ಆಂಡರ್ಸ್ ಟೆಗನೆಲ್ ಸಂದರ್ಶನ : ಗಡಿಗಳನ್ನು ಮುಚ್ಚುವುದು ಹಾಸ್ಯಾಸ್ಪದ

ಕೊರೋನಾ ನಿಯಂತ್ರಿಸುವುದಕ್ಕೆ ಹಲವು ದೇಶಗಳು ಹಲವು ದಾರಿಗಳನ್ನು ಹಿಡಿದಿರುವುದನ್ನು ನೋಡಬಹುದು. ಯಾವುದು ಸರಿಯೋ ಗೊತ್ತಿಲ್ಲ. ವಿಭಿನ್ನ ಹಾದಿಗಳನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ಸ್ವೀಡನ್ ಹಾದಿಯನ್ನು ಅಲ್ಲಿಯ ಕಾರ್ಯತಂತ್ರದ ಹಿಂದಿರುವ ಸಾಂಕ್ರಮಿಕ ರೋಗ ತಜ್ಞ ಆಂಡರ‍್ಸ ಟೆಗನೆಲ್ ಅವರು ನೇಚರ್ ಪತ್ರಿಕೆಗೆ ನೀಡಿದ ಸಂದರ್ಶನವನ್ನು ಕನ್ನಡದಲ್ಲಿ ಪೋಸ್ಟ್ ಮಾಡುತ್ತಿದ್ದೇವೆ.

ಕಳೆದ ತಿಂಗಳು ಕೊರೋನಾ ಮಹಾಮಾರಿಯ ಓಟವನ್ನು ನಿಯಂತ್ರಿಸಲು ಯುರೋಪಿನ ಹೆಚ್ಚಿನ ದೇಶಗಳು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದೇ ಮೊದಲಾದ ಕ್ರಮಗಳನ್ನು ತುಂಬಾ ಕಟ್ಟುನಿಟ್ಟಾಗಿ ಜಾರಿಗೆ ತಂದವು. ಆದರೆ ಸ್ವೀಡನ್ ಮಾತ್ರ ಹಾಗೆ ಮಾಡಲಿಲ್ಲ. ಅದು ಲಾಕ್‌ಡೌನ್ ಕೂಡ ಮಾಡಲಿಲ್ಲ ಅಥವಾ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತಹ ಕ್ರಮಗಳನ್ನೂ ಜಾರಿಗೆ ತರಲಿಲ್ಲ. ಬದಲಾಗಿ ಅದು ನಂಬಿಕೆ ಮತ್ತು ವಿಶ್ವಾಸವನ್ನು ಆಧರಿಸಿದ ಹೊಸ ಕ್ರಮವೊಂದನ್ನು ಜಾರಿಗೆ ತಂದಿತು. ತನ್ನ ಪ್ರಜೆಗಳಲ್ಲಿ ನಂಬಿಯಿಟ್ಟು, ಸ್ವಂತ ಇಚ್ಛೆಯಿಂದ ಕೆಲವು ಕ್ರಮಗಳನ್ನು ಅನುಸರಿಸಿ ಎಂದು ಅವರಿಗೆ ಹೇಳಿತು. ಅವರಿಗೆ ಕೆಲವು ಸಲಹೆಗಳನ್ನು ನೀಡಿತು. ಮುಖ್ಯವಾಗಿ ವೃದ್ಧರಿಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ, ಮನೆಯಲ್ಲೇ ಇರಿ ಎಂದು ಹೇಳಿತು. ಉಳಿದವರಿಗೆ ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ಮಾಡಿ, ನಿಯಮಿತವಾಗಿ ಕೈತೊಳೆದುಕೊಳ್ಳಿ ಮತ್ತು ಅನಾವಶ್ಯಕವಾಗಿ ಪ್ರಯಾಣ ಮಾಡಬೇಡಿ ಎಂದು ಹೇಳಿತು. ದೇಶದ ಗಡಿಗಳನ್ನು ತೆರೆದೇ ಇಟ್ಟಿತ್ತು. ೧೬ ವರ್ಷದ ಒಳಗಿನವರಿಗೆ ಶಾಲೆಗಳನ್ನು ನಡೆಸುತ್ತಿತ್ತು. ಬಾರ್, ಹೋಟೆಲ್ಲುಗಳೂ ಸೇರಿದಂತೆ ಹಲವು ವಾಣಿಜ್ಯ ವಹಿವಾಟುಗಳನ್ನು ತೆರೆದೇ ಇಟ್ಟಿತ್ತು.

