ನಮ್ಮ ಗಣರಾಜ್ಯವು ಮಹಡ್ ಸತ್ಯಾಗ್ರಹದ ಶತಮಾನೋತ್ಸವವದ ಪ್ರಾಮುಖ್ಯತೆಯನ್ನು ಗಣನೆಗೆ ತೆಗೆದುಕೊಂಡು ಆಚರಿಸಬೇಕು. ಅಸ್ಪೃಶ್ಯತೆಯಿಂದ ಮುಕ್ತಿ ಮತ್ತು ಎಲ್ಲರಿಗೂ ಸಮಾನ ಗೌರವ ಸಿಗಬೇಕು ಎಂಬ ಸಂವಿಧಾನದ ಆಶಯ ನಿಜ ಜೀವನದಲ್ಲಿ ಎಷ್ಟರಮಟ್ಟಿಗೆ ಜಾರಿಯಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ.”

ಒಂದು ಶಾಲೆಯಲ್ಲಿ ಓದುತ್ತಿರುವ ಒಬ್ಬ ಹುಡುಗನನ್ನು ಕಲ್ಪಿಸಿಕೊಳ್ಳಿ. ಅವನಿಗೆ ಬಾಯಾರಿಕೆಯಾಗಿದೆ. ತರಗತಿಯಲ್ಲಿ ಕುಡಿಯುವ ನೀರಿದೆ. ಆದರೆ, ಅವನಿಗೆ ನೀರು ಕುಡಿಯಲು ಸಾಧ್ಯವಿಲ್ಲ. ನೀರು ಕೊಳಕಾಗಿದೆ ಅಂತಲ್ಲ ಅಥವಾ ತರಗತಿಯಲ್ಲಿ ನೀರು ಕುಡಿಯಬಾರದು ಎಂಬ ನಿಯಮವಿದೆ ಅಂತಲ್ಲ. ಅವನಿಗೆ ನೀರು ಕುಡಿಯಲು ಸಾಧ್ಯವಿಲ್ಲ, ಏಕೆಂದರೆ ಅವನಿಗೆ ನೀರು ಕೊಡಬೇಕಾದ ಗುಮಾಸ್ತ ಆ ದಿನ ಶಾಲೆಗೆ ಬಂದಿಲ್ಲ. ಆ ಗುಮಾಸ್ತ ಇಲ್ಲದಿದ್ದರೆ ಆ ಹುಡುಗನ ಕೈಗೆ ನೀರು ಸಿಗುವುದಿಲ್ಲ; ಏಕೆಂದರೆ, ಅವನನ್ನು ಮುಟ್ಟಿದರೆ ನೀರು ಅಪವಿತ್ರವಾಗುತ್ತದೆ ಎಂದು ನಂಬಲಾಗಿತ್ತು.
ಗುಮಾಸ್ತ ಇಲ್ಲ, ನೀರು ಇಲ್ಲ
ಭೀಮರಾವ್ ರಾಮ್ಜಿ ಅಂಬೇಡ್ಕರ್ ಅವರ ಬಾಲ್ಯವನ್ನು ಇಂತಹ ಕ್ರೂರ ನಿಯಮಗಳೇ ಆಳಿದ್ದವು. ಅವರು ತಮ್ಮ ಆತ್ಮಕಥೆಯಂತಿರುವ ‘ವೇಟಿಂಗ್ ಫಾರ್ ಎ ವೀಸಾ’ ಮತ್ತು ‘ನೋ ಪಿಯೋನ್, ನೋ ವಾಟರ್’ ಎಂಬ ಬರಹಗಳಲ್ಲಿ ಈ ನೋವನ್ನು ಬಹಳ ಸ್ಪಷ್ಟವಾಗಿ ವಿವರಿಸಿದ್ದಾರೆ. ಒಮ್ಮೆ ಅವರು ತಮ್ಮ ಒಡಹುಟ್ಟಿದವರೊಂದಿಗೆ ತಂದೆಯನ್ನು ಭೇಟಿಯಾಗಲು ಹೋಗುವಾಗ, ರೈಲ್ವೆ ನಿಲ್ದಾಣದಲ್ಲಿ ವಿಪರೀತ ಬಾಯಾರಿಕೆಯಾಗಿತ್ತು. ಆದರೆ, ಅವರಿಗೆ ಯಾರೂ ನೀರು ಕೊಡಲಿಲ್ಲ. ಅವರು ‘ಮಹರ್’ ಸಮುದಾಯಕ್ಕೆ ಸೇರಿದವರು, ಅಂದರೆ “ಅಸ್ಪೃಶ್ಯರು”. ಸಾರ್ವಜನಿಕ ನಲ್ಲಿಗಳು ಅವರು ಬಳಸುವಂತಿರಲಿಲ್ಲ.
