ಲಾಕ್ ಡೌನ್ ನಂತರ ಏನು ಮಾಡಬೇಕು? ೯ ಸಲಹೆಗಳು

ಲಾಕ್ ಡೌನ್ ಸೋಂಕಿತರ ಸಂಖ್ಯೆಯನ್ನು ಇಳಿಮುಖಗೊಳಿಸಿದರೂ ಸಹ, ಕೋವಿಡ್-19 ಹರಡುವುದು ನಿಲ್ಲದು. ಬೀದಿಗೆ ಬಂದಿರುವ ವಲಸಿಗರನ್ನು ಹೀಗೆ ನೋಡುವಾಗ, ಮುಂದಿನ ದಿನಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ವ್ಯತ್ಯಯವನ್ನು ನಿರೀಕ್ಷಿಸಬಹುದು ಮತ್ತು ಅದಕ್ಕಾಗಿ ಈಗಿಂದಲೇ ಯೋಜನೆಗಳನ್ನು ಹಾಕಿಕೊಳ್ಳಿ ಎನ್ನುತ್ತಾರೆ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞರಾದ ಅಭಿಜಿತ್ ಬ್ಯಾನರ್ಜಿ, ಎಸ್ತರ್ ಡುಫ್ಲೋ

ಭಾರತದ ವ್ಯಾಪಾರ ಮುಂದಿನ ೨೧ದಿನ ಬಂದಾಗಿದೆ. ಇದು ಸಾಕಾಗದಿದ್ದರೆ ಇನ್ನಷ್ಟು ದಿನ ಮುಂದುವರಿಯುತ್ತದೆ. ಪ್ರತಿಯೊಬ್ಬರು ಮನೆಯಲ್ಲಿ ಉಳಿಯಬೇಕು. ಇದರರ್ಥ ನಿಜವಾಗಿ ಏನು ಅಂತ ಅರ್ಥಮಾಡಿಕೊಳ್ಳಲು ಹೆಣಗುತ್ತಿದ್ದೇವೆ. ಕಟ್ಟಡ ನಿರ್ಮಿಸುವ ವಲಸೆ ಕಾರ್ಮಿಕರು ಈಗ ಮುಚ್ಚಿರುವ ಕೆಲಸದ ಸ್ಥಳಗಳಲ್ಲಿ, ನಿರ್ಮಾಣದ ಸಮಯದಲ್ಲಿ ಕಟ್ಟಿಕೊಂಡಿದ್ದ ತಾತ್ಕಾಲಿಕ ಮನೆಗಳಲ್ಲಿ ಹೇಗೆ ಉಳಿಯುತ್ತಾರೆ? ಅಥವಾ ಈಗ ಅವರೆಲ್ಲಾ ಮನೆಗೆ ಹಿಂತಿರುಗಿ ಹೋಗಬೇಕಾ? ಈಗ ರೈಲುಗಳು ಬೇರೆ ಸಂಚರಿಸುತ್ತಿಲ್ಲ. ನೂರಾರು ಜನ ದೆಹಲಿಯಿಂದ ಬಿಹಾರಿಗೆ ನಡೆದುಕೊಂಡೇ ಹೋಗುತ್ತಿದ್ದಾರೆ ಅಂತ ಹೇಳುತ್ತಿದ್ದಾರೆ. ಅವರೆಲ್ಲಾ ದಾರಿಯಲ್ಲಿ ರಾತ್ರಿಯ ಹೊತ್ತು ಎಲ್ಲೋ ಗೊತ್ತಿಲ್ಲದ ಪುಟ್ಟ ಅನಧಿಕೃತ ಜಾಗದಲ್ಲಿ, ಇಕ್ಕಟ್ಟಿನಲ್ಲಿ ಮಲಗುತ್ತಾರೆ. ಆಗ ಅವರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುತ್ತಾರೆ ಅಂತ ಭಾವಿಸಿಕೊಳ್ಳಬೇಕಾ? ದೆಹಲಿಯಿಂದ ಧರ್ಭಂಗಾಕ್ಕೆ ೨೫ ಚದುರ ಅಡಿ ಜಾಗವಿರುವ ಟ್ರಕ್ಕಿನಲ್ಲಿ ೨೫ಜನ ಕುಳಿತುಕೊಂಡು ಹೋಗುವ ಬದಲು ನಡೆದುಕೊಂಡು ಹೋದರಲ್ಲಾ ಎಂದು ಅವರನ್ನು ದೂಷಿಸಬೇಕಾ?