ಈ ಕಾರ್ಯತಂತ್ರವನ್ನು ಹಲವರು ತುಂಬಾ ಕಟುವಾಗಿ ಟೀಕಿಸಿದರು. ಪ್ರಖ್ಯಾತ ೨೨ ಜನ ವಿಜ್ಞಾನಿಗಳೂ ಸ್ವೀಡನ್ನಿನ Dagens Nyheter ಎಂಬ ಪತ್ರಿಕೆಯಲ್ಲಿ ಇದನ್ನು ಟೀಕಿಸಿ ಒಂದು ಲೇಖನವನ್ನು ಬರೆದರು. ವೃದ್ಧಾಶ್ರಮಗಳಲ್ಲಿ ಕೊರೋನಾ ಮಹಾಮಾರಿಯಿಂದ ತುಂಬಾ ಮಂದಿ ತೀರಿಹೋಗಿದ್ದಾರೆ. ಸ್ವೀಡನ್ನಿನಲ್ಲಿ ಒಟ್ಟಾರೆ ಸಾವಿನ ಪ್ರಮಾಣ ಅದರ ನೆರೆಹೊರೆಯ ನಾರ್ಡಿಕ್ ದೇಶಗಳಿಗಿಂತ ಜಾಸ್ತಿ ಇದೆ. ಲಾಕ್‌ಡೌನ್ ಜಾರಿಗೊಳಿಸಿದ್ದ ಡೆನ್ಮಾರ್ಕಿನಲ್ಲಿ ಪ್ರತಿ ಮಿಲಿಯನ್ನಿಗೆ ೫೫ ಮಂದಿ ಮತ್ತು ಫಿನ್‌ಲ್ಯಾಂಡಿನಲ್ಲಿ ಪ್ರತಿ ಮಿಲಿಯನ್ನಿಗೆ ೧೪ ಮಂದಿ ಸತ್ತಿದ್ದರೆ, ಸ್ವೀಡನ್ನಿನಲ್ಲಿ ಪ್ರತಿ ಮಿಲಿಯನ್ನಿಗೆ ೧೩೧ ಮಂದಿ ಮರಣ ಹೊಂದಿದ್ದಾರೆ. ಸ್ವೀಡನ್ನಿನ ಸಾರ್ವಜನಿಕ ಆರೋಗ್ಯ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಬರೆದರು. ಅಷ್ಟೇ ಅಲ್ಲ ಕಠಿಣವಾದ ಕ್ರಮಗಳನ್ನು ಜಾರಿಗೊಳಿಸುವಂತೆ ರಾಜಕಾರಣಿಗಳನ್ನು ಒತ್ತಾಯಿಸಿದರು.

ಸ್ವೀಡನ್ನಿನ ಕಾರ್ಯಸೂಚಿಯನ್ನು ರೂಪಿಸಿದ್ದು ಆಂಡರ‍ಸ್ ಟೆಗ್‌ನೆಲ್. ಅವರು ಸ್ವೀಡನ್ನಿನ ಪಬ್ಲಿಕ್ ಹೆಲ್ತ್ ಏಜನ್ಸಿಯಲ್ಲಿ ಸಾಂಕ್ರಾಮಿಕ ರೋಗತಜ್ಞರು. ಅದೊಂದು ಸ್ವತಂತ್ರವಾದ ಸಂಸ್ಥೆ. ಅದು ನೀಡುವ ತಜ್ಞ ಸಲಹೆಗಳನ್ನು ಸರ್ಕಾರ ಪಾಲಿಸುತ್ತದೆ. ಈ ಕಾರ್ಯಸೂಚಿಯನ್ನು ಕುರಿತು ಆಂಡರ‍್ಸ್ ಟೆಗ್‌ನೆಲ್ ನೇಚರ್ ಪತ್ರಿಕೆಯೊಂದಿಗೆ ಮಾತನಾಡಿದರು.

ಕೊರೋನಾ ವೈರಸ್ ನಿಯಂತ್ರಿಸಲು ಸ್ವೀಡನ್ ಕೈಗೊಂಡಿರುವ ಕ್ರಮವನ್ನು ಕುರಿತು ವಿವರಿಸುವಿರಾ?