ಆ ದೃಶ್ಯವನ್ನು ಸ್ವಲ್ಪ ಯೋಚಿಸಿ: ಬಾಯಾರಿಕೆಯಿಂದ ಬಳಲುತ್ತಿರುವ ಚಿಕ್ಕ ಮಕ್ಕಳು, ಸುತ್ತಲೂ ನೀರಿದೆ, ಆದರೆ ಒಂದು ಗುಟುಕು ನೀರು ಕುಡಿಯಲು ಸಾಧ್ಯವಿಲ್ಲ. ಅದು ಮರುಭೂಮಿಯಲ್ಲಿ ಅಲ್ಲ, ಶಾಲೆಯಲ್ಲಿ. ಬರಗಾಲದಲ್ಲಲ್ಲ, ಎಲ್ಲವೂ ಸಮೃದ್ಧವಾಗಿದ್ದ ಸಮಯದಲ್ಲಿ.
ಆ ಹುಡುಗ ಮುಂದೆ ಬೆಳೆದು ದೊಡ್ಡವನಾದ. ಕೊಲಂಬಿಯಾ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಓದಿದ. ಗ್ರೇಸ್ ಇನ್ನಲ್ಲಿ ಕಾನೂನು ಕಲಿತ. ಅಂತಿಮವಾಗಿ ತನ್ನ ಊರಿಗೆ ಮರಳಿ ಬಂದು ನೇರವಾಗಿ ಒಂದು ನೀರಿನ ತೊಟ್ಟಿಯ ಬಳಿ ಹೋದ.
ಮಹಡ್ನಲ್ಲಿ ಏನಾಯಿತು?
ಮಾರ್ಚ್ 20, 1927 ರಂದು ಅಂಬೇಡ್ಕರ್ ಅವರು ಬಾಂಬೆ ಪ್ರಾಂತ್ಯದ ಕೊಂಕಣದ ಮಹಡ್ ಎಂಬ ಸಣ್ಣ ಪಟ್ಟಣದಲ್ಲಿ ಸಾವಿರಾರು ಜನರ ಮೆರವಣಿಗೆಯನ್ನು ಮುನ್ನಡೆಸಿದರು. ಅವರ ಗುರಿ ‘ಚೌದರ್ ಕೆರೆ’ (ಸಾರ್ವಜನಿಕ ನೀರಿನ ತೊಟ್ಟಿ). 1923ರಲ್ಲಿ ಬಾಂಬೆ ಶಾಸನಸಭೆ ‘ಬೋಲೆ ನಿರ್ಣಯ’ವನ್ನು ಅಂಗೀಕರಿಸಿ, 1924ರಲ್ಲಿ ಮಹಡ್ ಪುರಸಭೆಯು ಕೆರೆಯನ್ನು ಅಸ್ಪೃಶ್ಯರಿಗಾಗಿ ತೆರೆದಿತ್ತು. ಆದರೆ ಕಾಗದದ ಮೇಲಿನ ನಿರ್ಣಯಕ್ಕೂ, ಬಾಯಾರಿದ ಗಂಟಲಲ್ಲಿ ಇಳಿಯುವ ನೀರಿಗೂ ಬಹಳ ವ್ಯತ್ಯಾಸವಿತ್ತು. ಮೇಲ್ಜಾತಿಯವರು ಆ ನಿರ್ಣಯ ಕೇವಲ ಕಾಗದಕ್ಕಷ್ಟೇ ಸೀಮಿತವಾಗುವಂತೆ ನೋಡಿಕೊಂಡಿದ್ದರು.