ಮುಂಬೈನಲ್ಲಿ ಬಿಸಿಲು ಈಗಾಗಲೇ ೩೦ ಡಿಗ್ರಿ ದಾಟಿದೆ, ಇನ್ನೂ ಏರುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಈಗ ಅವರಿರುವ ಹತ್ತು ಅಡಿ ಅಗಲದ ಟಿನ್ ಗೂಡಿನಲ್ಲಿ ೬ ಜನ ಒಟ್ಟೊಟ್ಟಿಗೆ ಮಲಗುವುದಕ್ಕೆ ಸಾಧ್ಯವೇ? ಅಷ್ಟರಲ್ಲೇ ಅವರು ಅಡುಗೆ ಮಾಡಿಕೊಳ್ಳಬೇಕು, ಅಲ್ಲೇ ಮಲಗಬೇಕು? ಸಂಜೆ ತಂಪಾದ ಮೇಲೆ ಹತ್ತಿರದ ಪಾರ್ಕಿಗೆ ಹೋಗುವ ಅವಕಾಶವೂ ಇಲ್ಲ, ಅಥವಾ ಫೋನ್ ಬಂದಾಗ ಹತ್ತಿರವಿರುವ ಮರದ ನೆರಳಿನಲ್ಲಿ ನಿಂತು ಮಾತನಾಡುತ್ತಿದ್ದ ಸುಖವೂ ಇಲ್ಲದಿರುವ ಈ ಹೊತ್ತಿನಲ್ಲಿ ಮುಂಬಯಿನಲ್ಲಿ ಧಾರವಿಯ ನಿವಾಸಿಗಳು ಊರಿಗೆ ಹೋಗಬೇಕೆಂದುಕೊಂಡರೆ ತಪ್ಪಾ?

ಇಟ್ಟುಕೊಂಡಿರುವ ಅಲ್ಪಸ್ವಲ್ಪ ಹಣ ಖಾಲಿಯಾದಾಗ ಏನು ಮಾಡುವುದು? ಬಹುಪಾಲು ಭಾರತೀಯರಿಗೆ ಕೆಲಸವಿಲ್ಲದೇ ಹೋದಾಗ ಖಾತರಿಯಾದ ವರಮಾನವಿರುವುದಿಲ್ಲ. ಉಳಿಸಿದ್ದೆಲ್ಲಾ ಖಾಲಿಯಾಗಿಬಿಟ್ಟಾಗಿ ಅವರು ಏನು ಮಾಡಬೇಕು? ಮನೆಯವರಿಗೆ ಊಟದ ಖರ್ಚಿಗಾಗೆ ಒಂದಿಷ್ಟು ಹಣ ಹುಡುಕಿಕೊಂಡು ಮನೆಯಿಂದಾಚೆಗೆ ಹೋದರೆ ಯಾರನ್ನು ಬಯ್ಯೋಣ? ಆಗ ಕೇವಲ ಗೊಂದಲವಷ್ಟೇ ಸಾಧ್ಯ? ಕರ್ನಾಟಕದಲ್ಲಿ ನಡೆಸಿದ ಒಂದು ದಿಢೀರ್ ಸಮೀಕ್ಷೆಯಿಂದ ಖಾಯಿಲೆಯ ಬಗ್ಗೆ ಜನರಿಗೆ ಸಾಕಷ್ಟು ಮಾಹಿತಿ ಇದೆ ಅನ್ನೋದು ತಿಳಿಯಿತು. ಆದರೆ ಏನು ಮಾಡಬಾರದು ಅನ್ನುವುದರ ಬಗ್ಗೆ ಮಾತ್ರ ಒಂದೇ ರೀತಿಯ ತಿಳುವಳಿಕೆ ಇಲ್ಲ. ಇದರರ್ಥ ಈಗ ಅನುಸರಿಸುತ್ತಿರುವ ಕ್ರಮ ತಪ್ಪು ಅಂತಲ್ಲ. ಆದರೆ ಈ ಕ್ರಮಗಳು ಪರಿಪೂರ್ಣವಾಗಿ ಅಥವಾ ಸರಿಯಾಗಿ ಜಾರಿಯಾಗದೇ ಇರಬಹುದು ಅಂತ ಅಷ್ಟೆ.

ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಏನಗಬಹುದು, ಅದಕ್ಕೆ ಯಾವ ಕ್ರಮ ತೆಗೆದುಕೊಳ್ಳಬಹುದು ಎನ್ನುವುದಕ್ಕೆ ಸಂಬಂಧಿಸಿದಂತೆ ಆಚರಣೆಯಲ್ಲಿ ಕೆಲವು ಸಮಸ್ಯೆಗಳಿವೆ. ಅದರಿಂದ ಹಲವು ಪ್ರಮುಖ ಪರಿಣಾಮಗಳಾಗುತ್ತವೆ.

ಮೊದಲನೆಯದಾಗಿ ಲಾಕ್‌ಡೌನ್ ಪರಿಣಾಮಕಾರಿಯಾದರೂ ಮತ್ತು ಸೋಂಕಿನ ಏರಿಕೆಯ ರೇಖೆ ಸ್ಥಗಿತಗೊಂಡರೂ, ಖಾಯಿಲೆ ಹರಡುವುದು ನಿಂತರೂ, ಖಾಯಿಲೆ ತನ್ನ ಪರಿಧಿಯನ್ನು ವಿಸ್ತರಿಸುವುದು ನಿಲ್ಲುವುದಿಲ್ಲ. ಯಾಕೆಂದರೆ ನಮಗೆ ಗೊತ್ತಿಲ್ಲದ ಸೋಂಕಿಗೆ ಒಳಗಾದವರು ಇದ್ದಾರೆ. ಅವರು ಅದನ್ನು ಹೊಸಬರಿಗೆ ತಗಲಿಸುವ ಸಾಧ್ಯತೆ ಇದೆ. ಖಾಯಿಲೆ ಸುಮಾರು ಎರಡು ವಾರ ಸುಪ್ತವಾಗಿಯೇ (ಡಾರ್ಮೆಂಟ್) ಉಳಿದಿರಬಹುದೆಂಬ ಅಂದಾಜಿದೆ. ಖಾಯಿಲೆಯ ನೇರ ಸಂಪರ್ಕವಿರುವವರನ್ನು ಮಾತ್ರ ಪರೀಕ್ಷಿಸಲಾಗುತ್ತಿದೆ. ಅಗೋಚರ ವಾಹಕರನ್ನು ಗುರುತಿಸುವುದು ಸುಲಭವಲ್ಲ. ಹೀಗೆ ಅಗೋಚರವಾಗಿ ಉಳಿದಿರುವ ವಾಹಕರು ಹೆಚ್ಚಾಗಿಯೇ ಇರಬಹುದು. ದೆಹಲಿಯಿಂದ ಊರಿಗೆ ಬಂದವನಿಗೆ ಅದು ಇದೆ ಎಂದು ಗೊತ್ತಾಗುವ ಮೊದಲೇ ಮನೆಯವರಿಗೆಲ್ಲಾ ಹರಡಿಬಿಡಬಹುದು.


ಎರಡನೆಯದಾಗಿ ಕೆಲವು ಕಡೆಗಳಲ್ಲಿ ಒಮ್ಮೆ ಸೋಂಕು ಬಂದುಬಿಟ್ಟರೆ ಅದು ಹರಡುವುದನ್ನು ತಪ್ಪಿಸುವುದು ತುಂಬಾ ಕಷ್ಟವಾಗಬಹುದು. ಪರಿಣಾಮಕಾರಿಯಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದಾಗಲಿ, ಸಂಪೂರ್ಣ ಲಾಕ್‌ಡೌನ್ ಆಗಲಿ ಸಾಧಿಸುವುದು ಕಠಿಣವಾಗುತ್ತದೆ. ಉದಾಹರಣೆಗೆ ನಗರದಲ್ಲಿನ ಸ್ಲಮ್ಮುಗಳು.

