[ಜೀನ್ ಡ್ರೇಜ್ ನಮ್ಮ ನಡುವಿನ ಪ್ರಮುಖ ಅರ್ಥಶಾಸ್ತ್ರಜ್ಞರು. ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಗ್ರಾಮೀಣ ಉದ್ಯೋಗ ಖಾತರಿ ಮಾದರಿಯಲ್ಲಿ ಪಟ್ಟಣಗಳಲ್ಲೂ ಉದ್ಯೋಗ ಖಾತರಿ ಯೋಜನೆಯನ್ನು ತರಬೇಕೆಂದು ಒತ್ತಾಯಿಸುತ್ತಿರುವವರು. ಅದಕ್ಕಾಗಿ ‘ಡ್ಯುಯೆಟ್’ (DUET) ಎಂಬ ಯೋಜನೆಯನ್ನು ಮುಂದಿಟ್ಟಿದ್ದಾರೆ. ಅವರು ಸರ್ಕಾರ ಜಾರಿಗೊಳಿಸುತ್ತಿರುವ ‘ವಿಬಿ-ಜಿ ರಾಮ್-ಜಿ’ (VB-G RAM-G) ಮಸೂದೆಯನ್ನು ಕುರಿತಂತೆ ‘ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆಯಲ್ಲಿ ಬರೆದಿರುವ ಲೇಖನದ ಸಾರಾಂಶವಿದು. ಇಂದು ‘ಪ್ರಜಾವಾಣಿ’ಯಲ್ಲಿ ಶ್ರೀರಾಂ ಈ ಬಗ್ಗೆ ಒಂದು ಲೇಖನ ಬರೆದಿದ್ದಾರೆ. ಹಾಗೆಯೇ ಜೀವಿಯವರು ‘ವಾರ್ತಾಭಾರತಿ’ಯಲ್ಲಿ ಈ ಬಗ್ಗೆ ಒಂದು ಸರಣಿಯನ್ನು ಪ್ರಾರಂಭಿಸಿದ್ದಾರೆ. ಇದೊಂದು ಗಂಭೀರವಾದ ವಿಷಯ. ಈ ಬಗ್ಗೆ ಹೆಚ್ಚಿನ ಚರ್ಚೆಯಾಗಬೇಕು.]
ಇಪ್ಪತ್ತು ವರ್ಷಗಳ ಹಿಂದೆ, ಭಾರತವು ‘ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ’ಯನ್ನು (NREGA) ಜಾರಿಗೆ ತರುವ ಮೂಲಕ ಜಗತ್ತಿಗೆ ಮಾದರಿಯಾಗಿತ್ತು. ಉದ್ಯೋಗ ಖಾತರಿ ಕಲ್ಪನೆ ಸಂಪೂರ್ಣವಾಗಿ ಹೊಸದೇನಲ್ಲ. ಬಿಕ್ಕಟ್ಟಿನ ಸಮಯದಲ್ಲಿ ಪರಿಹಾರವಾಗಿ ಸಾರ್ವಜನಿಕ ಕಾಮಗಾರಿಗಳನ್ನು ಬಳಸುವ ಸುದೀರ್ಘ ಇತಿಹಾಸ ಭಾರತಕ್ಕಿದೆ. ಮಹಾರಾಷ್ಟ್ರವು ೧೯೭೦ರ ದಶಕದ ಆರಂಭದಿಂದಲೇ ತನ್ನ ಉದ್ಯೋಗ ಖಾತರಿ ಯೋಜನೆಯ ಮೂಲಕ ದಾರಿ ತೋರಿಸಿತ್ತು. ಆದರೆ ನರೇಗಾ ಈ ಕಲ್ಪನೆಯನ್ನು ಇನ್ನಷ್ಟು ವಿಸ್ತರಿಸಿತು ಮತ್ತು ಜಗತ್ತಿಗೆ ಸ್ಫೂರ್ತಿಯಾಯಿತು. ಇದು ಪಕ್ಷದ ಎಲ್ಲೆ ಮೀರಿ ಬೆಳೆದಿದ್ದ ರಾಷ್ಟ್ರೀಯ ಕಾರ್ಯಕ್ರಮವಾಗಿತ್ತು ಮತ್ತು ಸಂಸತ್ತಿನಲ್ಲಿ ಸರ್ವಾನುಮತದ ಬೆಂಬಲ ಪಡೆದಿತ್ತು.ಈ ಕಾರ್ಯಕ್ರಮವು ಉತ್ತಮವಾಗಿ ನಡೆಯುತ್ತಿತ್ತು ಎನ್ನುವುದಕ್ಕೆ ಆರು ವರ್ಷಗಳ ನಂತರ, ೨೦೧೧-೧೨ರಲ್ಲಿ ಪುರಾವೆಗಳೂ ಸಿಕ್ಕವು. ಆ ವೇಳೆಗೆ ‘ಮನರೇಗಾ’ (MGNREGA ಎಂದು ಮರುನಾಮಕರಣಗೊಂಡಿತ್ತು) ಅಧಿಕೃತವಾಗಿ ವರ್ಷಕ್ಕೆ ೫ ಕೋಟಿ ಗ್ರಾಮೀಣ ಕುಟುಂಬಗಳಿಗೆ ೨೦೦ ಕೋಟಿಗೂ ಹೆಚ್ಚು ಮಾನವ ದಿನಗಳ ಉದ್ಯೋಗವನ್ನು ಕೊಟ್ಟಿತ್ತು. ಉದ್ಯೋಗ ಪಡೆದುಕೊಂಡವರಲ್ಲಿ ಸುಮಾರು ಅರ್ಧದಷ್ಟು ಮಹಿಳೆಯರು ಮತ್ತು ಶೇಕಡ ೪೦ಕ್ಕಿಂತ ಹೆಚ್ಚು ಜನ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರು. ಈ ಅಧಿಕೃತ ಅಂಕಿಅಂಶಗಳನ್ನು ೬೮ನೇ ಸುತ್ತಿನ ರಾಷ್ಟ್ರೀಯ ಮಾದರಿ ಸಮೀಕ್ಷೆ ಮತ್ತು ಎರಡನೇ ಭಾರತೀಯ ಮಾನವ ಅಭಿವೃದ್ಧಿ ಸಮೀಕ್ಷೆಯಂತಹ ಸ್ವತಂತ್ರ ಸಮೀಕ್ಷೆಗಳು ಪುಷ್ಟೀಕರಿಸಿದ್ದವು. ಗ್ರಾಮೀಣ ವೇತನದಲ್ಲೂ ಹಿಂದೆಂದಿಗಿಂತ ಹೆಚ್ಚಿನ ಏರಿಕೆ ಕಾಣತೊಡಗಿತು. ಮನರೇಗಾ ಉತ್ಪಾದಕ ಕೆಲಸಗಳನ್ನು ಕಸಿದುಕೊಳ್ಳಲಿಲ್ಲ, ಬದಲಿಗೆ ಆರ್ಥಿಕ ದಕ್ಷತೆ ಮತ್ತು ಒಟ್ಟು ಉತ್ಪಾದಕತೆಯನ್ನು ಹೆಚ್ಚಿಸಿತು ಎಂಬುದನ್ನು ಹಲವು ಅಧ್ಯಯನಗಳು ತೋರಿಸಿಕೊಟ್ಟಿವೆ. ಮನರೇಗಾದ ಆರಂಭಿಕ ವರ್ಷಗಳಲ್ಲಿನ ಉತ್ಸಾಹ ಮತ್ತು ಹುರುಪಿನಿಂದ ಈ ಸಾಧನೆಗಳು ಸಾಧ್ಯವಾದವು.