ಅಂಬೇಡ್ಕರ್ ಕೆರೆಯ ಬಳಿ ಹೋದರು. ಬಗ್ಗಿ ನೀರು ಕುಡಿದರು.
ಅವರ ಹಿಂದೆಯೇ ಸಾವಿರಾರು ಪುರುಷರು, ಮಹಿಳೆಯರು ಮತ್ತು ಮಕ್ಕಳು ಬಂದರು. ಅವರೆಲ್ಲರೂ ನೀರು ಕುಡಿದರು. ಬಹುಶಃ ತಮ್ಮ ಜೀವನದಲ್ಲಿ ಮೊದಲ ಬಾರಿಗೆ, ಕಳ್ಳತನದಿಂದಲೋ ಅಥವಾ ದಾನವಾಗಿ ಪಡೆದಂತೆ ಅಲ್ಲದೆ, ತಮ್ಮ ಹಕ್ಕಿನಿಂದ ಅವರು ಸಾರ್ವಜನಿಕ ನೀರಿನ ಮೂಲದಿಂದ ನೀರು ಕುಡಿದರು.
ನಂತರ ಹಿಂಸಾಚಾರ ಶುರುವಾಯಿತು. ಅಂಬೇಡ್ಕರ್ ಮತ್ತು ತಂಡದವರು ವೀರೇಶ್ವರ ದೇವಸ್ಥಾನದ ಒಳಗೆ ಹೋಗಲಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಯಿತು. ಊರಿಗೆ ಮರಳುತ್ತಿದ್ದವರ ಮೇಲೆ, ಎತ್ತಿನ ಬಂಡಿಗಳ ಮೇಲೆ ದಾಳಿ ನಡೆಯಿತು. ಅವರು ನೀರು ಕುಡಿದಿದ್ದರಿಂದ ಕೆರೆ ಮಲಿನವಾಗಿದೆ ಎಂದು ಭಾವಿಸಿ, ಅದನ್ನು ಸಗಣಿ ಮತ್ತು ಗೋಮೂತ್ರದಿಂದ “ಶುದ್ಧೀಕರಿಸಲಾಯಿತು”. ಮನುಷ್ಯನ ಘನತೆ ತೊಡೆದು ಹಾಕಬಹುದಾದ ಮಲಿನ ವಸ್ತುವೇನೋ ಎಂಬಂತೆ !
ಡಿಸೆಂಬರ್ 1927ರಲ್ಲಿ ಎರಡನೇ ಸಮ್ಮೇಳನಕ್ಕಾಗಿ ಅಂಬೇಡ್ಕರ್ ಮತ್ತೆ ಮಹಡ್ಗೆ ಬಂದಾಗ, ಅವರ ಉದ್ದೇಶ ಕೇವಲ ನೀರು ಕುಡಿಯುವುದಾಗಿರಲಿಲ್ಲ. ಡಿಸೆಂಬರ್ 25, 1927ರಂದು, ಆ ಸಮ್ಮೇಳನದಲ್ಲಿ ‘ಮನುಸ್ಮೃತಿ’ಯನ್ನು ಸಾರ್ವಜನಿಕವಾಗಿ ಸುಡಲಾಯಿತು. ಅದು ಕೇವಲ ಪ್ರತಿಭಟನೆಗಾಗಿ ಮಾಡಿದ ಕೆಲಸವಲ್ಲ; ಬದಲಾಗಿ, ಮುಂದಿನ ಭಾರತದ ಗಣರಾಜ್ಯವು ಪ್ರಾಚೀನ ಗ್ರಂಥಗಳಲ್ಲಿ ಬರೆದಿರುವ ಅಸಮಾನತೆಯ ಮೇಲೆ ಅಲ್ಲ, ಬದಲಿಗೆ ಸಮಾನ ಹಕ್ಕುಗಳ ಮೇಲೆ ನಿಲ್ಲಬೇಕು ಎಂಬ ಘೋಷಣೆಯಾಗಿತ್ತು.
