಖ್ಯಾತರು ಮತ್ತು ಭಿನ್ನಮತೀಯರು ತಮ್ಮ ನಂಬಿಕೆಗಳಿಗೆ ಬದ್ಧವಾಗಿದ್ದುಕೊಂಡೇ ಸಮಾನಹಕ್ಕು, ಅಧಿಕಾರಗಳನ್ನು ಹೊಂದಿರುವುದನ್ನು ಖಾತರಿ ಮಾಡುವಂತಹ ವ್ಯವಸ್ಥೆ. ಬಿ.ಜೆ.ಪಿ. ನಮ್ಮ ರಾಜಕೀಯದಲ್ಲಿ ಚಲಾವಣೆಗೆ ತಂದ ಹಿಂದು ಮತ್ತು ಹಿಂದುಯೇತರ ಎಂಬ ವಿಭಜನೆಯನ್ನು ಕಾಂಗ್ರೆಸ್ ಮಾತ್ರವಲ್ಲ, ಎಡಪಕ್ಷಗಳನ್ನು ಬಿಟ್ಟು ಇತರ ಪಕ್ಷಗಳೂ ಒಪ್ಪಿಕೊಂಡಿವೆ. ಹಾಗಾಗಿ ಮತೀಯವಾದವನ್ನು ಬಿಜೆಪಿಗೆ ಅಂಟಿಸಿ ಸುಮ್ಮನಿರುವುದಲ್ಲ. ನಮ್ಮ ಹೆಚ್ಚಿನ ಪತ್ರಿಕೆಗಳು, ಸರಕಾರೀ ಮತ್ತು ಸರಕಾರೇತರ ಸಂಸ್ಥೆಗಳು ಕೂಡಾ ಇದನ್ನು ಒಪ್ಪಿಕೊಂಡಿವೆ. ಮತೀಯವಾದವನ್ನು ಬಿಜೆಪಿ ಎಂಬ ರಾಜಕೀಯ ಪಕ್ಷ ಹುಟ್ಟಿಸಿದ ಸಮಸ್ಯೆ ಎಂದು ಗುರುತಿಸುವುದರ ಜೊತೆಗೆ – ಇದು ಬೇರೆ ಬೇರೆ ಪಕ್ಷಗಳಲ್ಲಿ ಬೇರೆ ಬೇರೆ ಪ್ರಮಾಣಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಒಂದು ಅರ್ಬುದ ರೋಗ – ಎಂದು ಗುರುತಿಸುವುದು ಕೂಡಾ ಅಗತ್ಯ’ ಎನ್ನುವ ಒಂಥರಾದಲ್ಲಿ ಧೀಮಂತರು ಹತಾಶರಾಗಬಹುದಾದ ಪ್ರಮೇಯವನ್ನು divderspaನಮ್ಮ ಮುಂದಿಡುತ್ತಾರೆ. ಬಹುಶಃ ಮುಂಬೈ ಗಲಭೆಗಳನ್ನು ಅಧ್ಯಯಿಸಿದವರಿಗೆ – ಅದರಲ್ಲಿ ಪಾಲ್ಗೊಂಡ ಸಂಘಟನೆಗಳು ಶಿವಸೇನೆ, ಬಿ.ಜೆ.ಪಿ. ಮಾತ್ರವಲ್ಲ, ಇತರ ಎಲ್ಲಾ ಪಕ್ಷಗಳ ಒಳಗುಂಪುಗಳೂ ಇದ್ದುವು – ಎನ್ನುವ ಕಳವಳಕಾರಿಯಾದ ಅಂಶ ನೆನಪಿಗೆ ಬರಬಹುದು.