ನಂತರದ ದಿನಗಳಲ್ಲಿ, ಅನುಷ್ಠಾನಕ್ಕೆ ಅಡೆತಡೆಗಳು ಪ್ರಾರಂಭವಾದವು. ಕೇಂದ್ರೀಕರಣ, ಅನುದಾನದ ಕೊರತೆ, ವೇತನ ಪಾವತಿಯಲ್ಲಿ ವಿಳಂಬ, ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿನ ವೈಫಲ್ಯ ಇತ್ಯಾದಿ ಕಾರಣಗಳು ಕಾರ್ಯಕ್ರಮಕ್ಕೆ ಅಪಾರ ಹಾನಿ ಮಾಡಿದವು. ಕೋವಿಡ್-೧೯ ಬಿಕ್ಕಟ್ಟಿನ ಸಮಯದಲ್ಲಿ ಇದು ಸ್ವಲ್ಪ ಚೇತರಿಸಿಕೊಂಡಂತೆ ಕಂಡರೂ, ಮನರೇಗಾಕ್ಕೆ ಹಳೆಯ ಮೆರಗು ಮರಳಿ ಬರಲಿಲ್ಲ.
ಅನುಷ್ಠಾನದ ಸಮಸ್ಯೆಗಳನ್ನು ಪರಿಹರಿಸಬಹುದು, ಆದರೆ ಇದಕ್ಕೆ ಪ್ರಬಲ ರಾಜಕೀಯ ಬದ್ಧತೆ ಬೇಕು. ಆದರೆ ‘ವಿಬಿ-ಜಿ ರಾಮ್-ಜಿ’ (VB-G RAM-G) ಮಸೂದೆ ೨೦೨೫ ಇದಕ್ಕೆ ವಿರುದ್ಧವಾದ ಹಾದಿಯಲ್ಲಿ ಸಾಗುತ್ತಿದೆ. ಇದು ಐತಿಹಾಸಿಕ ಕಾಯ್ದೆಯನ್ನು ಕೇಂದ್ರ ನಿರ್ದೇಶಿತ ಯೋಜನೆಯಾಗಿ ಬದಲಿಸಲು ಪ್ರಯತ್ನಿಸುತ್ತಿದೆ. ಈ ಮಸೂದೆಯಡಿಯಲ್ಲಿ ಕೇಂದ್ರವು ಸಂಪೂರ್ಣ ಅಧಿಕಾರವನ್ನು ತನ್ನ ಕೈಯಲ್ಲಿಟ್ಟುಕೊಳ್ಳುತ್ತಿದೆ, ಆದರೆ ಯಾವುದೇ ಪ್ರಮುಖ ಜವಾಬ್ದಾರಿಗಳನ್ನು ಹೊರಲು ಸಿದ್ಧವಿಲ್ಲ. ಉದ್ಯೋಗ ನೀಡುವುದು, ನಿರುದ್ಯೋಗ ಭತ್ಯೆ ಪಾವತಿಸುವುದು, ವಿಳಂಬ ಪಾವತಿಗೆ ಕಾರ್ಮಿಕರಿಗೆ ಪರಿಹಾರ ನೀಡುವುದು ಮತ್ತು ಸಮರ್ಪಕ ಹಣಕಾಸು ಒದಗಿಸುವಂತಹ ಎಲ್ಲಾ ಜವಾಬ್ದಾರಿಗಳನ್ನು ರಾಜ್ಯ ಸರ್ಕಾರಗಳ ಮೇಲೆ ಹೇರಲಾಗಿದೆ.