ಹತ್ತು ವರ್ಷಗಳ ಕಾನೂನು ಹೋರಾಟ
ಸತ್ಯಾಗ್ರಹದ ನಂತರ ನಡೆದದ್ದು ಅಷ್ಟೇ ಮುಖ್ಯವಾದದ್ದು. ಮಹಡ್ನ ಮೇಲ್ಜಾತಿಯವರು ಕೇವಲ ಹಿಂಸೆಗೆ ಇಳಿಯಲಿಲ್ಲ, ಅವರು ಕೋರ್ಟ್ಗೂ ಹೋದರು.
ಡಿಸೆಂಬರ್ 12, 1927ರಂದು, ಅಸ್ಪೃಶ್ಯರು ಮತ್ತೆ ಚೌದರ್ ಕೆರೆಯನ್ನು ಬಳಸದಂತೆ ತಡೆಯಾಜ್ಞೆ ಕೋರಿ ಕೋಲಾಬಾ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಡಿಸೆಂಬರ್ 14, 1927ರಂದು ಕೋರ್ಟ್ ತಡೆಯಾಜ್ಞೆ ನೀಡಿತು.
ಸಂವಿಧಾನದ ಮೇಲೆ ನಂಬಿಕೆಯಿದ್ದ ಅಂಬೇಡ್ಕರ್, ಕೋರ್ಟ್ ಆದೇಶವನ್ನು ಗೌರವಿಸಿದರು. ಸಮ್ಮೇಳನ ನಡೆಸಿದರು, ಮನುಸ್ಮೃತಿಯನ್ನು ಸುಟ್ಟರು, ಆದರೆ ಕೆರೆಯ ಹತ್ತಿರ ಹೋಗಲಿಲ್ಲ.
ಈ ಕಾನೂನು ಹೋರಾಟ ಹತ್ತು ವರ್ಷಗಳ ಕಾಲ ನಡೆಯಿತು. ಮಹಡ್ನಿಂದ ಶುರುವಾಗಿ ಥಾಣೆಯ ಸಹಾಯಕ ನ್ಯಾಯಾಧೀಶರ ಕೋರ್ಟ್ ವರೆಗೆ ಹೋಯಿತು. ಪ್ರತಿಯೊಂದು ಹಂತದಲ್ಲೂ, ಅಸ್ಪೃಶ್ಯರನ್ನು ಕೆರೆಯಿಂದ ದೂರ ಇಡುವುದು ಒಂದು ಹಳೆಯ ಸಂಪ್ರದಾಯ ಎಂದು ಸಾಬೀತುಪಡಿಸಲು ಮೇಲ್ಜಾತಿಯವರಿಗೆ ಸಾಧ್ಯವಾಗಲಿಲ್ಲ.
ಅಂತಿಮವಾಗಿ ಮಾರ್ಚ್ 17, 1937ರಂದು ಬಾಂಬೆ ಹೈಕೋರ್ಟ್ನಲ್ಲಿ ಜಸ್ಟಿಸ್ ಬ್ರೂಮ್ಫೀಲ್ಡ್ ಮತ್ತು ಎನ್.ಜೆ. ವಾಡಿಯಾ ಅವರ ಪೀಠ ಈ ತೀರ್ಪು ನೀಡಿತು. ನ್ಯಾಯಾಧೀಶ ಬ್ರೂಮ್ಫೀಲ್ಡ್ ಅವರು, “ಅಸ್ಪೃಶ್ಯರನ್ನು ಕೆರೆಯಿಂದ ದೂರವಿಡಲು ಯಾವುದೇ ಪಾರಂಪರಿಕ ಹಕ್ಕಿಲ್ಲ. ಕೆರೆಯು ಪುರಸಭೆಗೆ ಸೇರಿದ್ದು, ಅದು ಸಾರ್ವಜನಿಕ ಆಸ್ತಿ. ಅಸ್ಪೃಶ್ಯರಿಗೆ ಅದನ್ನು ಬಳಸುವ ಹಕ್ಕಿದೆ” ಎಂದು ಸ್ಪಷ್ಟಪಡಿಸಿದರು.