ಈ ಕಾರ್ಯಸೂಚಿಯ ವಿಶಿಷ್ಟತೆಯ ಬಗ್ಗೆ ಬೇಕಾದ್ದಕ್ಕಿಂತ ಸ್ವಲ್ಪ ಜಾಸ್ತಿಯೇ ಹೇಳಲಾಗಿದೆ. ಉಳಿದೆಲ್ಲಾ ದೇಶಗಳಂತೆ ನಮ್ಮ ಗುರಿಯೂ ಕೊರೋನಾ ಹರಡುವುದನ್ನು ಎಷ್ಟು ಸಾಧ್ಯವೋ ಅಷ್ಟು ಮಂದಗೊಳಿಸಿ, ಕೊರೋನಾ ರೇಖೆಯನ್ನು ಸಪಾಟುಗೊಳಿಸುವುದೇ ಆಗಿದೆ. ಹಾಗೆ ಮಾಡದಿದ್ದಲ್ಲಿ ಸಮಾಜ ಮತ್ತು ಆರೋಗ್ಯ ವ್ಯವಸ್ಥೆ ಎರಡೂ ನೆಲಕಚ್ಚಿಬಿಡುತ್ತದೆ.
ಒಂದು ಸೂಕ್ತವಾದ ಲಸಿಕೆಯನ್ನು ಕಂಡುಹಿಡಿಯುವ ತನಕ ಈ ಖಾಯಿಲೆಯನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡುವುದಕ್ಕೆ ಅಥವಾ ಸ್ಥಗಿತಗೊಳಿಸುವುದಕ್ಕೆ ಸಾಧ್ಯವಿಲ್ಲ. ಸೋಂಕಿನ ಹರಡುವಿಕೆಯನ್ನು ಒಂದು ಸುಮಾರಾದ ಮಟ್ಟದಲ್ಲಿ ಇಟ್ಟುಕೊಳ್ಳಲು ನಾವು ದೀರ್ಘಕಾಲೀನವಾದ ಪರಿಹಾರಗಳನ್ನು ಹುಡುಕಿಕೊಳ್ಳಬೇಕು. ಪ್ರತಿಯೊಂದು ದೇಶವೂ ಜನರನ್ನು ಪ್ರತ್ಯೇಕವಾಗಿ ಇರಿಸುವುದಕ್ಕೆ ಪ್ರಯತ್ನಿಸುತ್ತಿದೆ. ನಾವು ಇದನ್ನು ನಮ್ಮಲ್ಲಿ ಇರುವ ಕ್ರಮಗಳನ್ನು, ನಮ್ಮ ಸಂಪ್ರದಾಯಗಳನ್ನು ಬಳಸಿಕೊಂಡು ಸಾಧಿಸಬೇಕು. ಹಾಗಾಗಿಯೇ ನಾವು ಸ್ವಲ್ಪ ಭಿನ್ನವಾದ ಕ್ರಮಗಳನ್ನು ಅನುಸರಿಸಬೇಕಾಯಿತು.
ಸ್ವೀಡನ್ನಿನಲ್ಲಿ ಸಾಂಕ್ರಮಿಕರೋಗಗಳಿಗೆ ಸಂಬಂಧಿಸಿದ ಕಾನೂನುಗಳು ಹೆಚ್ಚಾಗಿ ಸ್ವಯಂಪ್ರೇರಿತ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸುತ್ತವೆ. ಇಲ್ಲಿ ಅದು ಜನರ ವೈಯಕ್ತಿಕ ಹೊಣೆಗಾರಿಕೆಯಾಗಿರುತ್ತದೆ. ಖಾಯಿಲೆಯನ್ನು ಹರಡದಂತೆ ನೋಡಿಕೊಳ್ಳುವುದು ಪ್ರತಿ ನಾಗರಿಕನ ಜವಾಬ್ದಾರಿ ಎಂದು ಅದು ಸ್ಪಷ್ಟವಾಗಿ ಹೇಳುತ್ತದೆ. ನಮಗೆ ಅದೇ ಆಧಾರ. ಇಡೀ ಸ್ವೀಡನನ್ನು ಬಂದು ಮಾಡುವುದಕ್ಕೆ ಈಗಿರುವ ಸ್ವೀಡನ್ನಿನ ಕಾನೂನುನಿನಲ್ಲಿ ಹೆಚ್ಚಿನ ಅವಕಾಶವಿಲ್ಲ. ಕೆಲವು ಜನರನ್ನು ಅಥವಾ ಕೆಲವು ಸಣ್ಣ ಪ್ರದೇಶಗಳನ್ನು ಮಾತ್ರ ಪ್ರತ್ಯೇಕಿಸಬಹುದು. ಉದಾಹರಣೆಗೆ ಬೇಕಾದರೆ ಒಂದು ಸ್ಕೂಲನ್ನೋ ಅಥವಾ ಒಂದು ಹೋಟೆಲ್ಲನ್ನೋ ನೀವು ಬಂದ್ ಮಾಡಬಹುದು. ಆದರೆ ಒಂದು ಇಡೀ ಭೌಗೋಳಿಕ ಪ್ರದೇಶವನ್ನೇ ಲಾಕ್‌ಡೌನ್ ಮಾಡುವುದಕ್ಕೆ ಅದರಲ್ಲಿ ಅವಕಾಶವಿಲ್ಲ.