ಯೋಜನೆಯನ್ನು ಎಲ್ಲಿ ಮತ್ತು ಯಾವಾಗ ಜಾರಿಗೆ ತರಬೇಕು ಎಂದು ನಿರ್ಧರಿಸುವ ‘ಸ್ವಿಚ್ ಆಫ್’ ಅಧಿಕಾರ ಕೇಂದ್ರದ ಕೈಯಲ್ಲಿದೆ. ಇದು ಉದ್ಯೋಗ ಖಾತರಿಯ ಮೂಲ ಉದ್ದೇಶವನ್ನೇ ಸೋಲಿಸುತ್ತದೆ. ಇದು ಖಾತ್ರಿಯಾಗಿ ಅನ್ವಯವಾಗುತ್ತದೆ ಎನ್ನುವ ಖಾತ್ರಿಯೇ ಇಲ್ಲದೆ ಉದ್ಯೋಗ ಖಾತರಿ ನೀಡಿದಂತೆ!ಹಣಕಾಸಿನ ಹಂಚಿಕೆಯಲ್ಲೂ ದೊಡ್ಡ ಬದಲಾವಣೆ ಮಾಡಲಾಗಿದೆ. ಇಲ್ಲಿಯವರೆಗೆ ಮನರೇಗಾ ಕೇಂದ್ರದಿಂದ ಮುಕ್ತವಾದ ಧನಸಹಾಯದ ತತ್ವದ ಮೇಲೆ ಆಧಾರಿತವಾಗಿತ್ತು. ಹೊಸ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳು ಮಾಡಬಹುದಾದ ವೆಚ್ಚದ ಮಿತಿಯನ್ನು ನಿಗದಿಪಡಿಸುತ್ತದೆ. ನಿಗದಿಪಡಿಸಿದ ಮೊತ್ತದಲ್ಲಿ ಕೇಂದ್ರ ಹಾಗೂ ರಾಜ್ಯಗಳು ೬೦:೪೦ ಅನುಪಾತದಲ್ಲಿ ವೆಚ್ಚ ಹಂಚಿಕೊಳ್ಳುತ್ತವೆ. ಅದಕ್ಕೂ ಮೀರಿದ ಎಲ್ಲಾ ಹಣಕಾಸನ್ನು ರಾಜ್ಯಗಳೇ ಭರಿಸಬೇಕಾಗುತ್ತದೆ.
ಕೇಂದ್ರ ಸರ್ಕಾರವು ತನ್ನ ವಿವೇಚನಾ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈ ಅಪಾಯ ಕೇವಲ ಕಲ್ಪನೆಯಲ್ಲ; ಪಶ್ಚಿಮ ಬಂಗಾಳದಲ್ಲಿ ಕಳೆದ ಮೂರು ವರ್ಷಗಳಿಂದ ಮನರೇಗಾ ಹಣಕಾಸು ಸ್ಥಗಿತಗೊಳಿಸಿರುವುದನ್ನು ನಾವು ನೋಡಿದ್ದೇವೆ. ಈ ಕಠಿಣ ಕ್ರಮಕ್ಕೆ ಕಾರಣಗಳನ್ನು ಕೇಂದ್ರ ಸರ್ಕಾರವು ಸಂಸತ್ತಿನಲ್ಲೂ ಸ್ಪಷ್ಟಪಡಿಸಿಲ್ಲ. ಇದರ ಹಿಂದಿನ ರಾಜಕೀಯ ಉದ್ದೇಶ ಸ್ಪಷ್ಟವಾಗಿದೆ.
ಹೊಸ ಹಣಕಾಸು ವ್ಯವಸ್ಥೆಯಿಂದ ಮನರೇಗಾ ದುರ್ಬಲಗೊಳ್ಳಲಿದೆ. ಇಲ್ಲಿಯವರೆಗೆ ರಾಜ್ಯ ಸರ್ಕಾರಗಳು ಕೇವಲ ಶೇಕಡ ೨೫ರಷ್ಟು ಸಾಮಗ್ರಿ ವೆಚ್ಚವನ್ನು ಮಾತ್ರ ಭರಿಸಬೇಕಾಗಿತ್ತು, ಉಳಿದೆಲ್ಲಾ ವೆಚ್ಚವನ್ನು ಕೇಂದ್ರವೇ ನೀಡುತ್ತಿತ್ತು. ಇದು ರಾಜ್ಯಗಳಿಗೆ ಯೋಜನೆಯನ್ನು ಹುರುಪಿನಿಂದ ಜಾರಿಗೆ ತರಲು ಪ್ರೋತ್ಸಾಹ ನೀಡುತ್ತಿತ್ತು. ಹೊಸ ೪೦% ಪಾಲುದಾರಿಕೆಯ ಮಾದರಿಯು ಇದಕ್ಕೆ ದೊಡ್ಡ ಅಡ್ಡಿಯಾಗಲಿದೆ.