1927ರಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ಕೆರೆಯಲ್ಲಿ ನೀರು ಕುಡಿಯಲು ಮೆರವಣಿಗೆಯನ್ನು ಮುನ್ನಡೆಸಿದರೆ, ಅದು ಅವರ ಹಕ್ಕು ಎಂದು ಸಾಬೀತುಪಡಿಸಲು 1937ರವರೆಗೆ ಕಾಯಬೇಕಾಯಿತು. ಕಾನೂನು ಅಂಬೇಡ್ಕರ್ ಅವರನ್ನು ಗೆಲ್ಲಿಸಿತು, ಆದರೆ ಆ ಹೋರಾಟ ಎಷ್ಟೊಂದು ಕಠಿಣವಾಗಿತ್ತು ಎಂಬುದು ಇಲ್ಲಿ ತಿಳಿಯುತ್ತದೆ.
ಉಪ್ಪು ಮತ್ತು ನೀರು
ಮಹಡ್ ಸತ್ಯಾಗ್ರಹದ ಮೂರು ವರ್ಷಗಳ ನಂತರ, ಮಾರ್ಚ್ 12, 1930ರಂದು ಗಾಂಧೀಜಿ ದಂಡಿ ಯಾತ್ರೆಯನ್ನು ಕೈಗೊಂಡರು. ಉಪ್ಪಿನ ಸತ್ಯಾಗ್ರಹವು ಬ್ರಿಟಿಷರ ಆರ್ಥಿಕ ಅಡಿಪಾಯಕ್ಕೆ ಪೆಟ್ಟು ಕೊಟ್ಟು, ಇಡೀ ಜಗತ್ತಿನ ಗಮನ ಸೆಳೆಯಿತು. ನಮ್ಮ ರಾಷ್ಟ್ರೀಯ ಇತಿಹಾಸದಲ್ಲಿ ಅದಕ್ಕೆ ದೊಡ್ಡ ಸ್ಥಾನವಿದೆ, ಅದು ಸರಿಯೂ ಹೌದು. ಆದರೆ, ಈ ಎರಡು ಸತ್ಯಾಗ್ರಹಗಳು ಏನು ಕೇಳಿದವು ಮತ್ತು ಯಾರ ವಿರುದ್ಧ ಕೇಳಿದವು ಎಂಬುದನ್ನು ಗಮನಿಸಿ.
ಉಪ್ಪಿನ ಸತ್ಯಾಗ್ರಹ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯವನ್ನು ಕೇಳಿತು. ಮಹಡ್ ಸತ್ಯಾಗ್ರಹವು ನಮ್ಮದೇ ದೇಶದ ಜನರ ವಿರುದ್ಧದ ಸಮಾನತೆಯನ್ನು ಕೇಳಿತು. ದಂಡಿ ಯಾತ್ರೆಯು ಹೊರಗಿನ ಶತ್ರುವನ್ನು ಗುರುತಿಸಿ, ಭಾರತ ಬಿಟ್ಟು ಹೋಗಿ ಎಂದು ಹೇಳಿತು. ಮಹಡ್ ಯಾತ್ರೆಯು ನಮ್ಮ ಸಮಾಜದ ಒಳಗಿದ್ದ ರೋಗವನ್ನು ಗುರುತಿಸಿ, ಸುಧಾರಿಸಿಕೊಳ್ಳಿ ಎಂದು ಹೇಳಿತು. ಬ್ರಿಟಿಷರ ವಿರುದ್ಧ ಹೋರಾಡಲು ಧೈರ್ಯ ಬೇಕಿತ್ತು, ಆದರೆ ತನ್ನದೇ ನೆರೆಯವರನ್ನು, ತನ್ನದೇ ಸಮುದಾಯದವರನ್ನು ಕಣ್ಣಲ್ಲಿ ಕಣ್ಣಿಟ್ಟು, “ನೀವು ನಮ್ಮನ್ನು ಮನುಷ್ಯರಂತೆ ನೋಡಿಲ್ಲ, ಇದನ್ನು ನಾವು ಇನ್ನು ಸಹಿಸುವುದಿಲ್ಲ” ಎಂದು ಹೇಳಲು ಅದಕ್ಕಿಂತ ದೊಡ್ಡ ಧೈರ್ಯ ಬೇಕಿತ್ತು.