ನೀವು ಅನುಸರಿಸುತ್ತಿರುವ ಕ್ರಮಕ್ಕೆ ಯಾವ ಪುರಾವೆ ಇದೆ?

ಇಂತಹ ಖಾಯಿಲೆಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕ ಆಧಾರವನ್ನು ಕುರಿತು ಮಾತನಾಡುವುದು ಕಷ್ಟ. ಏಕೆಂದರೆ ನಮಗೆ ಈ ವೈರಾಣುವಿನ ಬಗ್ಗೆ ಹೆಚ್ಚಿಗೆ ಏನೂ ತಿಳಿದಿಲ್ಲ. ದಿನ ಕಳೆದಂತೆ ಸ್ವಲ್ಪ ಸ್ವಲ್ಪ ಅರ್ಥ ಆಗುತ್ತಿದೆ. ನನ್ನ ದೃಷ್ಟಿಯಲ್ಲಿ ಸಂಪೂರ್ಣ ಬಂದ್ ಮಾಡುವುದು, ಲಾಕ್‌ಡೌನ್ ಮಾಡುವುದು, ಗಡಿಗಳನ್ನು ಮುಚ್ಚುವುದು ಈ ಕ್ರಮಗಳಿಗೆ ಯಾವುದೇ ಚಾರಿತ್ರಿಕ ವೈಜ್ಞಾನಿಕ ತಳಹದಿ ಇಲ್ಲ. ಐರೋಪ್ಯ ಒಕ್ಕೂಟದ ದೇಶಗಳು ಈ ಕ್ರಮಗಳನ್ನು ಜಾರಿಗೊಳಿಸುವ ಮೊದಲು ಅವುಗಳ ಪರಿಣಾಮವನ್ನು ಕುರಿತಂತೆ ಏನಾದರೂ ವಿಶ್ಲೇಷಣೆಗಳನ್ನು ನಡೆಸಿವೆಯಾ ಎಂದು ಹುಡುಕಿದೆವು. ಅಂತಹ ಯಾವ ಅಧ್ಯಯನವೂ ನಮಗೆ ಸಿಗಲಿಲ್ಲ.
ಗಡಿಗಳನ್ನು ಮುಚ್ಚುವುದು ನನ್ನ ದೃಷ್ಟಿಯಲ್ಲಿ ಹಾಸ್ಯಾಸ್ಪದ. ಏಕೆಂದರೆ ಈಗ ಕೋವಿಡ್-೧೯ ಯುರೋಪಿನ ಎಲ್ಲಾ ದೇಶದಲ್ಲಿಯೂ ಇದೆ. ಈಗ ನಮ್ಮ ಕಾಳಜಿಯೆಲ್ಲಾ ಸ್ವೀಡನ್ನಿನ ಒಳಗಿನ ಪರಿಸ್ಥಿತಿಯನ್ನು ಕುರಿತಂತೆ ಮಾತ್ರ.
ಜನಗಳ ಮನವೊಲಿಸುವ ಕಡೆ ಹೆಚ್ಚಿನ ಗಮನಕೊಡುತ್ತಿದ್ದೇವೆ. ಕ್ರಮಗಳನ್ನು ಅನುಸರಿಸುವಂತೆ ಅವರನ್ನು ನಿರಂತರವಾಗಿ ಕೇಳಿಕೊಳ್ಳುತ್ತಿದ್ದೇವೆ. ಜಾರಿಯಲ್ಲಿರುವ ಕ್ರಮಗಳು ಹೇಗೆ ಕೆಲಸ ಮಾಡುತ್ತಿವೆ ದಿನಾ ಗಮನಿಸುತ್ತಿದ್ದೇವೆ. ಯಾವುದನ್ನು ಸುಧಾರಿಸಬೇಕೋ ಅದನ್ನು ಸುಧಾರಿಸುತ್ತೇವೆ. ಎಲ್ಲವನ್ನೂ ಸಂಪೂರ್ಣವಾಗಿ ಲಾಕ್ ಡೌನ್ ಮಾಡುವ ಅವಶ್ಯಕತೆಯಿಲ್ಲ. ಏಕೆಂದರೆ ಅದರಿಂದ ಅನುಕೂಲಕ್ಕಿಂತ ತೊಂದರೆಯಾಗುವ ಸಾಧ್ಯತೆಯೇ ಹೆಚ್ಚು.