ಮನರೇಗಾ ಯಶಸ್ಸಿಗೆ ಕೆಲಸದ ಬೇಡಿಕೆಯಷ್ಟೇ ಮುಖ್ಯವಾಗಿದ್ದು ರಾಜ್ಯಗಳಿಗೆ ಕೇಂದ್ರ ನೀಡುತ್ತಿದ್ದ ಆರ್ಥಿಕ ಬೆಂಬಲ. ರೈತರು ಬಾವಿ ನಿರ್ಮಾಣ, ತೋಟಗಾರಿಕೆಗೆ ಉತ್ಸುಕರಾಗಿದ್ದಾರೆ; ಕೆರೆ-ರಸ್ತೆಗಳ ಅಗತ್ಯವಿದೆ. ವೆಚ್ಚದ ಹೊರೆ ಹೆಚ್ಚಾದಂತೆ, ವಿಶೇಷವಾಗಿ ಬಡ ರಾಜ್ಯಗಳು ಹೊಸ ಯೋಜನೆಗಳ ಅನುಮೋದನೆಯನ್ನು ನಿಧಾನಿಸಬಹುದು ಅಥವಾ ತಡೆಹಿಡಿಯಬಹುದು. ಈ ಮಸೂದೆಯ ಪ್ರಕಾರ ಉದ್ಯೋಗ ನೀಡುವ ಜವಾಬ್ದಾರಿ ರಾಜ್ಯಗಳದ್ದು, ಆದರೆ ಹಣಕಾಸಿನ ಖಾತರಿ ಕೇಂದ್ರ ನೀಡುವುದಿಲ್ಲ. ಇದನ್ನು ರಾಜ್ಯಗಳು ವಿರೋಧಿಸುವುದು ನ್ಯಾಯಸಮ್ಮತವಾಗಿದೆ.
ಮಸೂದೆಯನ್ನು ಬೆಂಬಲಿಸುವ ಕೆಲವು ಅರ್ಥಶಾಸ್ತ್ರಜ್ಞರು ಇದರಿಂದ ಬಡ ರಾಜ್ಯಗಳಿಗೆ ಹೆಚ್ಚಿನ ಹಣ ಸಿಗುತ್ತದೆ ಎಂದು ವಾದಿಸುತ್ತಾರೆ. ಆದರೆ ಬಡ ರಾಜ್ಯಗಳಿಗೆ ನೆರವಾಗಲು ಅಲ್ಲಿನ ವೇತನ ದರಗಳನ್ನು ಹೆಚ್ಚಿಸುವುದು ಸರಿಯಾದ ಮಾರ್ಗವೇ ಹೊರತು, ವೆಚ್ಚದ ಹೊರೆ ಹೇರುವುದಲ್ಲ.
ಎರಡು ವಿಷಯಗಳು ಈ ಮಸೂದೆಯ ವಿನಾಶಕಾರಿ ಸ್ವರೂಪದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆದಿವೆ. ಮೊದಲನೆಯದು, ಕಾಯ್ದೆಯ ಹೆಸರನ್ನು ಮನರೇಗಾ ಬದಲಿಗೆ ‘ವಿಕಸಿತ್ ಭಾರತ್ ಜಿ ರಾಮ್ ಜಿ’ ಎಂದು ಬದಲಿಸಿರುವುದು. ಹೆಸರನ್ನು ಬದಲಿಸುವುದು ಸಮಯ ಮತ್ತು ಹಣದ ಪೋಲು ಮಾತ್ರವಲ್ಲ, ಕಾಯ್ದೆಗಿದ್ದ ಪಕ್ಷಾತೀತ ಸ್ವರೂಪವನ್ನೂ ನಾಶಪಡಿಸುತ್ತದೆ. ದುರದೃಷ್ಟವಶಾತ್, ವಿರೋಧ ಪಕ್ಷಗಳು ಮಸೂದೆಯ ಆಳವಾದ ಸಮಸ್ಯೆಗಳನ್ನು ಚರ್ಚಿಸುವ ಬದಲಿಗೆ ಹೆಸರು ಬದಲಾವಣೆಯ ಬಗ್ಗೆ ಮಾತ್ರ ಆಕ್ರೋಶ ವ್ಯಕ್ತಪಡಿಸುತ್ತಿವೆ.