ಸೆಕ್ಯುಲರಿಸಂ‘, ಪ್ರಜಾಪ್ರಭುತ್ವ ಮತ್ತು ಸಮಾನತೆಗಾಗಿ ಹೋರಾಟ’ – ಖ್ಯಾತ ಚಿಂತಕ ಐಜಾಜ್ ಅಹಮದ್ ಹೇಳುವ ಮಾತುಗಳನ್ನು ಮುಂದರಿಸಿ, ‘ಅಲ್ಪಸಂಖ್ಯಾತರ ಮೇಲೆ ನಡೆಯುವ ಹಲ್ಲೆಗಳು, ದಲಿತರ ಮೇಲೆ ನಡೆಯುವ ಹಿಂಸೆ, ಹೆಂಗಸರ ಮೇಲೆ ಅತ್ಯಾಚಾರ, ದೈತ ಕಾರ್ಮಿಕರ ಶೋಷಣೆ, ಶ್ರೀಮಂತರ ಸಂಪತ್ತು ಹೆಚ್ಹುತ್ತಿರುವ ವೇಳೆಯಲ್ಲಿ ಬಡವರು ತಮ್ಮ ಕೊನೆ ತುತ್ತನ್ನೂ ಕಳೆದುಕೊಳ್ಳುತ್ತಿರುವುದು, ಬಡವರ ಮಕ್ಕಳು ಶಿಕ್ಷಣವಿಲ್ಲದೆ, ಉದ್ಯೋಗವಿಲ್ಲದೆ ಭಿಕಾರಿಗಳಾಗುತ್ತಿರುವುದು ಇವೆಲ್ಲವೂ ಈ ನಾಡಿನಲ್ಲಿ ಒಟ್ಟೊಟ್ಟಿಗೆ ನಡೆಯುತ್ತಿದೆ. ಇದು ನಮ್ಮ ಪ್ರಸ್ತುತ ಸಾಮಾಜಿಕ ಬದುಕು. ಈ ಸಮಾಜ ಹಿಂಸೆಗೆ ಬೇರೆ ಬೇರೆ ಹೆಸರುಗಳನ್ನು ಕೊಡಬಹುದು. ಆದರೆ ಹಿಂಸೆ ಒಂದೇ. ಸಂದರ್ಭ ಮಾತ್ರ ಬೇರೆ ಬೇರೆ. ನಿಜಜೀವನದಲ್ಲಿ ಹಿಂಸೆ ಹೆಸರು ಹೊತ್ತು ಬರುವುದಿಲ್ಲ. ಅದು ನಮ್ಮ ಪ್ರಜ್ಞೆಗೆ ಆಘಾತವಾಗಿ, ಸವಾಲಾಗಿ ಬರುತ್ತದೆ. ವ್ಯವಸ್ತೆಯ ಈ ಅಗಾಧವೂ ಬಹುರೂಪಿಯೂ ಆದ ಹಿಂಸೆಗೆ, ನಾವು ತೋರಿಸುವ ಪ್ರತಿಕ್ರಿಯೆ, ನೈತಿಕವಾಗಬೇಕಾದರೆ ಅದು ರಾಜಕೀಯ ಎಚ್ಚರ ಮತ್ತು ಕ್ರಿಯಾಶೀಲತೆಗಳಿಂದ ಕೂಡಿದ್ದಾಗಿರಬೇಕು’ – ಎಂದು ಅದ್ಭುತವಾಗಿ ಪ್ರತಿಪಾದಿಸುತ್ತಾರೆ.

‘ಮತೀಯ ಸಾಮರಸ್ಯ ಅನ್ನುವುದು ಒಂದು ಸಹಜಕ್ರಿಯೆಯಾಗಬೇಕು’-ಎಂದು ವಾದಿಸುವ ರಾಜಶೇಖರ್, ‘ಶಿಶುನಾಳ ಶರೀಫರಂತಹವರು ಹಿಂದೂ ಮುಸ್ಲಿಂ ದೇವತೆಗಳ ಬಗ್ಗೆ ಲಾವಣಿ ಕಟ್ಟಿ ಹಾಡಿದ್ದನ್ನು, ಸಲೀಸಾಗಿ ಹಿಂದು ಮುಸ್ಲಿಂ ಪುರಾಣಗಳನ್ನು ರೂಪಕವಾಗಿ ಬಳಸಿದ್ದನ್ನು ಸಾಮರಸ್ಯದ ಚಿಹ್ನೆ ಎಂದು ಒಪ್ಪುವುದಿಲ್ಲ. ಹಿಂದು ಅನುಭಾವೀ ಕವಿಗಳು ಮುಸ್ಲಿಂ ದೇವರ ಬಗ್ಗೆ, ಸೂಫಿಗಳು ಹಿಂದು ದೇವರ ಬಗ್ಗೆ ಧೇನಿಸುವುದು, ಹಾಡುವುದು ಆ ಕಾಲದ ಸಹಜಕ್ರಿಯೆ. ಇದೇನು ವಿಶೇಷವಲ್ಲ, ಚರಿತ್ರೆಯ ಇನ್ನೊಂದು ಬಿಂದುವಿನಲ್ಲಿ ನಿಂತು ನಾವು ಯೋಚಿಸುವಾಗ ‘ಇದೇ ಮತೀಯ ಸಾಮರಸ್ಯ’ ಎನ್ನುವ ತಪ್ಪು ನಿರ್ಣಯಕ್ಕೆ ಬರಬಹುದು. ಪ್ರಾಯಶಃ ರಹಮತ ತರೀಕೆರೆಯವರು ಇದೇ ನಿಲುವನ್ನು ತಮ್ಮ ‘ ಕರ್ನಾಟಕದ ಸೂಫಿಗಳು’ ಪ್ರಬಂಧದಲ್ಲೂ ಎತ್ತಿಕೊಂಡಿದ್ದಾರೆ.