ಸ್ವೀಡನ್ನಿನ ಪಬ್ಲಿಕ್ ಹೆಲ್ತ್ ಏಜನ್ಸಿ ತೀರ್ಮಾನಗಳನ್ನು ಹೇಗೆ ತೆಗೆದುಕೊಳ್ಳುತ್ತದೆ?

ಪ್ರತಿದಿನ ಬೆಳಗ್ಗೆ ಏಜನ್ಸಿಯ ೧೫ ಮಂದಿ ಒಟ್ಟಿಗೆ ಸೇರುತ್ತೇವೆ. ಈಗಾಗಲೇ ಸಂಗ್ರಹಿಸಿರುವ ದತ್ತಾಂಶಗಳು ಮತ್ತು ವಿಶ್ಲೇಷಣೆಗಳನ್ನು ಆಧರಿಸಿ ನಮ್ಮ ತೀರ್ಮಾನಗಳನ್ನು ಪರಿಷ್ಕರಿಸುತ್ತೇವೆ. ವಾರಕ್ಕೆ ಎರಡು ಬಾರಿ ಪ್ರಾಂತೀಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ.
ಈಗ ಸದ್ಯಕ್ಕೆ ನಮ್ಮ ಮುಂದಿರುವ ಅತ್ಯಂತ ದೊಡ್ಡ ಸಮಸ್ಯೆ ವೃದ್ಧಾಶ್ರಮಗಳದ್ದು. ಅಲ್ಲಿ ಕೊರೋನಾ ಹರಡಿದ್ದು ತೀರಾ ದುರದೃಷ್ಟಕರ. ಅಕ್ಕಪಕ್ಕದ ಇತರ ದೇಶಗಳಿಗಿಂತ ಸ್ವೀಡನ್ನಿನ ಮರಣದರ ಹೆಚ್ಚಿರುವುದಕ್ಕೆ ಇದು ಕಾರಣ. ಆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಯಾಕೆಂದರೆ ಇಲ್ಲಿ ಯಾವ ಕ್ರಮಗಳನ್ನು ಅನುಸರಿಸಿಲ್ಲ, ಮತ್ತು ಯಾಕೆ ಎಂಬುದನ್ನು ತಿಳಿದುಕೊಳ್ಳಬೇಕು.

ಎಲ್ಲವನ್ನೂ ತುಂಬಾ ಸಲೀಸಾಗಿ ತೆಗೆದುಕೊಳ್ಳಲಾಗಿದೆ ಅಂತ ಈ ಕ್ರಮವನ್ನು ತುಂಬಾ ಟೀಕಿಸಲಾಗುತ್ತದೆ. ಈ ಟೀಕೆಗೆ ನಿಮ್ಮ ಪ್ರತಿಕ್ರಿಯೆ ಏನು? ಈ ಕ್ರಮದಿಂದ ಅವಶ್ಯಕತೆಗಿಂತ ಹೆಚ್ಚು ಜನ ಪ್ರಾಣ ಕಳೆದುಕೊಳ್ಳುವ ಅಪಾಯ ಇದೆಯಾ?