ಮತ್ತೊಂದು ವಿಷಯವೆಂದರೆ ಉದ್ಯೋಗದ ಮಿತಿಯನ್ನು ೧೦೦ ದಿನಗಳಿಂದ ೧೨೫ ದಿನಗಳಿಗೆ ಹೆಚ್ಚಿಸಿರುವುದು. ಕೇಂದ್ರವು ಇದನ್ನು ದೊಡ್ಡ ಸುಧಾರಣೆಯಂತೆ ಬಿಂಬಿಸುತ್ತಿದೆ. ಆದರೆ ವಾಸ್ತವದಲ್ಲಿ, ಶೇಕಡ ೨ರಷ್ಟು ಕುಟುಂಬಗಳು ಮಾತ್ರ ಪ್ರಸ್ತುತ ೧೦೦ ದಿನಗಳ ಕೆಲಸ ಪಡೆಯುತ್ತಿವೆ. ಅಸ್ತಿತ್ವದಲ್ಲಿರುವ ಮಿತಿಯೇ ಬಳಕೆಯಾಗದಿರುವಾಗ, ಅದನ್ನು ಹೆಚ್ಚಿಸುವುದು ಕೇವಲ ತೋರಿಕೆಯ ಕ್ರಮವಾಗಿದೆ. ವೇತನ ದರ ಹೆಚ್ಚಿಸುವುದು ಜನರಿಗೆ ಹೆಚ್ಚು ಪ್ರಯೋಜನಕಾರಿ ಆಗುತ್ತಿತ್ತು.
ಸಂಕ್ಷಿಪ್ತವಾಗಿ ಹೇಳುವುದಾದರೆ, ಕೇಂದ್ರದ ಹೊಸ ಮಸೂದೆಯು ಉದ್ಯೋಗ ಖಾತರಿ ಯೋಜನೆಯನ್ನು ಸುಧಾರಿಸುವ ಬದಲಿಗೆ ರಾಜ್ಯಗಳನ್ನು ನಿರುತ್ಸಾಹಗೊಳಿಸುತ್ತಿದೆ ಮತ್ತು ಕಾರ್ಮಿಕರ ಅಧಿಕಾರವನ್ನು ಕಸಿದುಕೊಳ್ಳುತ್ತಿದೆ. ಕೃಷಿ ಕಾಯ್ದೆಗಳಂತೆ ಈ ಮಸೂದೆಯೂ ಸಾರ್ವಜನಿಕ ಒತ್ತಡದಿಂದ ರದ್ದಾಗಬೇಕು. ಇಲ್ಲದಿದ್ದರೆ, ಇದು ಒಂದು ಐತಿಹಾಸಿಕ ಯುಗದ ಅಂತ್ಯವಾಗಲಿದೆ.
ಅನುವಾದ- ಟಿ.ಎಸ್ ವೇಣುಗೋಪಾಲ್
ಜೀನ್ ಡ್ರೀಜ಼್ ನಮ್ಮ ನಡುವಿನ ಅಪರೂಪದ ಆರ್ಥಿಕ ಚಿಂತಕರು. ಮನರೆಗಾ (ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ) ರೂಪಿಸುವಲ್ಲಿ ಭಾಗವಹಿಸಿದ್ದರು.