ಮೂರನೆಯದಾಗಿ ಸೋಂಕು ಹಲವರಿಗೆ ತಗಲುವ ಮೊದಲೇ ಲಾಕ್‌ಡೌನ್ ಪ್ರಾರಂಭವಾಗಿರುವುದರಿಂದ ಹೆಚ್ಚು ಕಮ್ಮಿ ಯಾರಿಗೂ ಇಮ್ಯೂನಿಟಿ ಬೆಳೆದಿರುವ ಸಾಧ್ಯತೆ ಕಡಿಮೆ. ಅಂದರೆ ಮುಂದಿನ ಮೂರು ವಾರಗಳಲ್ಲಿ ಸೋಂಕನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡದೇ ಹೋದರೆ ಕರ್ಫ್ಯೂ ತೆಗೆದ ತಕ್ಷಣ ಸೋಂಕು ವೇಗವಾಗಿ ಹರಡುವ ಸಾಧ್ಯತೆ ಹೆಚ್ಚು. ಅಂದರೆ ಕರ್ಫ್ಯೂ ಉಪಯೋಗವಿಲ್ಲ ಅಂತ ಅರ್ಥವಲ್ಲ. ಇದರಿಂದ ಸರಿಯಾಗಿ ಯೋಜನೆ ಮಾಡಿಕೊಳ್ಳುವುದಕ್ಕೆ ಸಮಯಾಕಾಶ ಸಿಕ್ಕಿದೆ. ಮುಂದಿನ ಕೆಲವು ವಾರ ಸೋಂಕಿನ ಸಂಖ್ಯೆಯನ್ನು ಮಿತಗೊಳಿಸುವುದಕ್ಕೆ ಸಹಾಯವಾಗಿದೆ. ಆದರೆ ಸಮಸ್ಯೆ ೨೧ದಿನವೂ ನಮ್ಮೊಂದಿಗೇ ಇರುತ್ತದೆ. ಅದರಿಂದ ನಾವು ಮುಂದಿನ ಕೆಲತಿಂಗಳಲ್ಲಿ ದೂರದ ಗ್ರಾಮೀಣ ಪ್ರದೇಶಗಳು ಸೇರಿದಂತೆ ದೇಶದ ಎಲ್ಲಾ ಕಡೆಗಳಲ್ಲಿ ಸೊಂಕು ಸ್ಪೋಟಗೊಳ್ಳುವ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಿರಬೇಕು. ಅದಕ್ಕಿಂತ ಹೆಚ್ಚಾಗಿ ಸೋಂಕು ಹರಡುವ ಸಾಧ್ಯತೆ ಇರುವ ಈ ಅಪಾಯಕಾರಿ ಪ್ರದೇಶಗಳೆಲ್ಲವೂ ಆರೋಗ್ಯ ವ್ಯವಸ್ಥೆ ತುಂಬಾ ದುರ್ಬಲವಾಗಿರುವ ಪ್ರದೇಶಗಳು. ಚೀನಾಗೆ ಹೋಲಿಸಿದರೆ ನಮ್ಮಲ್ಲಿ ಸರಾಸರಿ ತಲಾ ೧/೮ ಆಸ್ಪತ್ರೆಗಳಿವೆ. ಅದೇ ತುಂಬಾ ಆತಂಕಕಾರಿಯಾಗಿರುವ ವಿಷಯ. ಆದರೆ ಈ ಆರೋಗ್ಯ ಕೇಂದ್ರಗಳು ಕೂಡ ಮುಂದುವರಿದ ಪ್ರದೇಶಗಳಲ್ಲೇ ಕೇಂದೀಕೃತವಾಗಿವೆ.
ಭಾರತದಲ್ಲಿ ಇಂದಿಗೂ ಹೆಚ್ಚಿನಂಶ ಸೂಕ್ತ ವೈದ್ಯಕೀಯ ಶಿಕ್ಷಣವಿಲ್ಲದ ವೈದ್ಯರೇ ದಿನನಿತ್ಯದ ಆರೋಗ್ಯ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ. ಅವರಿಗೆ ಕನಿಷ್ಠ ಕೆಲವು ಪರಿಚಿತ ಖಾಯಿಲೆಗಳಿಗೆ ಏನು ಮಾಡಬೇಕೆಂಬುದು ಗೊತ್ತಿದೆ. ಕೋವಿಡ್-೧೯ ಇರುವ ರೋಗಿಗಳು ಅವರ ಬಳಿಗೆ ಹೋಗುತ್ತಾರೆ. ಅವರಿಗೆ ಅದನ್ನು ಗುರುತಿಸುವುದಕ್ಕೇ ಆಗಲಿ ಅಥವಾ ಅದಕ್ಕೆ ಚಿಕಿತ್ಸೆಯಾಗಲೀ ಗೊತ್ತಿರುವುದಿಲ್ಲ. ಕೊನೆಗೆ ಅವರು ಆಸ್ಪತ್ರೆಗಳಿಗೆ ಹೋಗುತ್ತಾರೆ. ಹೋಗುವಾಗ ದಾರಿಯಲ್ಲಿ ಹಲವರಿಗೆ ಖಾಯಿಲೆ ಹರಡಿರುತ್ತಾರೆ.