ಸುರತ್ಕಲ್ಲಿನ ಗಲಭೆಗಳ ಹಿನ್ನೆಲೆಯನ್ನು ಈ ತಾತ್ವಿಕ ನೆಲೆಯಲ್ಲಿ ವಿವೇಚಿಸುವ ರಾಜಶೇಖರ್ ಕೆಲವೊಮ್ಮೆ ಒಬ್ಬ ದೃಷ್ಟಾರನ ಸಂಯಮವನ್ನು ಪ್ರದರ್ಶಿಸುತ್ತಾರೆ. ಮತ್ತೊಮ್ಮೆ ರೊಚ್ಚಿಗೆದ್ದ ಸಿಡುಕರೂ ಆಗುತ್ತಾರೆ. ಅವರ ವ್ಯಂಗ್ಯದ ಮೊನಚು ಎಷ್ಟು ತೀವ್ರವಾಗಿರುತ್ತದೆ ಎಂದರೆ ಎದುರಾಳಿ ಒಂದೋ ಅವರ ನಿಲುವನ್ನು ಮೌನವಾಗಿ ಒಪ್ಪಿಕೊಳ್ಳಬೇಕು. ಇಲ್ಲವೇ ಅಲ್ಲಿಂದ ಜಾಗ ಖಾಲಿ ಮಾಡಬೇಕು. ಕೋಮುಗಲಭೆಗಳ ಬಗ್ಗೆ ವಸ್ತುನಿಷ್ಠ ಬರಹಗಳೇ ಇಲ್ಲದ ಸಮಯದಲ್ಲಿ ಈ ವರದಿ ಮತ್ತು ಪೂರಕವಾದ ಲೇಖನ ಬಹಳ ಬೆಲೆಯುಳ್ಳದ್ದು.

‘ಕೋಮುಗಲಭೆಗಳಂತಹ ದುರಂತದ ಬಗ್ಗೆ ನಾವು ವಹಿಸುವ ಮೌನ, ನಮ್ಮನ್ನು ಕೋಮುವಾದಿಗಳ ಮೂಕ ಸಹವರ್ತಿಗಳನ್ನಾಗಿ ಮಾಡಬಹುದು. ನಮ್ಮ ಕಾಲದ ದುರಂತಗಳಿಗೆ ಸಾಕ್ಷಿ ಹೇಳಲಾಗದ ನಮ್ಮ ನೈತಿಕ ದೌರ್ಬಲ್ಯ, ಮಾತ್ರವಲ್ಲ, ನಮ್ಮ ರಾಜಕೀಯ ನಿಲುವುಗಳಿಗೆ ನಿಜಜೀವನದ ಸಾಕ್ಷ್ಯಾಧಾರಗಳು ಇರಬೇಕು – ಎಂದು ಒತ್ತಾಯ ಮಾಡಲಾರದ ಭೌತಿಕ ದಾರಿದ್ರ್ಯ ಕೂಡಾ ನಮ್ಮ ಔದಾಸೀನಕ್ಕೆ ಕಾರಣ’ ಎಂದು ರಾಜಶೇಖರ್ ತಮ್ಮ ಪ್ರಬಂಧವನ್ನು ಔಚಿತ್ಯಪೂರ್ಣವಾದ ರೀತಿಯಲ್ಲಿ ಮುಗಿಸುತ್ತಾರೆ.

ಒಂದು ಸರಕಾರ ತನ್ನ ಸಕಲ ಕಬಂಧ ಬಾಹುಗಳೊಂದಿಗೆ, ಪ್ರತಿಷ್ಠೆ ಪತ್ರಿಕೆ ಮತ್ತಿತರ ಮಾಧ್ಯಮಗಳು ತಮ್ಮೆಲ್ಲಾ ಪರಿಕರಗಳೊಂದಿಗೆ, ಒಂದು ಸ್ವಾಯತ್ತ ಸಂಸ್ಥೆ ತನ್ನ ಸಮಸ್ತ ಸವಲತ್ತುಗಳೊಂದಿಗೆ ಕೋಮುವಾದದ ಹಿನ್ನೆಲೆ, ಅದರ ಆಂತರಿಕ ಶಕ್ತಿ, ಅದು ಪಡೆಯುವ ಭೀಭತ್ಸ ರೂಪವನ್ನು ತೃಪ್ತಿಕರವಾಗಿ ಬಯಲಿಗೆಳೆಯಲು ಅಸಮರ್ಥವಾದಾಗ, ಇಲ್ಲವೇ ಸುಳ್ಳು, ಅಥವಾ ಅರ್ಧ ಸತ್ಯ ಮಾಹಿತಿಗಳಲ್ಲೇ ತೃಪ್ತರಾದಾಗ, ರಾಜಶೇಖರ್ ಅಂತಹವರ ಅಧ್ಯಯನ, ಧ್ಯಾನ, ಅದಕ್ಕೊದಗಿಸಿದ ಧ್ವನಿ ನಿಜಕ್ಕೂ ಅರ್ಥಪೂರ್ಣ.