ಉಪ್ಪಿನ ಸತ್ಯಾಗ್ರಹದ ಮಹತ್ವ ಕಡಿಮೆ ಎಂದು ನಾನು ಹೇಳುತ್ತಿಲ್ಲ, ಆದರೆ ಇಲ್ಲಿ ಒಂದು ಐತಿಹಾಸಿಕ ಅಸಮತೋಲನವಿದೆ, ಅದನ್ನು ಸರಿಪಡಿಸಬೇಕು. ಉಪ್ಪಿನ ಮೇಲಿನ ತೆರಿಗೆ ಬ್ರಿಟಿಷರು ಹೇರಿದ್ದು. ಅವರು ಹೋದ ನಂತರ ಅದನ್ನು ಸುಲಭವಾಗಿ ರದ್ದುಪಡಿಸಬಹುದಾಗಿತ್ತು. ಆದರೆ ಅಸ್ಪೃಶ್ಯತೆ ಬ್ರಿಟಿಷರು ಬಂದಿದ್ದರಿಂದ ಶುರುವಾದದ್ದಲ್ಲ, ಅವರು ಹೋದರೂ ಹೋಗಿಲ್ಲ. ಅದು ಸಾವಿರಾರು ವರ್ಷಗಳಿಂದ ನಮ್ಮ ಸಮಾಜದಲ್ಲಿ ರಕ್ತಗತವಾಗಿದೆ. ಅದನ್ನು ಹೋಗಲಾಡಿಸಲು ಸರ್ಕಾರ ಬದಲಾದರೆ ಸಾಲದು, ಜನರ ಮನಸ್ಸು ಬದಲಾಗಬೇಕು, ಮನುಷ್ಯನನ್ನು ನೋಡುವ ದೃಷ್ಟಿ ಬದಲಾಗಬೇಕು.
ಚೌದರ್ ಕೆರೆಯಲ್ಲಿ ನೀರು ಕುಡಿದ ವ್ಯಕ್ತಿಯೇ ಮುಂದೆ ಭಾರತದ ಸಂವಿಧಾನವನ್ನು ರಚಿಸಿದ್ದು ಆಕಸ್ಮಿಕವೇನಲ್ಲ. ಸಂವಿಧಾನದ ಮೂರನೇ ಭಾಗವು ಮಹಡ್ ಸತ್ಯಾಗ್ರಹದ ಛಾಪನ್ನು ಹೊಂದಿದೆ. ಜಾತಿ ಆಧಾರಿತ ತಾರತಮ್ಯವನ್ನು ನಿಷೇಧಿಸುವ ಮತ್ತು ಕೆರೆಗಳು, ಸಾರ್ವಜನಿಕ ಸ್ಥಳಗಳಿಗೆ ಎಲ್ಲರಿಗೂ ಪ್ರವೇಶ ನೀಡುವ ಕಲಂ 15 ನೋಡಿದರೆ, ಅಂಬೇಡ್ಕರ್ ಅವರ ಕಣ್ಣ ಮುಂದೆ ಚೌದರ್ ಕೆರೆಯೇ ಇತ್ತೇನೋ ಎನಿಸುತ್ತದೆ. ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡುವ ಕಲಂ 17, ಮಹಡ್ ಸತ್ಯಾಗ್ರಹದ ಸಾಂವಿಧಾನಿಕ ರೂಪವಾಗಿದೆ.