ದುರಂತವನ್ನು ತಪ್ಪಿಸುವುದಕ್ಕೆ ಏನು ಮಾಡಬಹುದು?
ಮೊದಲನೆಯದಾಗಿ ಕುಟುಂಬದಲ್ಲಿ ಒಬ್ಬನಿಗಾದರೂ ಖಾಯಿಲೆಯ ಲಕ್ಷಣಗಳು ಗೊತ್ತಿರುವಂತೆ ನೋಡಿಕೊಳ್ಳಬೇಕು. ಎಲ್ಲಾ ರೀತಿಯ ಕ್ರಮಗಳನ್ನೂ, ಎಚ್ಚರಿಕೆಗಳನ್ನೂ ತೆಗೆದುಕೊಂಡರೂ ಕೆಲವರಿಗೆ ಸೋಂಕು ತಗುಲಬಹುದು ಎಂಬ ತಿಳುವಳಿಕೆ ಎಲ್ಲರಲ್ಲೂ ಮೂಡಬೇಕು. ಅವರನ್ನು ಹೊರಗಿಡುವುದಾಗಲಿ, ಮುಚ್ಚಿಡುವುದಾಗಲಿ ಆಗಬಾರದು. ಈಗ ಮುಖ್ಯವಾಗಿ ಬೇಕಾಗಿರುವುದು ನಿಷ್ಠಾವಂತ ವರದಿ.

ಮೂರನೆಯದಾಗಿ ವರದಿ ಮಾಡುವುದಕ್ಕೆ ವಿಭಿನ್ನ ದಾರಿಗಳು ಇರಬೇಕು. ಉದಾಹರಣೆಗೆ ಹಾಟ್‌ಲೈನ್, ಆಶಾ ಹೀಗೆ ಹಲವು ದಾರಿಗಳನ್ನು ಕಂಡುಕೊಳ್ಳಬೇಕು.

ನಾಲ್ಕನೆಯದಾಗಿ, ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಎಲ್ಲರಿಗೂ ರೋಗಲಕ್ಷಣ ಗುರುತಿಸುವುದಕ್ಕೆ ತರಬೇತಿ ನೀಡಬೇಕು. ಮತ್ತು ಸೋಂಕಿನ ಸೂಚನೆಗಳು ಕಂಡೊಡನೆ ಅವರು ಸೂಕ್ತ ಅಧಿಕಾರಿಗಳಿಗೆ ವರದಿ ಮಾಡಬೇಕು.


ಐದನೆಯದಾಗಿ, ಹಾಗೆ ವರದಿಯಾದ ಪ್ರಕರಣಗಳನ್ನು ತಕ್ಷಣ ಕ್ರೋಢೀಕರಿಸಬೇಕು. ಆಗ ನಮಗೆ ಹೊಸ ಆಪಾಯಕಾರಿ ಸ್ಥಳಗಳು ಯಾವುವು ಎಂಬುದು ತಿಳಿಯುತ್ತದೆ. ದೇಶಾದ್ಯಂತ ದೊರೆತ ಅಂತಹ ಪುರಾವೆಗಳನ್ನು ಕ್ರೋಢೀಕರಿಸಿದಾಗ ಒಟ್ಟಾರೆ ಸೋಂಕು ಯಾವ ಹಾದಿಯಲ್ಲಿ ಸಾಗುತ್ತಿದೆ ಎಂಬುದು ತಿಳಿಯುತ್ತದೆ.

