“ಕಾಮರೂಪಿ” – ಎಂ. ಎಸ್. ಪ್ರಭಾಕರ ಸಂದರ್ಶನದ ಮೂರು ಭಾಗಗಳು

ಐದು ವರ್ಷಗಳ ಹಿಂದೆ ಋತುಮಾನ ಮಾಡಿದ್ದ ಎಂ.ಎಸ್. ಪ್ರಭಾಕರ ಅವರ ಸಂದರ್ಶನದ ಮೂರು ಭಾಗಗಳು ಇಲ್ಲಿವೆ. ಈಗ ನೆನಪಿಸಿಕೊಂಡು ಹೇಳುವುದಾದರೆ – ಅವರ ವಿದ್ವತ್ತೇನು, ವ್ಯಾಪ್ತಿ-ವಿಸ್ತಾರಗಳೇನು ಎಂಬುದರ ಬಗ್ಗೆ ಪೂರ್ತಿ ಅರಿವಿಟ್ಟುಕೊಂಡು ಮಾಡಿದ ಸಂದರ್ಶನವೇನೂ ಇದಾಗಿರಲಿಲ್ಲ. ಆದರೆ ನಮ್ಮ ಮುಗ್ಧತೆ, ಬದ್ಧತೆ ಮತ್ತು ಕುತೂಹಲಗಳು ನಮ್ಮಿಂದ ಈ ಸಂದರ್ಶನಗಳನ್ನು ಮಾಡಿಸಿವೆ. ಖಂಡಿತವಾಗಿಯೂ ಈ ವಾರಾಂತ್ಯದಲ್ಲಿ ನಿಮ್ಮ ಓದು-ಕೇಳುವಿಕೆಯ ಪಟ್ಟಿಯಲ್ಲಿ ಇರಬೇಕಾದ ಸಂದರ್ಶನ ಇದು. 

“ಕಾಮರೂಪಿ” ಎಂದೇ ನಾಡಿನ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿರುವ ಎಂ . ಎಸ್ . ಪ್ರಭಾಕರ ಕೋಲಾರದವರು . ಪೂರ್ಣ ಹೆಸರು ಮೊಟ್ಣಹಳ್ಳಿ ಸೂರಪ್ಪ ಪ್ರಭಾಕರ. ಪತ್ರಕರ್ತರೂ , ಅಧ್ಯಾಪಕರೂ ಆಗಿದ್ದ ಅವರು ತಮ್ಮ ಓದು – ಉದ್ಯೋಗಗಳ ಕಾರಣಕ್ಕೆ ಸರಿಸುಮಾರು ನಾಲ್ಕು ದಶಕಗಳಷ್ಟು ಧೀರ್ಘಕಾಲ ಕರ್ನಾಟಕದಿಂದ ಹೊರಗೆ ನೆಲೆಸಿದರು . ದಕ್ಷಿಣ ಆಫ್ರಿಕಾದ ಸ್ತಿತ್ಯಂತರಗಳನ್ನು ಅಲ್ಲಿಯೇ ಇದ್ದು ವರದಿ ಮಾಡಿದ ಭಾರತೀಯ ವರದಿಗಾರರಲ್ಲಿ ಇವರದ್ದು ಪ್ರಮುಖ ಹೆಸರು .

ವೃತ್ತಿ ಜೀವನದ ಜಾಸ್ತಿ ಸಮಯವನ್ನು ಕಳೆದದ್ದು ಅಸ್ಸಾಂ. ಪ್ರಾಚೀನ ಅಸ್ಸಾಂನ ಹೆಸರು ಕಾಮರೂಪ. ಸುದೀರ್ಘ ಕಾಲ ಅಸ್ಸಾಂನಲ್ಲಿದ್ದುದರಿಂದಲೋ ಏನೊ, ಪ್ರಭಾಕರರಿಗೆ ಆ ಹೆಸರು ಪ್ರಿಯವಾಗಿರಬೇಕು. ಕನ್ನಡದಲ್ಲಿ ಪ್ರಭಾಕರರು ಬರೆದದ್ದು ಕಡಿಮೆ . `ಒಂದು ತೊಲ ಪುನುಗು ಮತ್ತು ಇತರ ಕತೆಗಳು’, ಕಿರು ಕಾದಂಬರಿಗಳಾದ `ಕುದುರೆ ಮೊಟ್ಟೆ’ ಮತ್ತು ಅಂಜಿಕಿನ್ಯಾತಕಯ್ಯ ‘ ಇವರ ಪ್ರಮುಖ ಸಾಹಿತ್ಯ. “ನನ್ನ ಮಟ್ಟಿಗೆ ನಾನು ಒಬ್ಬ ಆಕಸ್ಮಿಕ ಬರೆಹಗಾರ. ಇಂಗ್ಲಿಷ್ನಲ್ಲಿ ಹೇಳಿದರೆ ಆಕ್ಸಿಡೆಂಟಲ್ ರೈಟರ್. ” ಎಂದು ಅವರೇ ಹೇಳಿಕೊಂಡಿದ್ದಾರೆ. 

ಕೋಲಾರದಲ್ಲಿ ಆರಂಭಿಕ ವಿದ್ಯಾರ್ಥಿ ಜೀವನ . ನಂತರದಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ . ಬೆಂಗಳೂರು , ಧಾರವಾಡ , ಗೌಹಾಟಿಯಲ್ಲಿ ಇಂಗ್ಲೀಶ್ ಬೋಧನೆ . ಈ ಮಧ್ಯೆ ಕನ್ನಡದಲ್ಲಿ ಸೃಜನಶೀಲ ಸಾಹಿತ್ಯ ರಚನೆ . ಅಧ್ಯಯನಕ್ಕಾಗಿ ಅಮೆರಿಕ ಪ್ರವಾಸ . ಹಿಂದಿರುಗಿದ ಬಳಿಕ ಮತ್ತೆ ಅಧ್ಯಾಪಕ ವೃತ್ತಿ , ಮುಂದೆ ಮುಂಬೈ ಯ ‘ಎಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲೀ ‘ ಯಲ್ಲಿ ಪತ್ರಕರ್ತನಾಗಿ ವೃತ್ತಿಜೀವನ ಆರಂಭ . ” ದಿ ಹಿಂದೂ ” ಪತ್ರಿಕೆಗಾಗಿ ಈಶಾನ್ಯ ರಾಜ್ಯಗಳ ವರದಿಗಾರನಾಗಿ ಕೆಲಕಾಲ ಕೆಲಸ ಮಾಡಿದ ನಂತರ ದಕ್ಷಿಣ ಆಫ್ರಿಕಾದ ವರದಿಗಾರರಾದರು. ಹಿಂದಿರುಗಿದ ನಂತರ ಪುನ: ಕಾಮರೂಪಕ್ಕೆ ಮರಳಿದರು. 


 

ಸಂದರ್ಶನ ದಿನಾಂಕ : 18 ಮಾರ್ಚ್ , 2017
ಸಂದರ್ಶಕರು : ಅವಿನಾಶ್. ಜಿ
ಛಾಯಾಗ್ರಹಣ : ವಿವೇಕ್ ಎಸ್.ಕೆ | ಕುಂಟಾಡಿ ನಿತೇಶ್
ಸಂಕಲನ : ವಿವೇಕ್ ಎಸ್.ಕೆ
ಇಂಗ್ಲೀಶ್ ಉಪಶೀರ್ಷಿಕೆಗಳು : ಅನುರೂಪ ರವೀಂದ್ರ | ಅಮೂಲ್ಯ ಅರಸಿನಮಕ್ಕಿ

ಪ್ರತಿಕ್ರಿಯಿಸಿ