ದಂಡಿ ಯಾತ್ರೆಯು ಭಾರತಕ್ಕೆ ‘ಸ್ವರಾಜ್ಯ’ದ ಕನಸನ್ನು ನೀಡಿದರೆ, ಮಹಡ್ ‘ಸಮಾನತೆ’ಯ ವ್ಯಾಕರಣವನ್ನು ಕಲಿಸಿತು. ಸ್ವಾತಂತ್ರ್ಯವನ್ನು ಬಹಳ ಮಂದಿ ಬರೆಯಬಹುದಿತ್ತು, ಆದರೆ ಸಮಾನತೆಯ ವ್ಯಾಕರಣವನ್ನು ಬರೆಯಲು ಬಾಲ್ಯದಲ್ಲಿ ನೀರು ಕುಡಿಯಲು ನಿರಾಕರಿಸಲ್ಪಟ್ಟ ಒಬ್ಬ ವ್ಯಕ್ತಿಯಿಂದ ಮಾತ್ರ ಸಾಧ್ಯವಿತ್ತು.
ಶತಮಾನೋತ್ಸವದ ಮಹತ್ವ
ಮಹಡ್ ಸತ್ಯಾಗ್ರಹದ 100ನೇ ವರ್ಷ ಮಾರ್ಚ್ 20, 2027ಕ್ಕೆ ಬರುತ್ತದೆ. ನಾವು ಈಗ 99ನೇ ವರ್ಷದಲ್ಲಿದ್ದೇವೆ. ಈ ಗಣರಾಜ್ಯಕ್ಕೆ ತನ್ನ ಮೂಲದ ಬಗ್ಗೆ ಸ್ವಲ್ಪವಾದರೂ ನೆನಪಿದ್ದರೆ, ಸಂವಿಧಾನವನ್ನು ಕೊಟ್ಟ ಹೋರಾಟದ ಬಗ್ಗೆ ಗೌರವವಿದ್ದರೆ, ಈ ಶತಮಾನೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಬೇಕು.
ಮಾರ್ಚ್ 20, 2026ರಿಂದ ಮಾರ್ಚ್ 20, 2027ರವರೆಗೆ ಒಂದು ವರ್ಷದ ಕಾಲ ಈ ಶತಮಾನೋತ್ಸವ ನಡೆಯಬೇಕು ಎಂದು ನಾನು ಪ್ರಸ್ತಾಪಿಸುತ್ತೇನೆ. ಚೌದರ್ ಕೆರೆಯ ಬಳಿ ಒಂದು ದೊಡ್ಡ ಸಭೆ ಸೇರಬೇಕು. ಎಲ್ಲ ಜಾತಿ, ಮತ, ಪಂಗಡದ ಜನರು ಅಲ್ಲಿಗೆ ಬಂದು ಒಟ್ಟಿಗೆ ನೀರು ಕುಡಿಯಬೇಕು. ಇದು ಒಂದು ಸಾಂವಿಧಾನಿಕ ಪುನರ್-ದೀಕ್ಷೆಯಾಗಲಿ: ಹುಟ್ಟಿನ ಕಾರಣದಿಂದ ಯಾವುದೇ ಭಾರತೀಯನು ಕೀಳು ಎಂದು ಪರಿಗಣಿಸಲ್ಪಡುವುದಿಲ್ಲ ಎಂಬ ಪ್ರತಿಜ್ಞೆಯನ್ನು ಮತ್ತೆ ತೆಗೆದುಕೊಳ್ಳೋಣ.