ಆರನೆಯದಾಗಿ, ಪ್ರತಿ ರಾಜ್ಯದಲ್ಲೂ ಆರೋಗ್ಯ ವೃತ್ತಿನಿರತರ, ವೈದ್ಯರ ಹಾಗೂ ನರ್ಸುಗಳ ಒಂದು ತಂಡವನ್ನು ಕಟ್ಟಬೇಕು. ಪ್ರತಿಯೊಂದು ತಂಡದಲ್ಲೂ ಸಾಕಷ್ಟು ಪರೀಕ್ಷೆಯ ಕಿಟ್ಟುಗಳು, ಸಾಧ್ಯವಾದರೆ ವೆಂಟಿಲೇಟರುಗಳು ಮತ್ತು ಇತರ ಉಪಕರಣಗಳು ಇರಬೇಕು. ಇದರ ಉದ್ದೇಶವೆಂದರೆ ಪಕ್ಕದ ಪ್ರದೇಶಗಳು ಮತ್ತು ರಾಜ್ಯಗಳು ಸೇರಿದಂತೆ ಎಲ್ಲಿ ಸೋಂಕು ಹೆಚ್ಚು ವೇಗವಾಗಿ ಹರಡುತ್ತಿದೆ ಎಂಬ ವರದಿ ಬರುತ್ತದೆಯೋ ಅಲ್ಲೆಲ್ಲಾ ತಕ್ಷಣ ಈ ತಂಡದ ಒಂದು ಭಾಗವನ್ನು ಕಳಿಸಿಕೊಡುವುದಕ್ಕೆ ನೇಮಿಸುವುದಕ್ಕೆ ಸಾಧ್ಯವಾಗಬೇಕು. ಈಗಿನ ಲಾಕ್‌ಡೌನ್ ಯಶಸ್ವಿಯಾದರೆ, ಒಂದು ದೊಡ್ಡ ದುರಂತ ಸಂಭವಿಸದೇ ಹೋಗಬಹುದು. ಅದರ ಬದಲು ಬೇರೆ ಬೇರೆ ಸಮಯದಲ್ಲಿ ಸಣ್ಣ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಳ್ಳಬಹುದು. ಈ ಸಾಧ್ಯತೆ ತುಂಬಾ ಹೆಚ್ಚು. ಈ ಸಮಯದಲ್ಲಿ ಒಂದೇ ತಂಡವನ್ನು ವಿಭಿನ್ನ ಸ್ಥಳಗಳಲ್ಲಿ ಬಳಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಏಳನೆಯದಾಗಿ, ಇಂತಹ ಒಂದು ತಂಡವನ್ನು ಕಟ್ಟುವುದಕ್ಕೆ, ಮತ್ತು ಅದರಲ್ಲಿ ಎಲ್ಲಾ ಅವಶ್ಯಕ ಸಾಧನಗಳನ್ನು ಇರುವಂತೆ ವ್ಯವಸ್ಥೆ ಮಾಡುವುದಕ್ಕೆ ಸಾಧ್ಯವಾಗಬೇಕಾದರೆ ಎಲ್ಲಾ ಆರೋಗ್ಯ ವೃತ್ತಿನಿರತರನ್ನು ಸೇರಿಸಿಕೊಳ್ಳಬೇಕು. ಕೇವಲ ಸರ್ಕಾರದ ಸೇವೆಯಲ್ಲಿ ಇರುವವರು ಮಾತ್ರವಲ್ಲ. ಅವಶ್ಯಕತೆಗೆ ತಕ್ಕಂತೆ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳನ್ನು ಬಳಸಿಕೊಳ್ಳುವ ಹಕ್ಕು ಆ ತಂಡಕ್ಕೆ ಇರಬೇಕು.