ಅಷ್ಟೆಲ್ಲಾ ಅಪಾಯವಿದೆ ಎಂದು ನನಗನ್ನಿಸುತ್ತಿಲ್ಲ. ಪಬ್ಲಿಕ್ ಹೆಲ್ತ್ ಏಜನ್ಸಿಯು ಪ್ರತಿಯೊಂದು ಪ್ರಾಂತ್ಯದಲ್ಲಿ ಆಸ್ಪತ್ರೆಗೆ ಸೇರುವವರು ಹಾಗೂ ಮರಣದರವನ್ನು ಕುರಿತಂತೆ ತುಂಬಾ ವಿವರವಾದ ಮಾದರಿಯನ್ನು ಬಿಡುಗಡೆ ಮಾಡಿದೆ. ನಿಜ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಆದರೆ ಅದು ಅಷ್ಟೊಂದು ಆಘಾತಕಾರಿಯಾಗಿಲ್ಲ. ನಾವು ಪಿಡುಗಿನ ಮುಂದಿನ ಹಂತಕ್ಕೆ ಹೋಗುತ್ತಿದ್ದೇವೆ. ಮುಂದಿನ ಕೆಲವು ವಾರಗಳು ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು. ಹೆಚ್ಚಿನ ಜನ ತೀವ್ರ ನಿಗಾ ಘಟಕ ಸೇರಬಹುದು. ಎಲ್ಲಾ ದೇಶಗಳಲ್ಲೂ ಹೀಗೆ ಆಗುತ್ತಿದೆ. ನಮ್ಮದೇನೂ ಭಿನ್ನವಲ್ಲ. ಯುರೋಪಿನಲ್ಲಿ ಯಾವ ದೇಶದಲ್ಲೂ ಸೋಂಕು ಹರಡುವ ದರ ಕಡಿಮೆಯಾಗಿಲ್ಲ.

ಇನ್ನು ಶಾಲೆಗಳನ್ನು ಕುರಿತು ಹೇಳುವುದಾದರೆ, ರಾಷ್ಟ್ರಾದ್ಯಂತ ಇನ್ನು ಮುಂದೆಯೂ ತೆರೆದೇ ಇರುತ್ತದೆ. ನಾವೀಗ ಈ ಸಾಂಕ್ರಾಮಿಕ ಪಿಡುಗಿನ ನಡುವಿನಲ್ಲಿದ್ದೇವೆ. ನನ್ನ ಪ್ರಕಾರ ಈ ಹಂತದಲ್ಲಿ ಶಾಲೆಗಳನ್ನು ಮುಚ್ಚುವುದರಲ್ಲಿ ಅರ್ಥವೇ ಇಲ್ಲ. ಇದು ವೈಜ್ಞಾನಿಕವಾಗಿಯೂ ಸರಿ. ಸಾಂಕ್ರಾಮಿಕ ಪಿಡುಗು ಪ್ರಾರಂಭವಾದಾಗ ಶಾಲೆಗಳನ್ನು ಮುಚ್ಚಬೇಕು. ಆಗಷ್ಟೇ ಅದು ಪರಿಣಾಮಕಾರಿಯಾಗುತ್ತದೆ. ಆದರೆ ಸ್ಟಾಕ್ ಹೋಮಿನಲ್ಲಿ ಇಂದು ಸ್ವೀಡನ್ನಿನಲ್ಲೇ ಅತಿ ಹೆಚ್ಚು ಸೋಂಕಿತರಿದ್ದಾರೆ. ಸೋಂಕಿನ ನಕ್ಷೆ ತುತ್ತು ತುದಿಯಲ್ಲಿದೆ. ಈಗ ಶಾಲೆಗಳನ್ನು ಮುಚ್ಚುವುದರಲ್ಲಿ ಯಾವ ಅರ್ಥವೂ ಇಲ್ಲ. ಯುವಕರ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ರಕ್ಷಿಸುವುದಕ್ಕೆ ಮತ್ತು ಅವರನ್ನು ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುವುದಕ್ಕೆ ಶಾಲೆಗಳು ಮುಖ್ಯವಾಗಿ ಬೇಕು.

ಸೋಂಕಿನ ಯಾವ ಲಕ್ಷಣಗಳೂ ಇಲ್ಲದ, ಆದರೆ ಸೋಂಕಿನ ವಾಹಕರಾಗಿರುವವರ ಪಾತ್ರವನ್ನು ಏಜನ್ಸಿಯು ಸಂಪೂರ್ಣವಾಗಿ ಗುರುತಿಸಿಲ್ಲ ಎಂದು ಸಂಶೋಧಕರು ಟೀಕಿಸಿದ್ದಾರೆ. ಸೋಂಕಿನ ಲಕ್ಷಣಗಳಿಲ್ಲದ ವಾಹಕರು ಸಮಸ್ಯೆಯಾಗಬಹುದು ಎಂದು ನೀವು ಭಾವಿಸುತ್ತೀರಾ?