ಆದರೆ ಇದು ಕೇವಲ ಸಮಾರಂಭಗಳಿಗೆ ಮಾತ್ರ ಸೀಮಿತವಾಗಬಾರದು. ಈ ವರ್ಷ ಆತ್ಮಾವಲೋಕನದ ವರ್ಷವಾಗಲಿ. ಇಂದಿಗೂ ಗ್ರಾಮೀಣ ಭಾರತದ ಸರ್ಕಾರಿ ಶಾಲೆಯೊಂದರಲ್ಲಿ ಓದುತ್ತಿರುವ ದಲಿತ ಹುಡುಗ, ಆದಿವಾಸಿ ಹುಡುಗಿ ಅಥವಾ ಸ್ವಚ್ಛತಾ ಕಾರ್ಮಿಕರ ಮಗಳು ನಿಜವಾಗಿಯೂ ಆ “ಗುಮಾಸ್ತ ಇಲ್ಲ, ನೀರು ಇಲ್ಲ” ಎಂಬ ಭೀತಿಯಿಂದ ಮುಕ್ತರಾಗಿದ್ದಾರೆಯೇ? ಅಥವಾ ಆ ತಾರತಮ್ಯ ಈಗ ಬೇರೆ ರೂಪದಲ್ಲಿ ಮುಂದುವರಿಯುತ್ತಿದೆಯೇ ಎಂದು ನಾವು ಪ್ರಶ್ನಿಸಿಕೊಳ್ಳೋಣ.
ನಮ್ಮ ಚರಂಡಿಗಳನ್ನು ಬರಿಗೈಯಲ್ಲಿ ಸ್ವಚ್ಛಗೊಳಿಸುವ ಕಾರ್ಮಿಕನಿಗೂ, ಚೌದರ್ ಕೆರೆಯಲ್ಲಿ ನೀರು ಕುಡಿಯಲು ಬಿಡದಿದ್ದ ಅಸ್ಪೃಶ್ಯರಿಗೂ ಏನಾದರೂ ವ್ಯತ್ಯಾಸವಿದೆಯೇ ಎಂದು ಕೇಳಿಕೊಳ್ಳೋಣ. ಸಂವಿಧಾನವು ನಿಜವಾಗಿಯೂ ಜನರ ಜೀವನದ ಭಾಗವಾಗಿದೆಯೇ ಎಂದು ಯೋಚಿಸೋಣ.
ಈ ಶತಮಾನೋತ್ಸವವು ತಳಸಮುದಾಯದ, ಶೋಷಿತರ ಮತ್ತು ಎಲ್ಲರಿಗೂ ಸಮಾನ ಹಕ್ಕನ್ನು ಕೇಳುವ ದನಿಯಾಗಲಿ. ಅಂಬೇಡ್ಕರ್ ಕೇವಲ ಸಂವಿಧಾನವನ್ನು ಬರೆಯಲಿಲ್ಲ. ಸಣ್ಣ ಪಟ್ಟಣದ ಒಂದು ಕೆರೆಯಲ್ಲಿ ನೀರು ಕುಡಿಯುವ ಮೂಲಕ, ತಾವು ಯಾರಿಗಾಗಿ ಸಂವಿಧಾನ ಬರೆಯುತ್ತಿದ್ದಾರೋ ಅವರೂ ಮನುಷ್ಯರೇ ಎಂದು ಮೊದಲು ತೋರಿಸಿಕೊಟ್ಟರು. ಆ ಕೆಲಸ, ದಂಡಿ ಯಾತ್ರೆಗಿಂತಲೂ ಆಳವಾದದ್ದು.
ಭಾರತದಲ್ಲಿ ಸಮಾನತೆ ಎಂಬುದು ಇನ್ನೂ ಸಾಕಾರಗೊಂಡಿಲ್ಲ. ಶತಮಾನೋತ್ಸವ ಹತ್ತಿರ ಬರುತ್ತಿದೆ. ನಾವು ಮರೆತುಹೋಗದಂತೆ ಗಣರಾಜ್ಯವು ನೆನಪಿಸಿಕೊಳ್ಳಲಿ.
ಸುಪ್ರೀಂ ಕೋರ್ಟ್ನ ಹಿರಿಯ ವಕೀಲರು