ಎಂಟನೆಯದಾಗಿ, ಸಾಮಾಜಿಕ ವರ್ಗಾವಣೆ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಹೆಚ್ಚೆಚ್ಚು ಧೈರ್ಯ ತೋರಬೇಕು. ಇಲ್ಲದೇ ಹೋದರೆ ಬೇಡಿಕೆಯ ಬಿಕ್ಕಟ್ಟು ಒಂದು ದೊಡ್ಡ ಆರ್ಥಿಕ ಪ್ರಪಾತಕ್ಕೆ ನಮ್ಮನ್ನು ತಳ್ಳುತ್ತದೆ. ಆಗ ಜನರಿಗೆ ಆಜ್ಞೆಗಳನ್ನು ಮೀರುವುದನ್ನು ಬಿಟ್ಟು ಬೇರೆ ದಾರಿಯೇ ಉಳಿಯುವುದಿಲ್ಲ. ಈಗ ಸರ್ಕಾರ ನೀಡುತ್ತಿರುವ ಧನಸಹಾಯ ತೀರಾ ಕಡಿಮೆ. ಹೆಚ್ಚೆಂದರೆ ಕೆಲವು ಸಾವಿರ ರೂಪಾಯಿಗಳು. ಆ ಜನ ಈಗಾಗಲೇ ಅದಕ್ಕಿಂತ ಹೆಚ್ಚನ್ನು ಕೆಲವೇ ದಿನಗಳಲ್ಲಿ ಖರ್ಚು ಮಾಡಿದ್ದಾರೆ. ಅವರು ಕೆಲಸಕ್ಕೆ ಹೊರಗೆ ಹೋಗದಂತೆ ಮಾಡಲು ಮತ್ತು ಆ ಮೂಲಕ ಖಾಯಿಲೆ ಹರಡುವುದನ್ನು ತಪ್ಪಿಸಬೇಕಾದರೆ ಬಹುಶಃ ಅವರಿಗೆ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ.

ಜೊತೆಗೆ ಯೋಜನೆಗಳಿಗೆ ಸಂಬಂದಿಸಿದಂತೆ ಹಲವು ಗೊಂದಲಗಳಿವೆ (ರೈತರು ಅಂದರೆ ಯಾರು?), ಬಿಸಿನೆಸ್ ಆಸ್ ಯೂಷುವಲ್ ಯೋಜನೆಗೆ, ಅರ್ಹತೆಗೆ ಸಂಬಂದಿಸಿದಂತೆ ಹಲವು ಸಮಸ್ಯೆಗಳಿವೆ. ಯೋಜನೆಗಳನ್ನು ಕೆಲವರಿಗಷ್ಟೇ ಸೀಮಿತಗೊಳಿಸದೆ ಸಾರ್ವತ್ರಿಕವಾಗಿ ಎಲ್ಲರಿಗೂ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು. ದುರುಪಯೋಗ ಆಗುವುದನ್ನು ತಪ್ಪಿಸಬೇಕು. (ಹಾಗೆ ಅನುಕೂಲ ಪಡೆದುಕೊಂಡವರ ಪಟ್ಟಿಯನ್ನು ಪ್ರಕಟಿಸಬೇಕು. ಆಗ ಫಲಾನುಭವಿಗಳು ಯಾರು ಎಂದು ಎಲ್ಲರಿಗೂ ತಿಳಿಯುತ್ತದೆ.). ಸರ್ಕಾರ ಹೆಮ್ಮೆ ಪಡುವ ಜಾಮ್ (ಜನ್ ಧನ್, ಆಧಾರ್, ಮೊಬೈಲ್) ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕೆ ಇದು ಖಂಡಿತವಾಗಿಯೂ ಸಕಾಲ. ನಗದನ್ನು ನೇರವಾಗಿ ಜನರ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು. ಅದರ ಮಾಹಿತಿ ಪಡೆದವರಿಗೆ ತಲುಪಬೇಕು.

ಅಂತಿಮವಾಗಿ ಈ ಸಮರದ ಪ್ರಯತ್ನವನ್ನು ಸೂಕ್ತವಾದ ಒಂದು ವ್ಯಾಕ್ಸಿನ್ ದೊರೆಯುವ ತನಕ ಮುಂದುವರಿಸಲು ತಯಾರಿರಬೇಕು. ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಉತ್ತಮಗೊಳಿಸುವುದಕ್ಕೆ ಪ್ರಾರಂಭಿಸೋಣ. ಆಗ ಮುಂದಿನ ಸಲ ಇದನ್ನು ಎದುರಿಸುವುದಕ್ಕೆ ಹೆಚ್ಚು ಸಿದ್ಧರಿರುತ್ತೇವೆ.

ಮೂಲ : ಇಂಡಿಯನ್ ಎಕ್ಸ್‌ಪ್ರೆಸ್

ಕನ್ನಡಕ್ಕೆ : ಟಿ. ಎಸ್. ವೇಣುಗೋಪಾಲ್

ಪ್ರತಿಕ್ರಿಯಿಸಿ