ಲಕ್ಷಣರಹಿತತೆಯೂ ಸಾಂಕ್ರಾಮಿಕ ಆಗಬಹುದಾದ ಸಾಧ್ಯತೆಗಳಿವೆ. ಇತ್ತೀಚಿನ ಕೆಲವು ಅಧ್ಯಯನಗಳು ಅದನ್ನು ಸೂಚಿಸಿವೆ. ಆದರೆ ಸೋಂಕಿನ ಲಕ್ಷಣಗಳು ಇರುವವರಿಗೆ ಹೋಲಿಸಿದರೆ ಇಲ್ಲದವರಿಂದ ಹರಡುವಿಕೆಯ ಪ್ರಮಾಣ ಸಾಕಷ್ಟು ಕಡಿಮೆ ಇರುತ್ತದೆ. ನಾರ್ಮಲ್ ರೇಖೆಯಲ್ಲಿ ಅಂತಹವರು ಅಂಚಿನಲ್ಲಿದ್ದಾರೆ. ನಕ್ಷೆಯ ಬಹುಭಾಗವನ್ನು ಸೋಂಕಿನ ಲಕ್ಷಣ ಇರುವವರೇ ಆಕ್ರಮಿಸಿಕೊಂಡಿದ್ದಾರೆ. ನಾವು ನಿಜವಾಗಿಯೂ ನಿಯಂತ್ರಿಸಬೇಕಾದದ್ದು ಇದನ್ನು.

ನೀವು ಅಳವಡಿಸಿಕೊಂಡಿರುವ ಕಾರ್ಯಸೂಚಿ ಯಶಸ್ವಿಯಾಗಿದೆ ಎಂದು ಭಾವಿಸುತ್ತೀರಾ?

ಅದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಜೊತೆಗೆ ಇಷ್ಟು ಬೇಗ ಏನೂ ತಿಳಿಯುವುದಿಲ್ಲ. ಪ್ರತಿಯೊಂದು ದೇಶವೂ ಗುಂಪು ನಿರೋಧಕ ಶಕ್ತಿ (ಹರ್ಡ್ ಇಮ್ಯುನಿಟಿ ಎಂದರೆ ಜನಸಂಖ್ಯೆ ಬಹುಭಾಗ ಒಂದು ಸೋಂಕಿಗೆ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿರಬೇಕು. ಆಗ ಸೋಂಕು ಹರಡುವುದು ಹೆಚ್ಚು ಕಮ್ಮಿ ನಿಲ್ಲುತ್ತದೆ.)ಯ ಸ್ಥಿತಿಯನ್ನು ಒಂದಲ್ಲ ಒಂದು ರೀತಿಯಲ್ಲಿ ತಲುಪಬೇಕು. ನಾವಿದನ್ನು ಸಾಧಿಸಲು ವಿಭಿನ್ನ ರೀತಿಯಲ್ಲಿ ಪ್ರಯತ್ನಿಸುತ್ತಿದ್ದೇವೆ.
ಗುಂಪು ನಿರೋಧಕ ಶಕ್ತಿಯನ್ನು ಕುರಿತಂತೆ, ಸೋಂಕಿನ ಮರುಕಳಿಸುವಿಕೆಯ ಬಗ್ಗೆ ಯೋಚಿಸುವುದಕ್ಕೆ ಸಾಧ್ಯ ಅನ್ನುವುದಕ್ಕೆ ಹಲವು ಸೂಚನೆಗಳು ಕಾಣಿಸುತ್ತಿವೆ. ಜಗತ್ತಿನಲ್ಲಿ ಎಲ್ಲೂ ಮರು ಸೋಂಕು ಆದ ವರದಿಯಿಲ್ಲ. ಈ ಗುಂಪು ರೋಗ ನಿರೋಧಕ ಶಕ್ತಿ ಎಷ್ಟು ಕಾಲ ಉಳಿಯುತ್ತದೆ? ಗೊತ್ತಿಲ್ಲ. ಆದರೆ ರೋಗ ನಿರೋಧಕ ಪ್ರತಿಕ್ರಿಯೆ ಇರುವುದಂತು ಸತ್ಯ.

ಇದಕ್ಕಿಂತ ಭಿನ್ನವಾಗಿ ಏನಾದರೂ ಮಾಡಬಹುದಿತ್ತೆ?