ಈ ಒಟ್ಟು ಸಂಶೋಧನಾತ್ಮಕ ಲೇಖನ, ಎರಿಕ ಫ್ರಾಮ್ ಅನ್ನುವ being modeನದ್ದು,  having modeನದ್ದಲ್ಲ, ಅಂದರೆ ತನ್ನ ಪಾಡನ್ನು ಸಂತ್ರಸ್ತರ ಪಾಡಿನೊಂದಿಗೆ ಸಮೀಕರಿಸಿಕೊಂಡದ್ದು. ಇನ್ನೊಂದರ್ಥದಲ್ಲಿ ‘ಹಿಟ್ಲರ್‌ಗೆ ನಾನು ಜವಾಬ್ದಾರ’ – ಎಂದ ಸಾರ್ತ್ರೆಯಂತೆ, ರಾಜಶೇಖರ್, ಸುರತ್ಕಲ್ ಗಲಭೆಗಳಿಗೆ ನಾನು ಜವಾಬ್ದಾರ’ – ಎನ್ನುವ ವಿಶಾಲವಾದ ಅರ್ಥದಲ್ಲಿ ಬರೆದದ್ದು. ಇದೇ ಒಬ್ಬ ಲೇಖಕ ತನ್ನ ಕಾಲಕ್ಕೆ ಪ್ರಸ್ತುತವಾಗಿದ್ದಾನೆ, ಜೀವಂತವಾಗಿದ್ದಾನೆ, ಎನ್ನುವುದರ ಲಕ್ಷಣವಲ್ಲವೇ?

ಮಾನವತೆಯದು ಸೂಕ್ಷ್ಮ ಧ್ಯಾನ, ಮತೀಯ ಸಾಮರಸ್ಯ ಎನ್ನುವುದು ಅತೀ ಕ್ಷೀಣ ಧ್ವನಿ. ಹಾಗಾಗಿ ಈ ಬಗ್ಗೆ ಸ್ಪಷ್ಟವಾಗಿ ಮತ್ತು ನಿಖರವಾಗಿ ಬರೆಯುವ ರಾಜಶೇಖರ್ ಅಂತಹವರ ಸೊಲ್ಲು ಉಡುಗಿಹೋಗಬಾರದು. ಇದು ತುರ್ತಾಗಿ ಮತ್ತು ಅನಿವಾರ್ಯವಾಗಿ ಆಗಲೇಬೇಕಾದ ಕೆಲಸ.

“ಅಡಿಗರ ಕಾವ್ಯದ ಮನೋಧರ್ಮ’ ಮತ್ತು ಲಂಕೇಶ್ ಪತ್ರಿಕೆ ಮತ್ತಿತರ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಲೇಖನಗಳು ರಾಜಶೇಖರ್ – ಅವರ ರಾಜಕೀಯ ದೃಷ್ಟಿಕೋನವನ್ನು ಬೆಳಕಿಗೆ ತರುವವುಗಳಾದರೂ, ಇಲ್ಲಿ ಪ್ರಸ್ತಾಪಿಸುವ ಗೋಜಿಗೆ ಹೋಗಿಲ್ಲ. ಈ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ. ವಿವಾದಗಳು ಹುಟ್ಟಿಕೊಂಡಿವೆ. ಅಂತೆಯೇ ಅವರ ಮೌಲಿಕ, ಬರಹಗಳಾದ ‘ಕಾಗೋಡು ಸತ್ಯಾಗ್ರಹ’, ‘ಬ್ರೆಕ್ಟ್ – ಒಂದು ಪರಿಚಯ’ ಮತ್ತು ಅನುವಾದಿತ ಕೃತಿಗಳಾದ ದಾರು ಪ್ರತಿಮಾ ನ ಪೂಜಯೇ, ‘ಪರಿಸರ ರಕ್ಷಣೆ ಮತ್ತು ಸಮಾಜವಾದ’ – ಇವುಗಳನ್ನು ಅನಿವಾರ್ಯವಾಗಿ ಇಲ್ಲಿ ಕೈಬಿಟ್ಟಿದ್ದೇನೆ. ಇದರಿಂದ ಅವು ಕಡಿಮೆ ಮಹತ್ವದವು ಎಂದು ಅರ್ಥವಲ್ಲ.

One comment to “ಕಡಲ ಗಾಳಿ ಘಾಟು , ಕೊಳಂಬೆ ನೀರ ಮೆದುವೂ..”

ಪ್ರತಿಕ್ರಿಯಿಸಿ