ವೃದ್ಧಾಶ್ರಮಗಳ ವಿಷಯದಲ್ಲಿ ನಾವು ಸರಿಯಾಗಿ ಅಂದಾಜು ಮಾಡಲಿಲ್ಲ. ಅಲ್ಲಿ ಅಳವಡಿಸಬೇಕಾಗಿದ್ದ ಸುರಕ್ಷಾಕ್ರಮಗಳು ಇನ್ನೂ ಪರಿಣಾಮಕಾರಿಯಾಗಬೇಕಿತ್ತು. ಅದನ್ನು ಇನ್ನೂ ಹೆಚ್ಚು ಪರಿಪೂರ್ಣವಾಗಿ ನಿಯಂತ್ರಿಸಬೇಕಿತ್ತು. ಆರೋಗ್ಯ ವ್ಯವಸ್ಥೆ ನಿರಂತರವಾಗಿ ಒತ್ತಡದಲ್ಲಿದೆ. ಆದರೆ ಅದು ಸಾಕಷ್ಟು ಮುಂದಿದೆ.

ನಿಮ್ಮ ಕಾರ್ಯಸೂಚಿಯ ಬಗ್ಗೆ ನಿಮಗೆ ತೃಪ್ತಿಯಿದೆಯೇ?

ಖಂಡಿತಾ ಇದೆ! ಕೋವಿಡ್-೧೯ ವೃದ್ಧರಿಗೆ ತುಂಬಾ ಅಪಾಯಕಾರಿ ಎನ್ನುವುದು ನಮಗೀಗ ಸ್ಪಷ್ಟವಾಗಿದೆ. ಅದು ತುಂಬಾ ವಿಷಾದಕರ. ಮಹಾಮಾರಿಗಳ ಇತಿಹಾಸವನ್ನು ನೋಡಿದರೆ ಇದಕ್ಕಿಂತ ಹೆಚ್ಚು ಭಯಂಕರವಾದ ಘಟನೆಗಳು ನಡೆದಿವೆ ಅನ್ನುವುದು ಅರಿವಾಗುತ್ತದೆ. ಈಗ ನಾವು ಗಮನಿಸುತ್ತಿರುವ ಹೆಚ್ಚಿನ ಸಮಸ್ಯೆಗಳು ಕೆಲವು ಸಂದರ್ಭಗಳಲ್ಲಿ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವುದರಲ್ಲಿ ಸೋತಿರುವುದರಿಂದ ಆಗಿರುವ ಸಮಸ್ಯೆಗಳೇ ಹೊರತು ಈ ಪಿಡುಗಿನಿಂದ ಆದ ಸಮಸ್ಯೆಗಳಲ್ಲ. ವೃದ್ಧರು ಸಾಯುತ್ತಿರುವುದು ನಮ್ಮ ಮುಂದಿರುವ ಅತಿ ದೊಡ್ಡ ಸಮಸ್ಯೆ. ನಾವು ಅದರ ವಿರುದ್ಧ ಗಂಭೀರವಾಗಿ ಹೋರಾಡುತ್ತಿದ್ದೇವೆ.

ದತ್ತಾಂಶಗಳ ಪ್ರಕಾರ ಈ ವರ್ಷ ಫ್ಲೂ ಸಾಂಕ್ರಾಮಿಕ ಮತ್ತು ಚಳಿಗಾಲದ ನೋರೋವೈರಸ್ ಕಡಿಮೆಯಾಗುತ್ತಲೇ ಇದೆ. ಅಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಪದೇ ಪದೇ ಕೈತೊಳೆಯುವ ಕ್ರಮಗಳು ಫಲ ನೀಡಿವೆ. ಸ್ವೀಡನ್ನಿನ ನಾಗರಿಕರು ಓಡಾಡುವುದನ್ನು ಗಮನಾರ್ಹವಾಗಿ ಕಡಿಮೆ ಮಾಡಿದ್ದಾರೆ. ಇದನ್ನು ನಾವು ಗೂಗಲ್ಲಿನಲ್ಲಿ ಗಮನಿಸಿದ್ದೇವೆ. ನಮ್ಮ ಸ್ವಯಂನಿಯಂತ್ರಣದ ವಿಧಾನದಿಂದ ಖಂಡಿತಾ ಪರಿಣಾಮ ಅಗಿದೆ.

ಕೃಪೆ : nature.com

ಅನುವಾದ: ಟಿ. ಎಸ್. ವೇಣುಗೋಪಾಲ್

ಪ್ರತಿಕ್ರಿಯಿಸಿ